Tuesday 23 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೬ ( ಶಾಮನ ಕತೆ )


ಅಪ್ಪಚ್ಚಿ ಇದುವರೆಗೆ ಹೇಳಿದ ಕತೆಗಳಲ್ಲಿ ಈ ಕತೆ ಏಕೋ ಅಷ್ಟು ಸರಿಹೋಗಲಿಲ್ಲ. ನಡುವಿನಲ್ಲಿ ಏನೋ ತಿರುಚಿದಂತೆ ಕಾಣತೊಡಗಿತು. ಇದೇಕೆ ಒಂದೇ ರೀತಿಯ ಹರಿವು ಈ ಕತೆಯಲ್ಲಿಲ್ಲ ಎಂದು ಅನಿಸಿದ್ದಕ್ಕೇ ಕೇಳಬೇಕೆನಿಸಿತು. ಸುಮ್ಮನೇ ಒಂದು ಕತೆಯೆಂದು ಹೇಳಿದರೇ? ಆಗಿರಲಿಕ್ಕಿಲ್ಲ. ಪುನಃ ಕೆದಕೋಣ ಎನ್ನುವುದೂ ಅನಿಸಿತು.ಚಿಕ್ಕಪ್ಪಾ, ಇದೇಕೋ ಕತೆಯಲ್ಲಿ ಏನೋ ಸಂಕೋಚವಿದೆ ಎಂದ ತಕ್ಷಣ ತಾನು ಹೇಳಲೇ ಬಾರದಿತ್ತು ಎನ್ನುವಂತೆ ಮುಖ ಮಾಡಿದ ಚಿಕ್ಕಪ್ಪ.

ಮಗನೇ ಸತ್ಯವೋ ಸುಳ್ಳೋ ಗೊತ್ತಿಲ್ಲ. ಪುನಃ ಆ ಕತೆಯನ್ನು ಹೇಳದೇ ಇದ್ದರೆ ನಿನಗೂ ಸಮಾಧಾನ ಆಗುವುದಿಲ್ಲ. ನನಗೂ ಅಷ್ಟೇ. ಈ ಸಂದರ್ಭ ಬಂದೀತೆಂದು ನನಗೂ ಅರಿವಿದ್ದಿತು. ಆ ಕತೆ ಹೇಳುತ್ತೇನೆ ಕೇಳು. ಯಕ್ಷಗಾನದಿಂದ ಬರುತ್ತಿದ್ದ ನಾವು ಬಂಡೆಯಲ್ಲಿ ಮಲಗಿದ್ದನ್ನು ಹೇಳಿದ್ದೇನೆ ಸರಿಯಷ್ಟೆ. ಅಲ್ಲಿಂದ ಸುಮ್ಮನೇ ನಡೆಯುತ್ತಾ ಬಾಬು ಸೋಜರ ಮನೆಯ ಮೇಲೆ ಬಂದಿದ್ದೆವಷ್ಟೆ. ಆಗ ಬಾಬು ಸೋಜರನ್ನು ನಾವು ರಕ್ಷಿಸಿದೆವು ಎನ್ನುವ ವಿಷಯವನ್ನು ನಿನಗೆ ಹೇಳಿದ್ದೆ. ಅದರ ಹಿಂದೆ ಇನ್ನೊಂದು ಕತೆಯಿದೆ. ಅದನ್ನು ನಾವು ತಿಳಿದದ್ದು ಬಾಬು ಸೋಜರನ್ನು ಪೋಲೀಸರು ಹಿಡಿದಾಗಲೇ!

ಶಾಮನ ಬಗ್ಗೆ ಹೇಳಿದ್ದೆ ಮೊದಲು. ಆತ ನಮ್ಮ ಮಿತ್ರನೂ ನಮ್ಮಲ್ಲಿ ಮಿತಭಾಷಿಯೂ ಆಗಿದ್ದವನು. ಯಾವ ತುಂಟತನದ ಕೆಲಸವನ್ನೂ ಮಾಡುತ್ತಿರಲಿಲ್ಲ. ಆತನೊಂದು ರೀತಿಯ ವ್ಯಕ್ತಿ. ನಿನ್ನಪ್ಪನಷ್ಟೇ ವಯಸ್ಸು ಆತನದು. ತೆಳ್ಳಗಿನ ದೇಹವಾದರೂ ಕಣ್ಣುಗಳಲ್ಲಿ ವಿಶೇಷ ಹೊಳಪು. ಏನು ಮಾಡುತ್ತಿದ್ದರೂ ಹೇಳುತ್ತಿದ್ದರೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದ. ತಲೆಗೂ ಕೈಗೂ ಸ್ವಲ್ಪ ಅಂತರವಿತ್ತು ಆತನಲ್ಲಿ.

ಶಾಲೆಯ ದಿನಗಳು ಮುಗಿದವು. ನಿನ್ನಪ್ಪನಂತೇ ಆತನೂ ಒಂದು ವರುಷ ಶಾಲೆಯಲ್ಲಿ ಹೆಚ್ಚು ಕಲಿತವರು. ಚುರುಕಿರಲಿಲ್ಲ ಎಂದಲ್ಲ, ಅವರಿಗೆ ಪಠ್ಯೇತರ ಚಟುವಟಿಕೆಗಳು ಪ್ರಧಾನವಾಗಿದ್ದುದರಿಂದ. ಶಾಮ ಚೆನ್ನಾಗಿ ಬರೆಯುತ್ತಿದ್ದ ಕೂಡ. ಅವನು ಬರೆದ ನೋಟ್ ಪುಸ್ತಕಗಳು ನಮ್ಮ ಮನೆಯಲ್ಲಿಯೇ ಇರಬೇಕು ಅಟ್ಟದಲ್ಲಿ. ಗೆದ್ದಲಿನ ಕೃಪಾಶೀರ್ವಾದವಿಲ್ಲದೆ ಸರಿಯಾಗಿದ್ದರೆ ನಿನಗೂ ಒದಬಹುದು. ಇಂತಹ ಶಾಮ ಕೆಲವು ರಜಾದಿನ ಶಾಲೆಗೆ ಬರುತ್ತಲೇ ಇರಲಿಲ್ಲ. ಎಲ್ಲಿಯೋ ಕುಳಿತುಬಿಡುತ್ತಿದ್ದ. ಅವನ ಅಮ್ಮನೂ ಅಪ್ಪನೂ ತುಂಬಾ ಪಾಪದವರು. ಅವನ ಶಾಲೆಯ ಖರ್ಚಿನ ಅರ್ಧದಷ್ಟು ನಮ್ಮ ಅಪ್ಪನೇ ನೋಡಿಕೊಳ್ಳುತ್ತಿದ್ದರು ಕೂಡ. ಶಾಲೆ ಮುಗಿದ ಮೇಲೂ ನಮ್ಮೊಂದಿಗೆ ಅಷ್ಟಾಗಿ ಜೊತೆಯಿರುತ್ತಿರಲಿಲ್ಲ.

ನಿನ್ನ ದೊಡ್ಡಪ್ಪನ ಮದುವೆಯ ದಿನವೇ ಕೊನೆ ಅವನನ್ನು ನೋಡಿದ್ದು ನಾವು. ಈ ಶಾಮ ಸುಮಾರು ದಿನ ಮನೆಯಲ್ಲೇ ಮಂಕಾಗಿ ಕುಳಿತಿದ್ದ ಎನ್ನುವುದು ಆಮೇಲೆ ಗೊತ್ತಾಯಿತು. ಶಾಮ ಮನೆ ಬಿಟ್ಟು ಹೋದನಂತೆ. ಅದೂ ಅವನ ಅಪ್ಪ ಅಮ್ಮ ಪೋಲೀಸ್ ಕಂಪ್ಲೇಂಟ್ ಕೊಟ್ಟು ಶಾಮ ಕಾಣಿಸುತ್ತಿಲ್ಲ ಎಂದು ಹೇಳಿದ ಮೇಲೆ. ಈ ಶಾಮ ಏನಾದ ಎನ್ನುವುದೇ ನಮಗೊಂದು ದೊಡ್ಡ ಚಿಂತೆಯಾಯಿತು.
-
ಆ ದಿನ ನಾವು ಬಾಬುಸೋಜರನ್ನು ರಕ್ಷಿಸಿದೆವು ಎಂದೆನಲ್ಲ. ಆ ದಿನ ಬಾಬು ಸೋಜರು ಮಾಡಿದ ದೊಡ್ಡ ಕೆಲಸವೆಂದರೆ ಶಾಮನ ಹೆಣವನ್ನು ಸೂಟುಮಣ್ಣಿಗೆ ಹಾಕಿ ಅದನ್ನು ಮುಚ್ಚಿದ್ದು. ಆ ಕೆಲಸದಲ್ಲಿಯೇ ಬಾಬು ಸೋಜರು ಬಿದ್ದಿದ್ದು ಮತ್ತೆ ನಾವು ಅವರನ್ನು ರಕ್ಷಿಸಿದ್ದು ಎಲ್ಲವೂ. ನನಗೆ ಅರಿವಾಗಲೇ ಇಲ್ಲ ಆದಿನ. ನಿನ್ನಪ್ಪ ಹೇಳಿದ ಕತೆಯನ್ನೇ ನಿನಗೂ ಹೇಳಿದ್ದೇನೆ, ಆದರೆ ನಿನಗಾದ ಸಂಶಯ ನನಗಾಗಲಿಲ್ಲ ಆಗ. ನಾನೂ ಬಾಬು ಸೋಜರು ಕುಡಿದು ಬಿದ್ದಿದ್ದಾರೆ ಎಂದುಕೊಂಡಿದ್ದೆ. ಆದರೆ ಆದ ಘಟನೆಯೇ ಬೇರೆಯಾಗಿತ್ತು.

ನಾನು, ನಿನ್ನಪ್ಪ ಕೂಡ ಸಾವಿನ ಘೋರಮುಖವನ್ನು ನೋಡಿದ ಘಟನೆ ಅದು. ನಮ್ಮ ಮನೆಯ ನಾಯಿ, ಬೆಕ್ಕು, ಮೆಚ್ಚಿನದನಗಳು, ಇತ್ಯಾದಿ ಸತ್ತಾಗ ಒಂದೋ ಎರಡೋ ದಿನ ನಿರ್ಭಾವುಕತೆಯಿಂದ ಸುಮ್ಮನೇ ಕುಳಿತದ್ದುಂಟು. ಆದರೆ ಈ ಸಾವಿನ ಘಟನೆ ತಿಳಿದಂದಿನಿಂದ ನಾವು ಸಾವಿಗೆ ಇನ್ನಷ್ಟು ಹೆದರತೊಡಗಿದೆವು. ಅಲ್ಲದೇ, ಅಲ್ಲಿ ಇಲ್ಲಿ ಸತ್ತ, ಸಾಯಿಸಿದ ಘಟನೆಗಳನ್ನು ಕೇಳಿದಾಗೆಲ್ಲ ನಮ್ಮ ಮನದ ಪಟಲಗಳಲ್ಲಿ ಈ ಘಟನೆ ಸುಳಿದಾಡುತ್ತಿತ್ತು.

ಬಾಬು ಸೋಜರಿಗೆ ಒಬ್ಬ ಮಗ ಮತ್ತು ಇನ್ನೊಬ್ಬಳು ಮಗಳು. ಮಗಳಿಗೆ ಇಪ್ಪತ್ತೈದು ಅಥವಾ ಇಪ್ಪತ್ತಾರು ವರ್ಷವಾಗಿರಬೇಕು ಆಗ. ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಭವ್ಯನೋ  ದಿವ್ಯನೋ ಹೆಸರು. ಈ ಸಣಕಲ ಶಾಮನಿಗೆ ಅದು ಹೇಗೆ ಪರಿಚಯವಾಯಿತೋ, ಅವಳು ಈತನನ್ನು ಮೋಹಿಸಿದಳಂತೆ. ಶಾಮ ಕೂಡ ಇದೇನೋ ಹೊಸತು ಎಂಬಂತೆ ಅವಳು ಬೀಡಿಗೋ, ಪೇಟೆಗೋ ಹೋದಂತೆಲ್ಲಾ ಹಿಂಬಾಲಿಸುತ್ತಿದ್ದ. ಅವಳು ಆದಿತ್ಯವಾರವಂತೂ ಸಿಗುತ್ತಿದ್ದಿರಬೇಕು ಈತನಿಗೆ. ಇದು ಊರಲ್ಲಿ ಸಣ್ಣ ಸುದ್ಧಿಯನ್ನೂ ಉಂಟುಮಾಡುತ್ತಿತ್ತು. ನಾವೂ ಅದನ್ನು ಕೇಳಿ ಶಾಮನನ್ನು ಹೊಗಳಿದ್ದೂ ಇದೆ.

ಒಂದು ಆದಿತ್ಯವಾರ ಅಂದರೆ ನಾವು ಯಕ್ಷಗಾನಕ್ಕೆ ಹೋದ ರಾತ್ರಿಯ ಹಗಲು, ಶಾಮ ಬಾಬು ಸೋಜರ ಮನೆಗೇ ಹೋದನಂತೆ. ಆ ದಿನ ಬಾಬುಸೋಜರೂ ಮಗ ಇಮಾನ್ ಸೋಜರೂ ಚರ್ಚಿಗೆ ಹೋಗಿದ್ದರು. ಬಾಬುಸೋಜರು ಏನೋ ಚರ್ಚಿಗೆ ಹೋಗದೇ ವಾಪಸ್ಸು ಬಂದಾಗ ಶಾಮನೂ ಮಗಳೂ ಮನೆಯಲ್ಲಿದ್ದರು. ಈ ವಿಷಯಗಳು ಮೊದಲೇ ಸಣ್ಣ ಮಟ್ಟಿನಲ್ಲಿ ಊರಿನವರಿಂದ ತಿಳಿದಿದ್ದ ಬಾಬು ಸೋಜರು ಕೋಪಗೊಂಡರು. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ಬಾಬು ಸೋಜರು ಶಾಮನ ತಲೆಗೆ ಹೊಡೆದರು. ಶಾಮ ಅಲ್ಲಿಯೇ ಕುಸಿದು ಬಿದ್ದ. ಕುಸಿದು ಬಿದ್ದವನು ಏಳಲಿಲ್ಲ.

ಮಗಳನ್ನು ಹೆದರಿಸಿ ಸುಮ್ಮನಿರಿಸಿ ಮಧ್ಯಾಹ್ನ ಅತ್ತೆಮನೆಗೆ ಕಳುಹಿಸಿದರು. ಮಗ ಬರುವ ಮೊದಲೇ ಮನೆಯಲ್ಲಿ ಬಿದ್ದಿದ್ದ ಶಾಮನ ಹೆಣವನ್ನು ಹೊಲದ ಕೆಳಗೆ ಹರಿಯುವ ಸಣ್ಣ ಹಳ್ಳದ ಬದಿಯಲ್ಲಿ ಇರಿಸಿದರು. ಇದೇ ರಾತ್ರಿ ನಾವು ವಾಪಸ್ಸು ಬರುತ್ತಿರುವಾಗ ಆ ಹೆಣವನ್ನು ಅಲ್ಲಿಂದ ಎತ್ತಿಕೊಂಡು ಬಂದು ಯಾರೂ ಅರಿಯದಂತೆ ಸೂಟುಮಣ್ಣಿನ ಒಳಗೆ ಹಾಕಿಬಿಡಲು ಯೋಚಿಸಿ ಆ ಕೆಲಸ ಮಾಡಿದರು. ಎಲ್ಲಿ ನಾವು ಅಲ್ಲೇ ಇದ್ದರೆ ತಿಳಿದುಬಿಡುತ್ತದೋ ಎಂದು ನಮ್ಮನ್ನು ಗದರಿಸಿ ಮನೆಗೆ ಕಳುಹಿಸಿದರು.
-
ಈ ಕಾಣೆಯಾದವನ ತನಿಖೆ ಮಾಡುತ್ತಾ ಪೋಲೀಸರು ಬಂದಾಗ ಮೊದಲು ಈ ಸಾವಿನ ಸುಳಿವು ಸಿಗಲಿಲ್ಲ. ಕೊನೆಗೆ ಊರಿನವರಿಂದಲೇ ಬಾಬು ಸೋಜರ ಮಗಳ ಜೊತೆಗಿದ್ದ ವ್ಯವಹಾರವನ್ನು ಹೇಳಿದಾಗ ಅನುಮಾನಗೊಂಡು ಬಾಬುಸೋಜರ ತನಿಖೆಯಾಯಿತು. ಹೀಗೆ ಬಾಬುಸೋಜರು ಮಾಡಿದ ಕೊಲೆಗೆ ಶಿಕ್ಷೆಯೂ ಆಯಿತು. ಸುಮಾರು ಎರಡು ತಿಂಗಳಲ್ಲಿ ಈ ಕತೆ ನಮಗೆ ತಿಳಿಯಿತು. ನಾವೂ ಶಾಮನ ತಂದೆತಾಯಿಯರ ಜೊತೆ ಕಣ್ಣೀರು ಸುರಿಸಿದೆವು.

4 comments:

  1. ಚೆನ್ನಾಗಿದ್ದು :)

    ReplyDelete
  2. ೬ನೇ ಭಾಗವೂ ಚೆನ್ನಾಗಿದೆ. ಮುಂದುವರೆಸಿರಿ.

    ಈಶ್ವರ ಊವಾಚ:
    ಸೂಟುಮಣ್ಣು:
    ಸೂ=ಬೆಂಕಿ, ಬೆಂಕಿಯಲ್ಲಿ ಸುಡುವ ಮಣ್ಣು ಎಂದು. ನಮ್ಮಲ್ಲಿ ಕಸವನ್ನೆಲ್ಲಾ ರಾಶಿ ಹಾಕಿ ಅದರ ಮೇಲೆ ಮಣ್ಣು ಹಾಕಿ ಸುಡುತ್ತಾರೆ. ತೋಟಗಳಿಗೆ ಹಾಕಲು.

    ReplyDelete
  3. ಮುಂದುವರೆಸಿ... chennagide.....

    ReplyDelete