Tuesday 18 September 2012

ಎರಡು ಮಾತುಗಳು.


ಎರಡು ಮಾತುಗಳು.
೧.
ಅವಳು ಹಾಗೆಯೇ
ಉಳಿದ ಲಿಪ್’ಸ್ಟಿಕ್ಕನ್ನ ಸೀಟಿಗೊರೆಸಿದಳು.
ಸಣ್ಣ ಪೋರ ಮಗು,
ಸೀಟಿನಿಂದ ತೆಗೆದು ಮುಖಕ್ಕೆ ಹಚ್ಚಿಕೊಂಡ!
ಅವಳು ಪುಟ್ಟನ ಮುಖವನ್ನು ಶಾಲಿನಿಂದ ಒರೆಸಿದಳು."

೨.
ಇನ್ನೂ ಹನ್ನೆರಡರ ಪೋರ
ಹೋಟೆಲೊಂದರಲ್ಲಿ
"ಇಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ" ಎಂಬ
ಬೋರ್ಡಿಗೆ
ಮೊಳೆ ಹೊಡೆಯುತ್ತಿದ್ದ.
ನಾನು ನೋಡಿದೆ.
ಹೋಟೆಲ್ ಮಾಲೀಕನೂ ನೋಡುತ್ತಿದ್ದ."

ರಂಗಮ್ಮನ ಚೌತಿ.


ರಂಗಮ್ಮ ವಾರವಿಡೀ ಕಾಂಕ್ರೀಟು ಕೆಲಸ, ಇನ್ನಿಲ್ಲದ ಕೂಲಿ ಮಾಡುತ್ತಾ ವಾರಕ್ಕೆ ೪೦೦ ರೂಪಾಯಿ ಗಳಿಸುತ್ತಾ ಹೇಗೋ ಬದುಕುತ್ತಿದ್ದಳು. ಗಂಡ ಕುಡುಕನಾದರೂ ಎರಡು ಮಕ್ಕಳನ್ನು ಕೊಟ್ಟಿದ್ದ. ಮಗಳನ್ನು ಓದಿಸುವುದಕ್ಕಾಗದೇ ಹೇಗೋ ಮದುವೆ ಮಾಡಿದ್ದಳು ರಂಗಮ್ಮ.
ಇದೀಗ ಮಗ ಕಾಲೇಜಿಗೆ ಹೋಗುತ್ತಿದ್ದಾನೆ ದೂರದ ಊರಿನ ಪೇಟೆಯಲ್ಲಿ.
ಕಾಲೇಜು ಎಂದರೆ ಸ್ಕೂಲೇ? ಅಲ್ಲವಲ್ಲ. ಮೊದಲು ಹತ್ತುರೂಪಾಯಿಯಲ್ಲಿ ಇಡೀವಾರ ಸಾಗುತ್ತಿದ್ದರೆ ಈಗ ಬಸ್ಸಿಗೆ ದಿನಕ್ಕೆ ೪೦ ರೂಪಾಯಿ ಆದರೂ ಬೇಕು.
ಮಗ ಕಾಲೇಜಿಗೆ ಸೇರಿದಂದಿನಿಂದ ರಂಗಮ್ಮನ ಮದ್ಯಾಹ್ನದ ಊಟವೂ ನಿಂತುಹೋಯಿತು. ಮಗ ಓದಲಿ ಎಂದೇ ಆದಷ್ಟು ಕಷ್ಟಪಟ್ಟು ದುಡಿಯತೊಡಗಿದಳು.

ಮಗನಿಗೆ ಆಗಾಗ ಹಿತೋಪದೇಶವೂ ನಡೆಯಿತು. ಇತ್ತೀಚೆಗೆ ಬೇಕು ಎಂದು ಹಠಮಾಡಿ ೩೦೦ ರೂಪಾಯಿ ಕೇಳಿದ. ರಂಗಮ್ಮ ಸಾಲಮಾಡಿ ಹೇಗೋ ಹೊಂದಿಸಿಕೊಟ್ಟಳು.
ಗಣೇಶನ ಹಬ್ಬವೆಂದು ಮನೆಗೆ ಮಗ ಸಣ್ಣ ಗಣೇಶನ ಮೂರುತಿ ತಂದ. ರಂಗಮ್ಮ ಮಾತನಾಡಲಿಲ್ಲ. ಕೊನೆಯ ದಿನ ಗಣೇಶನನ್ನು ಮನೆಯ ಎದುರಿನ ಬಾವಿಗೆ ವಿಸರ್ಜಿಸಿದ ಮಗ.
-
ಮುನ್ನೂರು ರೂಪಾಯಿ ಬಾವಿಯಲ್ಲಿದೆ ಎಂದು ರಂಗಮ್ಮ ಬಾವಿಗೆ ಹಾರಿದ್ದು ಮಾತ್ರ ನೆನಪು.

Sunday 16 September 2012

Airtel’ಗೆ ಆಫರ್ ಕೊಟ್ಟ!

ಟ್ರೀಂ ಟ್ರೀಂ..
ಹಲೋ..
Welcome to airtel ಈಗ ನಿಮ್ಮ ನೆಚ್ಚಿನ ಹಾಡುಗಳು ನಿಮ್ಮ ಮೊಬೈಲ್’ನಲ್ಲಿ. ಹೆಚ್ಚಿನ ವಿವರಗಳಿಗಾಗಿ ಒಂದನ್ನು ಒತ್ತಿರಿ.
ಥತ್..(Call ಕಟ್ ಮಾಡಿದ)
----
ಹೆಲೋ Airtel Customer Careಗೆ ಸ್ವಾಗತ, ನನ್ನಿಂದ ಏನು ಸಹಾಯ ಬೇಕು ನಿಮಗೆ.
ನಮಸ್ತೇ ಮೇಡಂ, ನಿಮಗೆ ಗೋಣಿಚೀಲ ಬೇಕೆ?
ಏನು ಸರ್, ಗೊತ್ತಾಗಿಲ್ಲ.
ಅದೇ ಗೋಣಿಚೀಲ ಬೇಕೆ, ಪ್ಲಾಸ್ಟಿಕ್ಕಿಂದೂ ಇದೆ, ಸೆಣಬಿಂದೂ ಇದೆ.
ಸರ್ ನೀವು ತಪ್ಪಾಗಿ ಕರೆ ಮಾಡಿರಬೇಕು.
ಇಲ್ಲ ಮೇಡಂ, ಇದು ನಮ್ಮ ಆಫರ್. ಬೆಳಗ್ಗಿಂದ ಹತ್ತು ಸಲ ನೀವು ಆಫರ್ ಕೊಡ್ತೀರ, ಒಂದು ಸಲ ನನ್ ಆಫರ್ ತಗೋಳಿ.

Monday 10 September 2012

ಟಿಪ್ಪರ್ ಮತ್ತೆ ಕಾರು!


ರಂಗಪ್ಪ ಎಂದಿನಂತೆ ಗದ್ದೆ ಕೆಲಸ ಮುಗಿಸಿ ಟಿಲ್ಲರ್ ಏರಿ ಮನೆ ಕಡೆ ಹೊರಟಿದ್ದ. ಹೈವೇ ಬದಿಗಿದ್ದ ಮನೆಯ ಹತ್ತಿರ ಬಂದ. ವಿದೇಶೀ ಕಾರೊಂದು ೧೦೦ ಕಿಲೋಮೀಟರ್ ವೇಗದಲ್ಲಿ ಬಂದು ಟಿಲ್ಲರ್’ಗೆ ಹೊಡೆದು ಪಲ್ಟಿಯಾಯಿತು.
ಟಿಲ್ಲರ್ ಹಾಗೇ ಇತ್ತು! ಕಾರು ಮಗುಚಿ ಬಿತ್ತು. ಕಾರಿನೊಳಗಿಂದ ಆರ್ತನಾದ ಮುಗಿಲುಮುಟ್ಟಿತ್ತು. ಅದೆಲ್ಲಿಂದ ಬಂದರೋ ಏನೋ ನೂರಿನ್ನೂರು ಜನ ಬಂದು ಕಾರಿನ ಫೋಟೋ, ಒಳಗಿದ್ದವರನ್ನ ಹೊರಗೆಳೆಯುವುದು ಎಲ್ಲಾ ಪ್ರಾರಂಭವಾಯಿತು. ಏನೂ ಆಗಿರಲಿಲ್ಲ ಜನರಿಗೆ.
ಕ್ರಮೇಣ ಕಾರಿನ ಗ್ಲಾಸು ಒಡೆದದ್ದು, ಮತ್ತಿತರ ಅಂಗಾಂಗ ಊನಗೊಂಡಿತ್ತು ಕಾಣತೊಡಗಿತು.
ಹೀಗೇ ಚರ್ಚೆ ಸಾಗುತ್ತಾ, ಕಾರಿನ ಅಂದಾಜು ನಷ್ಟವೇನು? ಕಾರು ಯಾವ ಕಂಪೆನಿಯದ್ದು? ಎಷ್ಟು ಬೆಲೆಬಾಳಬಹುದು ಎಂದೆಲ್ಲಾ ಚರ್ಚೆಯಾಗತೊಡಗಿತು.
-
ಯಾವುದೋ ಮೂಲೆಯಲ್ಲಿ ಟಿಲ್ಲರ್ ಪಕ್ಕ ಉಸಿರಾಡದೇ ಮಲಗಿದ್ದ ರಂಗಪ್ಪನಿಗೆ ಇದ್ಯಾವುದೂ ತಿಳಿದಿರಲಿಲ್ಲ.