Monday 22 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೫ ( ಸೂಟು ಮಣ್ಣು ಮತ್ತಿತರ ಕತೆ)


ಏನಿದು ದುಗುಡ ಪ್ರಿಯಾ.. ಎನ್ನುವ ಮೊಬೈಲ್ ಸಂಗೀತಕ್ಕೆ ವಾಸ್ತವಕ್ಕೆ ಬಂದೆ. ಈಗ ಎಲ್ಲೆಲ್ಲೂ ಸಂಗೀತವೇ. ಮೊಬೈಲು ಬಂದಮೇಲೆ ಜಗತ್ತು ಸಣ್ಣದಾಗಿದೆ, ಸುಳ್ಳು ವ್ಯಾಪಕವಾಗಿದೆ. ಹೆಚ್ಚೇಕೆ ವಾಸ್ತವವನ್ನೇ ಹೇಳಿದರೂ ನೀನು ಸುಳ್ಳು ಹೇಳಬೇಡ ಎನ್ನುವ ಮಾತು ಕೇಳಲೇಬೇಕು. ಚಿಕ್ಕಪ್ಪ ಹೇಳಿದ ಕತೆಯೊಳಗೆ ಮುಳುಗಿದ್ದ ನನ್ನನ್ನು ಯಾವುದೋ ಅನಾಮಿಕ ಕರೆ ಅದಷ್ಟು ಆಫರುಗಳನ್ನು ಕೊಟ್ಟು ದುಡ್ಡನ್ನು ಹೀಗೆ ಬಳಸು ಎಂದು ಬೋಧನೆ ಮಾಡತೊಡಗಿತು. ಚಿಕ್ಕಪ್ಪನ ಮಾತುಗಳಿಗಾಗಿ ಕಾದೆ, ಮೊಬೈಲು ಒಳಗಿರಿಸಿ.ಚಿಕ್ಕಪ್ಪನ ಮಾತುಗಳು ನಾನೆಷ್ಟು ಬರೆದರೂ ಕಾಮನಬಿಲ್ಲನ್ನು ವರ್ಣಿಸಿದಂತೆ. ಅದೋ ನೋಡು ನೇರಳೆ ಬಣ್ಣದ ಕೆಳಗೆ ಹಳದಿ, ಇನ್ನೊಂದು ಕೆಂಪು, ಇನ್ನೊಂದು ನೇರಳೆ ಎಂದಂತೆ. ಎಲ್ಲವುಗಳನ್ನೂ ನಾನು ಹೇಳಲು ಅಸಮರ್ಥನಾದೇನು. ಕತೆಗಳೆಷ್ಟೋ ಇರಬಹುದು ಜೀವನದ ಪಯಣದಲ್ಲಿ.

ಓಯ್, ಅದೆಂತ ಹಾಡು ಮಾರಾಯ? ಎಲ್ಲಿಗೆ ಹೋದರೂ ಯಕ್ಷಗಾನದ ಹಾಡೇ?. ನಿನ್ನಪ್ಪನೂ ಯಕ್ಷಗಾನ ತುಂಬಾ ಇಷ್ಟಪಡುತ್ತಿದ್ದ ಮಾರಾಯ. ಒಂದು ಯಕ್ಷಗಾನದ ಕತೆ ಹೇಳ್ತೇನೆ ಕೇಳು. ಈ ಊರು ಇದೆಯಲ್ಲಾ ಇದು ಯಕ್ಷಗಾನಕ್ಕೆ ಹೆಸರುವಾಸಿ. ನಮ್ಮವರು ಯಾರೂ ಕುಣಿಯದಿದ್ದರೂ, ಮೇಳದಲ್ಲಿ ಇಲ್ಲದಿದ್ದರೂ ಅವನು ಇಷ್ಟು ತಪ್ಪು ಕುಣಿದ, ಎರಡು ಘಂಟೆಯ ಮೇಲೆ ಆ ಭಾಗವತರಿಗೆ ಸ್ವರವೇ ಇಲ್ಲ, ಈ ಪ್ರಸಂಗ ಬಿಟ್ಟು ಯಾವುದಾದ್ರು ಚಂದ ಮಾಡ್ತಾನೆ ಎನ್ನುವ ಹೇರಳವಾದ ವಿಮರ್ಶೆ ಕೊಡುವುದರಲ್ಲಿ ಎತ್ತಿದ ಕೈ. ಯಕ್ಷಗಾನದವರಿಗೂ ಸಂಭಾವನೆ ಊಟ ಎಲ್ಲಾ ನಮ್ಮ ಊರಲ್ಲಿ ಚೆನ್ನಾಗಿರುತ್ತಿತ್ತು. ಹಾಗಾಗಿ ವಿಮರ್ಶೆ ಜಾಸ್ತಿ ಇದ್ದರೂ ಊರಲ್ಲಿ ಯಕ್ಷಗಾನಕ್ಕೆ ಯಾರೂ ರಜೆ ಹಾಕುತ್ತಿರಲಿಲ್ಲ. ಸುಮಾರು ೧೦-೧೫ ಕಿಲೋಮೀಟರು ನಡೆದಾದರೂ ನಾನೂ ನಿನ್ನಪ್ಪನೂ ಆಟಕ್ಕೆ ಹೋಗುತ್ತಿದ್ದೆವು. ಕ್ರಮೇಣ ದೊಡ್ಡಪ್ಪ ಬರುತ್ತಿರಲಿಲ್ಲ. ನಾನೂ ನಿನ್ನಪ್ಪ ಇಬ್ಬರೇ ಹೆಚ್ಚಾಗಿ ಹೋಗುತ್ತಿದ್ದೆವು. ಹೀಗೆ ಒಂದು ಮೇಳದ ಆಟಕ್ಕೆ ನಾವು ಹೊರಟೆವು.

ಆಟದ ದಿನ ಮನೆಯಲ್ಲಿ ಊಟ ಮಾಡಿ ಹೊರಟರೆ ಮತ್ತೇನೂ ಹೊರಗಿನ ತಿಂಡಿಗಳಿಲ್ಲ. ಮೇಳದಲ್ಲಿ ಪರಿಚಯಸ್ಥರು ಇರುವುದರಿಂದ ಚೌಕಿಗೆ ಒಂದು ಭೇಟಿ. ಅವರ ಲೆಕ್ಕದಲ್ಲಿ ಒಂದು ಚಾಯ. ಹೋಗುವುದೂ ಹಾಗೆಯೇ. ತೆಂಗಿನಗರಿಯ ದೊಂದಿಯನ್ನು ಹಿಡಿದುಕೊಂಡು ಹೊರಟರೆ ಕಾಡಿನ ದಾರಿಯಾಗಿ ಸುಮಾರು ೮ ಮೈಲಿ ನಡೆಯಬೇಕು. ನಿನ್ನಪ್ಪನೂ ಭೂತ ಪಿಶಾಚಿ ಇತ್ಯಾದಿ ಭಯವಿಲ್ಲದೇ ಕತೆ ಹೇಳುತ್ತಾ ಸಾಗುತ್ತಿದ್ದ. ನಾನೂ ಅವನಷ್ಟೇ ಆಟ ನೋಡಿದ್ದರೂ ಸುಬ್ಬಣ್ಣನ ಭೀಮನೋ, ತಿಮ್ಮಣ್ಣನ ಕೃಷ್ಣನೋ ನಿನ್ನಪ್ಪನೇ ಆಗಿ ವಿಜೃಂಭಿಸಿ ಬಿಡುತ್ತಿದ್ದ. ನನಗೂ ೮ ಮೈಲಿ ನಡೆಯುವ ಅರಿವೇ ಆಗುತ್ತಿರಲಿಲ್ಲ

ಹೀಗೇ ಆಗಿರಬಹುದು ಎನ್ನುವ ಕತೆಗಳು ತುಂಬಾ ಇವೆ, ಉದಾಹರಣೆಗೆ ನಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ತಿಮ್ಮಪ್ಪ ಹೇಳುತ್ತಿದ್ದ ಕೊಳ್ಳಿದೆವ್ವಗಳ ಕತೆಗೂ ಒಂದು ತಾರ್ಕಿಕವಾದ ಗ್ಯಾರಂಟೀ ಎನ್ನುವಂತೆ ಕಾರಣ ತಿಳಿಸಿದ್ದ. ತಿಮ್ಮಪ್ಪನ ಮನೆ ನಮ್ಮ ಮನೆಯ ಮೇಲೆ ಅಂದರೆ ಕಾಡಿನ ದಾರಿಯೂ ಮಣ್ಣಿನ ರೋಡೂ ಸೇರುವ ದಾರಿಯ ಅಂಚಿನಲ್ಲೇ ಇತ್ತು. ಯಾವುದೋ ದಿನ ಅವನು ರಾತ್ರಿ ಹನ್ನೆರಡು ಗಂಟೆಗೆ ಬೆಂಕಿ ನೋಡಿದನಂತೆ. ಒಂದಿದ್ದದ್ದು ಎರಡಾದಂತೆ ಎರಡು ನಾಲ್ಕಾದಂತೆ ಹೀಗೇ. ಅದೇ ಹೆದರಿಕೆಯಲ್ಲಿ ಅಪ್ಪನಲ್ಲೂ ಹೇಳಿದ್ದ. ಹೀಗೇ ಸ್ವಲ್ಪ ದಿನಗಳು ಸರಿದಂತೆ ಇದು ಪುನರಾವರ್ತನೆಯಾಯಿತು. ಆಗ ನಿಜವಾಗಿಯೂ ಭಯಭೀತನಾದ ತಿಮ್ಮಪ್ಪ. ಏನು ಮಾಡುವುದು ಎಂದು ಇದ್ದವರನ್ನೆಲ್ಲಾ ಕೇಳುತ್ತಿದ್ದ. ಏನು ಮಾಡಿದ ಗೊತ್ತಿಲ್ಲ. ಆದರೆ ನಿನ್ನಪ್ಪ ಅದನ್ನೆಲ್ಲಾ ಅಲ್ಲಗಳೆಯುತ್ತಿದ್ದ.

ಆಟಕ್ಕೆ ಹೋಗುತ್ತಿರಬೇಕಾದರೆ ಹೀಗೆ ಹೇಳಿದ. ಈ ದೊಂದಿಯ ಬೆಳಕಿನಲ್ಲಿ ಹೋಗುವಾಗ ಒಬ್ಬ ಇನ್ನೊಬ್ಬನಿಗೆ ದೊಂದಿ ಹಚ್ಚಲು ನೆರವಾಗುತ್ತಿದ್ದ. ಎಲ್ಲಿಂದಲೋ ಗುಂಪಾಗಿ ಬಂದು ನಂತರ ತಮ್ಮ ತಮ್ಮ ಹಾದಿ ಹಿಡಿಯುವವರು ಒಂದು ದೊಂದಿಯಿಂದ ಹಚ್ಚಿಕೊಳ್ಳುವ ಬೆಂಕಿಗೆ ದೂರದಲ್ಲಿ ನೋಡಿದ ಇಂತಹ ಜನರು ಕೊಟ್ಟ ವಿಪರೀತ ಅರ್ಥ ಇದು ಎಂದು ನನಗೆ ಹೇಳಿದ. ಮತ್ತೆ ನಾನೂ ಕೊಳ್ಳಿದೆವ್ವವಾಗಲಿ ಪಿಶಾಚಿಯಾಗಲಿ ನೋಡಿದ್ದಿಲ್ಲ. ಆದರೆ ನಿನ್ನಪ್ಪನಿಗೆ ವಾಸ್ತವದಲ್ಲಿ ಹೆದರಿಕೆಯೂ ಇರಲಿಲ್ಲ ಎನಿಸುತ್ತದೆ. ನನಗೆ ಆ ಹೆದರಿಕೆ ಇತ್ತು.

ಅಂದಿನ ಆಟಕ್ಕೆ ಹೋದೆವು. ಆಟ ಚೆನ್ನಾಗಿರಲಿಲ್ಲ. ಪ್ರಮುಖರು ಕೈಕೊಟ್ಟಿದ್ದರು. ನಮ್ಮ ಊರಾದರೆ ಬರುತ್ತಿದ್ದರು ಎಲ್ಲ ಕಲಾವಿದರು. ಜನರೂ ಅಷ್ಟಾಗಿ ಇರಲಿಲ್ಲ. ಹನ್ನೆರಡು ಘಂಟೆಯ ಹೊತ್ತಿಗೆ ವಾಪಸ್ಸು ಹೊರಡೋಣ ಎಂದು ಇಬ್ಬರೂ ಹೊರಟೆವು. ದೊಂದಿ ಹಚ್ಚಿಕೊಳ್ಳಲಿಲ್ಲ. ಮನೆಗೆ ಬೇಗ ಬರುವಂತೆಯೂ ಇಲ್ಲ. ಸುಮಾರು ೪-೫ ಘಂಟೆ ಆಗದೇ ಮನೆಗೆ ಬಂದರೆ ನೀವು ಇನ್ನು ಯಕ್ಷಗಾನಕ್ಕೆ ಹೋಗುವುದೇ ಬೇಡ ಎಂಬ ತೀರ್ಮಾನವೂ ಆದೀತು. ನಡೆಯುತ್ತಾ ನಡೆಯುತ್ತಾ ಬಂದು ಸುಮಾರು ಮನೆಗೆ ೨ ಕಿಲೋಮೀಟರ್ ದೂರದ ವರೆಗೆ ತಲುಪಿದೆವು. ಅಲ್ಲಿ ಸ್ವಲ್ಪ ಮಲಗುವುದು. ಬೆಳಕು ಬಂದಂತೆ ಮನೆಗೆ ಹೋಗುವುದೆಂದು ತೀರ್ಮಾನ ಮಾಡಿ ಅಲ್ಲಿಯೇ ಇದ್ದ ಬಂಡೆಯ ಮೇಲೆ ನಿದ್ದೆ ಮಾಡುವುದಕ್ಕೆ ಸಿದ್ಧತೆ ಮಾಡಿದೆವು.

ನಿದ್ದೆ ಬರುವಂತಾಗುತ್ತಿತ್ತು, ಹಾಗೇ ಎಚ್ಚರಾಗುತ್ತಿತ್ತು. ಕ್ರಮೇಣ ಒಂದು ಕೀಚಲು ಧ್ವನಿ ಇಬ್ಬರನ್ನೂ ಗಾಬರಿಗೊಳಿಸಿತು. ಅದೇನೋ ಕೀಚ್ ಕೀಚ್ ಎಂದಂತೆ, ಯಾರೋ ನಡೆದಂತೆ, ಗೆಜ್ಜೆಯಂತೆ ಕೇಳತೊಡಗಿತು. ನನಗೆ ಅತೀವ ಹೆದರಿಕೆಯಾಗತೊಡಗಿತು. ಬಹುಷಃ ನಿನ್ನಪ್ಪನಿಗೂ, ಆದರೆ ತೋರ್ಪಡಿಸುವದಕ್ಕೆ ಆಗದೆ ಸುಮ್ಮನಿದ್ದ. ಆದರೂ ಒಂದು ಹುಚ್ಚು ಧೈರ್ಯದಲ್ಲಿ ಶಬ್ಧ ಬಂದ ಕಡೆ ಕಲ್ಲನ್ನೆಸೆದ. ಸ್ವಲ್ಪ ಕಡಿಮೆಯಾಯಿತು. ಕೊನೆಗೆ ಶಬ್ಧವಾದಂತೆಲ್ಲಾ ಕಲ್ಲೆಸೆಯುವುದು ಮಜಾ ಕೊಡುತ್ತಿತ್ತು. ಮರುದಿನ, ತನಿಖೆ ಮಾಡಿ, ಈಚಲ ಮರದಲ್ಲಿ ಕಟ್ಟಿದ್ದ ಗೂಬೆಯ ಮರಿಗಳೆಂದು ಕೂಡ ಅಣ್ಣನೇ ಹೇಳಿದ.

ನೀನು ಇದನ್ನು ಮಾಡಲಾರೆ, ಸಣ್ಣವ ಇತ್ಯಾದಿ ಮಾತುಗಳು ಕೆಲವು ಸಲ ಋಣಾತ್ಮಕವಾದರೂ ಧೈರ್ಯವಿದ್ದವನಿಗೆ ಅತ್ಯಂತ ಪ್ರೇರಣೆಯನ್ನೇ ಕೊಡುತ್ತದೆ. ನಾವು ಸಣ್ಣವರಿದ್ದಾಗ ಇಂತಹ ಮಾತುಗಳಲ್ಲೇ ನಾವು ನಮ್ಮ ಮುಂದಿನ ಬಗೆಯನ್ನು ಕಂಡೆವು. ಮರಕ್ಕೆ ಹತ್ತಲಾರ ಇವನು ಎಂದು ಹೇಳುವ ಅಪ್ಪನ ಮಾತಿಗೆ ನಿನ್ನಪ್ಪ ಮರ ಹತ್ತುವುದಕ್ಕೆ ಕಲಿತ. ನಿನ್ನಿಂದಾಗುವುದಿಲ್ಲ ಬಿಡೋ ಎಂದು ಹೇಳಿದ ಹೆಚ್ಚಿನ ಕೆಲಸವನ್ನು ನಿನ್ನಪ್ಪ ಮಾಡುತ್ತಿದ್ದುದರಿಂದಲೋ ಏನೋ ನಮ್ಮಲ್ಲೇ ಆತನಿಗೆ ವಿಶೇಷ ಗೌರವ ಸಿಗುತ್ತಿದ್ದುದು.

ಇನ್ನು ನಿದ್ದೆ ಬರುವಂತಿಲ್ಲ. ಸುಮ್ಮನೇ ನಡೆಯೋಣವೆಂದು ಮೆಲ್ಲನೆ ನಡೆಯುತ್ತಾ ಬಂದೆವು. ನಾವು ಅಂದು ಮಾಡಿದ ಒಂದು ತಪ್ಪೆಂದರೆ ದೊಂದಿಯನ್ನು ಹಚ್ಚದೇ ಅಲ್ಲಿಯೇ ಎಸೆದು ಬಂದಿರುವಂತಹದ್ದು. ಸುಮಾರು ೧ ಕಿಲೋಮೀಟರಿನಷ್ಟು ಹಾದಿಯನ್ನು ಕಾಡಿನ ಕಪ್ಪಿನ ಮಧ್ಯೆ ನಡೆಯಬೇಕಿತ್ತು. ಉಳಿದ ದಾರಿಯಾದರೋ ಚಂದ್ರನ ಬೆಳಕಿಗೆ ಸಾಮಾನ್ಯವೆಂಬಂತೆ ಕಾಣಿಸುತ್ತಿತ್ತು. ಏನಾದರಾಗಲಿ ಎಂದು ಕಾಡಿನ ದಾರಿ ಇಳಿಯುತ್ತಾ ಬಂದೆವು. ದನಗಳು ಮಾಡಿರುವ ದಾರಿಯದು. ಹೀಗೇ ಮುಂದುವರೆಯುತ್ತಾ ಬಾಬು ಸೋಜರ ಮನೆಯ ಮೇಲಿನ ದಾರಿಯವರೆಗೆ ತಲುಪಿದಾಗ ಬಾಬು ಸೋಜರ ಮನೆಯ ಬಳಿ ಬೆಂಕಿ ಕಂಡಂತಾಯಿತು.

ನಮ್ಮಲ್ಲಿ ಮೊದಲು ತೋಟಕ್ಕೆ ಹಾಕಲು ಬೂದಿಗಾಗಿ ಹೊಲದ ಮಧ್ಯದಲ್ಲಿ ಕಸದ/ಗೊಬ್ಬರದ ದೊಡ್ಡ ರಾಶಿಯನ್ನು ಮಾಡಿ ಅದಕ್ಕೆ ಬೆಂಕಿ ಕೊಡುತ್ತಿದ್ದರು. ಅದನ್ನೂ ಬಹಳ ಒಪ್ಪವಾಗಿ ಮಾಡುತ್ತಿದ್ದರು. ಎಲ್ಲಾ ಸಣ್ಣ ಪೊದೆಗಳನ್ನು ಕಡಿದು, ತರಗೆಲೆಗಳನ್ನು ಪೇರಿಸಿ, ಗೊಬ್ಬರ ಒಣಗಿದ್ದಲ್ಲಿ ಅದನ್ನೂ ಅದೇ ರಾಶಿಗೆ ಹಾಕಿ ಅದರ ಮೇಲೆ ಮಣ್ಣನ್ನು ಹಾಕಿ ಅದಕ್ಕೆ ಬೆಂಕಿ ಕೊಡುತ್ತಿದ್ದರು. ಸೂಟುಮಣ್ಣು ಎನ್ನುತ್ತಾರೆ ಅದನ್ನು. ನಿನಗೂ ಗೊತ್ತಿರಬಹುದು. ಆದರೆ ನಾವು ಹಾಕುತ್ತಿದ್ದ ಸೂಟುಮಣ್ಣಿನ ಬೆಂಕಿ ಸುಮಾರು ದಿನಗಳವರೆಗೆ ಅಂದರೆ ವಾರಗಟ್ಟಲೇ ಉರಿಯುತ್ತಿತ್ತು.

ಇದೇ ರೀತಿಯ ಬೆಂಕಿಯಾಗಿರಬಹುದು ಎಂದು ನಾವು ಅಂದಾಜಿಸಿದರೂ ಅದರಲ್ಲೇನೋ ಕೌತುಕವಿದೆ ಎಂದು ಬಾಬು ಸೋಜರ ಹೊಲದ ಬಳಿ ಬಂದೆವು. ಹತ್ತಿರಕ್ಕೆ ಬಂದು ನೋಡಿದಾಗ ಆ ಸೂಟುಮಣ್ಣಿನ ರಾಶಿ ಬಿದ್ದಂತಿತ್ತು. ಬೆಂಕಿ ಎಲ್ಲಾ ಕಡೆ ಚಲ್ಲಾಪಿಲ್ಲಿಯಾಗಿತ್ತು. ಸೂಟುಮಣ್ಣಿಗೆ ಸುತ್ತ ಬಂದಾಗ ಅಲ್ಲಿ ಬಿದ್ದಿದ್ದ ಬಾಬು ಸೋಜರನ್ನು ಕಂಡೆವು.

ನಮಗೆ ಆತಂಕವಾಯಿತು. ಸುಟ್ಟ ಗಾಯಗಳಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದ ಬಾಬು ಸೋಜರನ್ನು ಎಳೆದು ಹಾಕಿದೆವು. ನಂತರ ತೋಟದ ಬದಿಯ ಸುರಂಗದ ವರೆಗೆ ಹೋಗಿ ನೀರು ತಂದು ಚಿಮುಕಿಸಿದೆವು. ನರಳುತ್ತಾ ಬಾಬುಸೋಜರು ಎದ್ದು ಕುಳಿತು ನಮ್ಮನ್ನು ಗುರುತಿಸಿದರು. ಗುರುತಿಸಿದ ಕೂಡಲೇ ತಲೆಕೆಳಗೆ ಮಾಡಿ ನಿಮಗೆ ಇಲ್ಲೇನು ಕೆಲಸ? ಮನೆಗೆ ಹೋಗಿ. ನೀವು ಯಾಕೆ ಈ ಅಪರಾತ್ರಿಗೆ ಇಲ್ಲಿಗೆ ಬಂದಿರಿ ಎಂದು ನಮ್ಮನ್ನೇ ಗದರಿಸಿ ಓಡಿಸಿದರು. ನಾವು ಅಲ್ಲಿಂದ ನೇರ ಮನೆಗೆ ಬಂದು ಜಗಲಿಯಲ್ಲೇ ಮಲಗಿದೆವು. ನಿದ್ದೆಯ ಬದಲು ಏನಕ್ಕೆ ಬಾಬು ಸೋಜರು ಬೆಂಕಿಗೆ ಬಿದ್ದರು ಎಂದೇ ಯೋಚಿಸುತ್ತಾ ಬೇರೆ ಬೇರೆ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದೆವು.

ಸುಮಾರು ಒಂದು ವಾರದ ಬಳಿಕ ನಿನ್ನಪ್ಪ ನನ್ನಲ್ಲಿ ಈ ಕತೆ ಹೇಳಿದ. ಆ ದಿನ ಬಾಬು ಸೋಜರು ಮನೆಯಲ್ಲೇ ಮಾಡಿದ್ದ ಗೇರುಹಣ್ಣಿನ ಸಾರಾಯಿಯನ್ನು ಕಂಠಪೂರ್ತಿ ಕುಡಿದಿದ್ದರಂತೆ. ಮನೆಯಲ್ಲಿ ನಿದ್ದೆ ಬಾರದೇ ಹೊರಳಾಡಿ ಹೊಲದ ಬಳಿ ಬಂದರಂತೆ. ಸೂಟುಮಣ್ಣಿನ ಬೆಂಕಿಯ ಜೊತೆ ಆಟವಾಡುತ್ತಾ ಅದೇನೋ ಹಿಡಿದು ಎಳೆದರಂತೆ. ಆಗ ಇಡೀ ಸೂಟುಮಣ್ಣಿನ ಗುಡ್ಡವೇ ಜಾರಿ ಬಿದ್ದಿತು. ಆ ಬೆಂಕಿಯ ಕಾವಿಗೆ ಒಮ್ಮೆಲೇ ಪ್ರಜ್ಞೆ ತಪ್ಪಿ ಅಲ್ಲಿಯೇ ಬಿದ್ದರು. ಪುಣ್ಯಕ್ಕೆ ಸ್ವಲ್ಪ ಹೊರಗೆ ಬಿದ್ದಿದ್ದರಿಂದ ಮತ್ತೆ ಬೆಂಕಿ ಆ ಭಾಗದಲ್ಲಿ ಹರಡದೇ ಇದ್ದುದರಿಂದ ಏನೂ ದೊಡ್ಡ ಗಾಯಗಳಾಗದೇ ಬದುಕಿದರು. ನೀವೆಲ್ಲಾದರೂ ಅವರನ್ನು ಮನೆಗೆ ತಲುಪಿಸುವುದು ಅಥವಾ ಇನ್ನೊಂದು ಮಾಡುವುದು ಏನಾದರೂ ನಿಮ್ಮ ಮನೆಯವರಿಗೆ ತಿಳಿದರೆ ಎಂಬ ಉದ್ದೇಶದಿಂದ ಗದರಿ ಕಳುಹಿದರು.

ಹೀಗೆ ನಮ್ಮ ಸಹಾಯಕ್ಕೆ, ಬಾಬು ಸೋಜರನ್ನು ಬೆಂಕಿಯಿಂದ ಪಾರುಮಾಡಿದ್ದೇವೆ ಎನ್ನುವ ಅಭಿಮಾನಕ್ಕೆ ಸೋಲಾಗಲಿಲ್ಲ. ಆದರೂ ಬಾಬು ಸೋಜರು ಮೊದಲಿನಂತೆಯೇ ನಮ್ಮ ಜೊತೆ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ದರು. ನಾವು ಏನೋ ಮಾಡಿದ್ದೇವೆ ಎನ್ನುವ ನಮ್ಮ ಹೆಮ್ಮೆಗೆ ಸೊಪ್ಪು ಹಾಕುತ್ತಿಲ್ಲವೆಂದು ನಮಗೆ ಬೇಸರವಿತ್ತು. ಇದೆ.

(* ಸೂಟು ಮಣ್ಣು : ದಕ್ಷಿಣ ಕನ್ನಡ, ತುಳುವರು ಬಳಸುವ ಪದ. ಸೂ=ಬೆಂಕಿ, ಬೆಂಕಿಯಲ್ಲಿ ಮಣ್ಣು ಸುಡುವುದು ಎಂದು)

4 comments:

  1. ಹ್ಮ್.. ಏನೋ ಹೇಳಕ್ಕೆ ಹೋಗಿ ಏನೋ ಹೇಳ್ದಾಂಗಿದ್ದು :-|

    ReplyDelete
  2. ಕಥೆ ಚೊಲೊ ಇದ್ದು...
    ಭೂತ ಎಲ್ಲೊತು?
    ಸ್ವಲ್ಪ ಕನ್ಫ್ಯುಸ್..ಭೂತಗಳು...

    ReplyDelete
  3. ಭೂತ ಎಲ್ಲೋಯ್ತು ಮಾರಾಯ್ರೇ?

    ಗೇರುಹಣ್ಣಿನ ಸಾರಾಯಿ ರುಚಿ ಹೆಂಗಿರ್ತದೆ?

    ReplyDelete
  4. ee sali appachchi sama kathe helidnilyaku Kinnange.. :P

    ReplyDelete