Tuesday 15 November 2011

ವಿಶ್ವ ಸಹನಾ ದಿನಾಚರಣೆ - World tolerance Day.


ವಿಶ್ವ ತಾಳುವಿಕೆಯ ದಿನಾಚರಣೆಯಂತೆ ಇಂದು. (World tolerance day). ಹ್ಹ ಹ್ಹ, ಇದನ್ನು ಆಚರಣೆ  ಅಂತ ಪ್ರಾರಂಭ ಮಾಡಿದವನಿಗೆ ತಾಳ್ಮೆಯಿರಬೇಕು.
ತಾಳು ಅನ್ನೋದಕ್ಕೆ ಏನೆಲ್ಲಾ ಅರ್ಥ ಇದೆ. ಹೊರು , ಸೈರಿಸು, ಸಹನೆ ಎಂದೆಲ್ಲಾ ಅರ್ಥೈಸಿಕೊಳ್ಳಬಹುದು. ತಾಳಿಕೊಳ್ಳುವುದು (ತಾಳಿ ಅಂದರೆ ಮಂಗಳಸೂತ್ರ ಅಲ್ಲ!) ಅಷ್ಟು ಸುಲಭವೇ? ಭೂಮಿ ನಮ್ಮನ್ನೆಲ್ಲಾ ತಾಳಿಕೊಂಡಿದ್ದಾಳೆ ಎಂದು ಭೂಮಿಯ ಬಗ್ಗೆ ಅಭಿಮಾನ ಹೊಂದಿದ್ದೇವೆ. ಸಮಾಜವೂ ನಮ್ಮನ್ನ ತಾಳಿಕೊಂಡಿದೆ. ಈಗ ಮುಖ್ಯ ವಿಷಯಕ್ಕೆ ಬರೋಣ. ಆಚರಣೆಯ ಉದ್ದೇಶ ಏನು ?

ಈ ಆಚರಣೆ ಶುರುವಾಗಿದ್ದು ೧೯೯೫ರಲ್ಲಿ. ಮುಖ್ಯವಾಗಿ ಸಹನೆ ಎನ್ನುವ ವಸ್ತು ಚರ್ಚಿತವಾಗಿದ್ದು ಹಿಂಸೆ ಎನ್ನುವುದಕ್ಕೆ ವಿರೋಧವಾಗಿ. ಸಹನೆ ಇದ್ದರೆ ಹಿಂಸೆ ಇಲ್ಲ ಎನ್ನುವ ವಿಚಾರದಿಂದ ಈ ಸಹನೆಗೂ ಒಂದು ದಿನ ಪ್ರಾರಂಭವಾಯಿತು. ಯುನೆಸ್ಕೋದ ಪ್ರೇರಣೆಯಿಂದ ಅಮೇರಿಕಾದಲ್ಲಿ ಈ ಆಚರಣೆಗೆ ಅಡಿಗಲ್ಲು.

ಬೇರೆ ಬೇರೆ ಸಂಸ್ಕೃತಿಗಳನ್ನು ಆಚರಣೆಗಳನ್ನು ಒಪ್ಪುವುದು ಅಥವಾ ಅದರ ಪಾಡಿಗೆ ಅದನ್ನ ಬಿಡುವುದು (ಒಪ್ಪಲಾಗದಿದ್ದಲ್ಲಿ) ತುಂಬಾ ಮುಖ್ಯ. ಬೇರೆ ಬೇರೆ ಜಾತಿಗಳು, ಆಚರಣೆಗಳು, ಪದ್ಧತಿಗಳು ಎಲ್ಲವನ್ನೂ ಟೀಕಿಸುವ ಗುಣ ಇರುವ ನಮ್ಮ ಮಧ್ಯೆ ಇಂತಹ ಆಚರಣೆಗೊಂದು ಪ್ರಾಮುಖ್ಯತೆ ಕೊಡಲೇಬೇಕು. ಆಚರಣೆ ದಿನಕ್ಕೆ ಮಾತ್ರ ಸೀಮಿತವಾಗದೇ ಸಹನಾಗುಣವನ್ನು ಬೆಳೆಸಿಕೊಂಡಲ್ಲಿ ತುಂಬಾ ಸಂಘರ್ಷಗಳನ್ನ ತಪ್ಪಿಸಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ , ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ,ತಾಳುವಿಕೆಗಿಂತ ಅನ್ಯ ತಪವು ಇಲ್ಲ. ಎನ್ನುವುದು ದಾಸವಾಣಿ. ಇಲ್ಲಿಯೂ ತಾಳುವಿಕೆ ಪ್ರಧಾನ.

ತ್ರಿಶಂಕುವಿನ ಕಥೆ ಗೊತ್ತೇ? ೯೯ ಯಾಗಗಳನ್ನು ಮಾಡಿದ ಆತ ಸಶರೀರನಾಗಿ ಸ್ವರ್ಗವನ್ನು ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ. ೧೦೦ನೇ ಯಾಗವನ್ನು ನಡೆಸಲು ವಶಿಷ್ಠರನ್ನು ಕಾಣಲು ಹೋದಾಗ ವಶಿಷ್ಠರಿರಲಿಲ್ಲ ಅಲ್ಲಿ. ವಶಿಷ್ಠರಂತೆಯೇ ಸಮರ್ಥರಾದ ವಶಿಷ್ಠರ ಮಕ್ಕಳು (ವಾಶಿಷ್ಠರು) ಇವನ ಯಾಗದ ಆಸೆಗೆ "ನಿನಗೆ ಯೋಗವಿಲ್ಲ " ಎಂದರು. ಕುಪಿತಗೊಂಡ ತ್ರಿಶಂಕು ಅವರನ್ನ ಹೀಯಾಳಿಸಿದ. ಕಡೆಗೆ ಚಾಂಡಾಲತ್ವದ ಶಾಪವನ್ನು ಪಡೆದ. ಮುಂದೆ ವಿಶ್ವಾಮಿತ್ರರ ಸಹಾಯದಿಂದ ವಿಚಿತ್ರಸ್ವರ್ಗವನ್ನೇನೋ ಪಡೆದ. ಒಂದುವೇಳೆ ಸಹನೆಯಿಂದ ಇರುತ್ತಿದ್ದರೆ ತ್ರಿಶಂಕು ?

ಪುರಾಣದಲ್ಲಿ, ವಾಸ್ತವದಲ್ಲಿ ಇಂತಹಾ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾರೋ ಹೇಳಿ, ಏನೋ ಓದಿ ಸಹನೆ ಬರುವಂತದ್ದಲ್ಲ. ಅವರವರ ಚಿಂತನೆಯಿಂದಲೇ ಬರಬೇಕು ಅಲ್ಲವೇ.. ಏನಂತೀರಿ.

ಇಷ್ಟನ್ನು ಓದಿದ ನಿಮ್ಮ ಸಹನೆಯನ್ನು ಇನ್ನು ಪರೀಕ್ಷಿಸುವುದಿಲ್ಲ.. :) :) ಶುಭಾಶಯಗಳು..

Sunday 13 November 2011

ಮಕ್ಕಳ ದಿನಾ+ಆಚರಣೆ !!

ಮೊದಲು ಮಕ್ಕಳಿಗೆ ಶುಭಾಶಯಗಳು.. ಮತ್ತೆ ದೊಡ್ಡವರಿಗೆ ಶುಭಾಶಯಗಳು.

ಮತ್ತೆ ಮಕ್ಕಳ ದಿನಾಚರಣೆ ಅಂತ ಬೇಕೇ.. ಮಕ್ಕಳಿಗೆ ದಿನಾ ಆಚರಣೆ. ಎಲ್ಲೆಂದರಲ್ಲಿ ಹಾಡುವ, ಓಡುವ, ಜಗಳವಾಡುವ, ಪ್ರೀತಿಸುವ, ಒಂದಾಗುವ, ಕಲಿಯುವ , ಬೆರೆಯುವ ಆಸಕ್ತಿ ಮತ್ತು ಸಮಯ ಸಹಾಯ ಮಕ್ಕಳಿಗಲ್ಲದೆ ಬೇರೆಯವರಿಗುಂಟೇ?

ಚಾಚಾ ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನ ಆಚರಿಸೋದು ಹೌದು. ಆದರೆ ನಮ್ಮ ಕನ್ನಡ ಮಕ್ಕಳು ಯಾವತ್ತೂ ನೆನಪಿಸಿಕೊಳ್ಳಬೇಕಾದ ಇಬ್ಬರು ಸಾಹಿತಿಗಳು ರಾಜರತ್ನಂ ಮತ್ತೆ ದಿನಕರ ದೇಸಾಯಿ.

ಕುಟುಕುವ ಚುಟುಕಗಳಿಂದ ಹೆಸರುವಾಸಿಯಾದ ದಿನಕರ ದೇಸಾಯಿಯವರ ಘಂಟೆಯ ನೆಂಟನೆ ಓ ಗಡಿಯಾರ ಹಾಡನ್ನು ಕೇಳದ ಮಕ್ಕಳಿರಲಿಲ್ಲ.. ಈಗ ಯೆಲ್ಲೋ ಯೆಲ್ಲೋ ಡರ್ಟಿ ಫೆಲ್ಲೋ ಎಂದೊದರಿದರೂ ಮೊದಲು ನಮಗೆ ತುಂಬಾ ಆಪ್ಯಾಯಮಾನವಾಗಿದ್ದ ಹಾಡು. ಇದೊಂದೇ ಅಲ್ಲದೆ ತುಂಬಾ ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಗೀತೆಗಳು , ಶಿಶುಕವನ ಸಂಕಲನಗಳನ್ನು ಮಕ್ಕಳಿಗೋಸ್ಕರ ಪ್ರಕಟಿಸಿದ್ದಾರೆ.
ಮಕ್ಕಳು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅಪ್ಪ ಅಮ್ಮ ಕೊಂಡು ಮಕ್ಕಳಿಗೆ ಕೊಡಿಸಬೇಕು ಅಷ್ಟೇ..

ಕುಡುಕ ರತ್ನನಿಂದಾಗಿ ಹೆಸರುವಾಸಿಯಾದ ಇನ್ನೊಬ್ಬ ಕವಿ ರಾಜರತ್ನಂ. ರತ್ನನ ಪದಗಳು, ನಾಗನ ಪದಗಳು ಮಕ್ಕಳಿಗಲ್ಲ ಬಿಡಿ, ದೊಡ್ಡವರಿಗೂ ಒಂದೇ ಬಾರಿ ಓದಬೇಕಾದಲ್ಲಿ ಒಮ್ಮೆ ಬಾರಿಗೆ ಹೋಗಿ ಬರಬೇಕು.
ಆದರೆ ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಇಂತಹ ಹಾಡುಗಳನ್ನೆಲ್ಲ ಎಷ್ಟು ಬಾರಿ ಆನಂದದಿಂದ ಮಕ್ಕಳು ಹಾಡುವುದನ್ನ ನೋಡಿದ್ದೇವೆ!. ತುತ್ತೂರಿ, ಕಂದನ ಕಾವ್ಯ ಎನ್ನುವಂತಹದ್ದನ್ನ ಮಕ್ಕಳಿಗಾಗಿ ಕೊಟ್ಟ ಕವಿ.

ಇವರಿಬ್ಬರನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ನೆನಪು ಮಾಡಿಕೊಂಡಿದ್ದೇನೆ. ನಾನೂ ಮಗುವೇ ಆದ್ದರಿಂದ. .. ಮಕ್ಕಳಿಗೊಂದು ಕವಿಗಳಿಗೆರಡು ಜೈ ಹೋ...

ಮತ್ತೆ ಮಕ್ಕಳಿಗೆ ಒಂದು ಹಾಡು..

ಚಿಕ್ಕ ಚಿಕ್ಕ ಮಕ್ಕಳೆಲ್ಲ ಬನ್ನಿರೀ ಬದಿ
ಚೊಕ್ಕವಾದ ಆಟಗಳನು ಆಡಿ ಚಂದದಿ

ದೊಡ್ಡ ದೊಡ್ಡ ಚೆಂಡು ದಾಂಡು ಕೈಯ್ಯಲೇತಕೆ
ಗುಡ್ಡ ಬೆಟ್ಟ ಹತ್ತಿ ಇಳಿವ ಯಾಕೆ ನಾಚಿಕೆ ?

ಎದ್ದು ಬಿದ್ದು ನಗುವ ಸದ್ದು ಮಾಡಿರೆಲ್ಲರೂ
ಹದ್ದು ಕಾಗೆ ಗುಬ್ಬಿ ಮೊಲವ ನೋಡಿರೆಲ್ಲರೂ

ಹರಿವ ನೀರು ಬೆಳೆವ ಪೈರು ನಮ್ಮ ನಾಡಿಗೆ
ಬಿರಿವ ಮನಸು ನಮ್ಮದೆನುತ ಮರಳಿ ಗೂಡಿಗೆ.

ಶುಭಾಶಯಗಳು..

Monday 7 November 2011

ಗೋಪ ಗೃಹಿಣೀ ನ್ಯಾಯ


ಹತ್ಪಾ ನೃಪಂ ಪತಿಮವಾಪ್ಯ ಭುಜಂಗದಷ್ಟಂ
ದೇಶಾಂತರೇ ವಿಧಿವಷಾತ್ ಗಣಿಕಾಸ್ಮಿ ಜಾತಾ
ಪುತ್ರಂ ಸ್ವಕಂ ಸಮಧಿಗಮ್ಯ ಚಿತಾಂ ಪ್ರವಿಷ್ಟಾ
ಶೋಚಾಮಿ ಗೋಪಗೃಹಿಣೀ ಕಥಮದ್ಯ ತಕ್ರಂ

ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು.  ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು . ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನ ಕೈಗೊಂಡಳು.

ಈಡಿಪಸ್ಸಿನಂತೆ , ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು.ಅನಂತರ ತಾಯಿ ಮಕ್ಕಳೆಂದು ಅರಿತೊಡನೆ , ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.
ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ
ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು.

ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ , ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು.

ತನ್ನ ಕೆಟ್ಟನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ.
ಇದನ್ನು "ನ್ಯಾಯ"ದಲ್ಲಿ ಗೋಪ ಗೃಹಿಣೀ ನ್ಯಾಯ ಎನ್ನುತ್ತಾರೆ. ಅಧ್ಬುತ ಕಥೆ ಅಲ್ಲವೇ ?