Monday 18 August 2014

ರನ್ನನ ಗದಾಯುದ್ಧ - ನೋಟ - ಭಾಗ ೨

೫.

ಪಡೆ ಪನ್ನೊಂದಕ್ಷೋಹಿಣಿ
ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ-
ಳ್ಗೊಡೆಯ ನಡುವಿರ್ಪ ನೀನಿ-
ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ

(ನೀನ್ ಇರ್ದೆಡೆಯುಮನ್ ಎಮಗೆ ಅರಿಯದಂತುಟಾದುದೆ)
ಎಂದೆಲ್ಲಾ ಹಳಹಳಿಸಿ ಬರುತಿರ್ದ ಕೌರವನ ತಂದೆ ತಾಯಿ, ಪುರಜನರ ಬಗ್ಗೆ ಸಂಜಯನು ಸುಯೋಧನನಿಗೆ ಹೇಳುತ್ತಾನೆ.

ಅರಿಭೂಪಾಲರನಿಕ್ಕಿ ಗೆಲ್ದೊಸಗೆಯಿಂ ತೂರ್ಯಸ್ವನಂ ಪೊಣ್ಮೆ ಸೋ-
ದರರುಂ ಮಕ್ಕಳುಮಾಪ್ತರುಂ ಬೆರಸು ಬಂದಾನಂದದಿಂ ಕಾಣ್ಬೆನೆಂ-
ದಿರಲಿಂತಾಯ್ತು ವಿಧಾತ್ರ ಮದ್ಗುರುಗಳಂ ದುಃಖಾತ್ಮರಂ ಶೋಕತ೦
ತ್ಪರರಂ ಮೆಯ್ಯೊಳೆ ಬೀಳುವಶ್ರುಮುಖರಂ ಕಾಣ್ಬಂತುಟಂ ಮಾಡಿದಯ್

ಕಂದ ನಿಜಾನುಜರೆಲ್ಲಿದ-
ರೆಂದೆನ್ನಂ ಜನನಿ ಬಂದು ಬೆಸಗೊಂಡೊಡದೇ-
ನೆಂದು ಮರುಮಾತುಗೊಡುವೆಂ
ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ

ಅತ್ಯಂತ ಸೊಗಸಾಗಿ ಹೇಳಲಾದ ಪದ್ಯಗಳಲ್ಲಿ ಕೌರವನ ದಯನೀಯ ಸ್ಥಿತಿಯ ಬಗ್ಗೆ ಕನಿಕರವಾಗುತ್ತದೆ.
"ಓಂದುವೇಳೆ ಅಮ್ಮ ಬಂದು, ಕಂದಾ ನಿನ್ನ ಅನುಜರು ಎಲ್ಲಿದ್ದಾರೆ ಎಂದು ಕೇಳಿದರೆ ಏನೆಂದು ಉತ್ತರ ಕೊಡಲಿ? ಕುಂತಿಯ ಮಕ್ಕಳು ಕೊಂದರೆಂದು ಬಿನ್ನವಿಸಲೇ?" ( ಒಬ್ಬ ತಾಯಿಯ ಮಕ್ಕಳನ್ನು ಇನ್ನೊಬ್ಬ ತಾಯಿಯ ಮಕ್ಕಳು ಕೊಂದರು ಎನ್ನುವಾಗ ಉಂಟಾಗುವ ಭಾವ ಭಿನ್ನ! ಅಬ್ಬಬ್ಬ ಕವಿರನ್ನ!)

ಶೋಕವು ಹೆಚ್ಚಾಗಿ ಫಣಿರಾಜಪತಾಕನು ಕಣ್ಣೀರಿನಿಂದ ತೋಯ್ದು, ಹಾ ದುಶ್ಶಾಸನಾ, ಹಾ ಕರ್ಣಾ ಎನ್ನುತ್ತಾ ಮೂರ್ಛೆ ಹೋಗುತ್ತಾನೆ.
ಸಂಜಯವಚನಂ ಎನ್ನುವ ಆಶ್ವಾಸ ಇಲ್ಲಿಗೆ ಮುಗಿಯಿತು. ಮುಂದೆ ಧೃತರಾಷ್ಟ್ರವಚನಂ!

೬.

ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ.

ಗಾಂಧಾರಿಯ ಮಾತು-

ಎಮಗಂಧಯಷ್ಟಿಯಾಗಿ-
ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ-
ನ್ನುಮನಿರಿಸದೆ ಕುರುವಂಶಾ-
ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ

(ಅಂಧಯಷ್ಟಿ= ಊರುಗೋಲು, ನಮಗೆ ಊರುಗೋಲಾಗಿದ್ದೆ ಮಗನೆ, ನೀನೊಬ್ಬ ಉಳಿದರೂ ಎಲ್ಲರೂ ಇದ್ದಾರೆ ಎಂದುಕೊಳ್ಳುತ್ತಿದ್ದೆವು, ನಿನ್ನನ್ನೂ ಇರಿಸದಂತೆ ಆ ನಿಮಿತ್ತರಿಪು ಪಾಶಪಾಣಿ (ಯಮ) ಸವಿನೋಡಿದನೇ?).

ಮಡಿದೀ ದುಶ್ಶಾಸನನೇಂ
ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ
ನುಡಿಯಿಸುವನೊ ದುಷ್ಕರ್ಣಂ
ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ!

ಎಂದು ಗಾಂಧಾರಿ ಅಳುತ್ತಿರಲು, ತಂದೆ ಧೃತರಾಷ್ಟ್ರ ತನ್ನ ಮಗನ ಕಾಲ ಮೇಲೆ ಬಿದ್ದು ಹಾ! ಕುರುಕುಲಚೂಡಾಮಣಿ, ಹಾ ಕುರುಕುಲಚಕ್ರವರ್ತಿ ಎಂದು ರೋಧಿಸುತ್ತಾನೆ. ತನ್ನ ತಂದೆತಾಯಿಗಳ ಈ ರೋಧನೆಗೆ ಪುನಃ ಮೂರ್ಛೆ ತಪ್ಪುತ್ತಾನೆ ಕೌರವ.

ಮೂರ್ಛೆ ತಿಳಿದೆದ್ದು ಲಜ್ಜೆಯಿಂದ ಅವರ ಕಾಲಿಗೆ ನಮಸ್ಕರಿಸಲು, ಅಪ್ಪಿಕೊಂಡು, ಆಶೀರ್ವದಿಸಿ ಧೃತರಾಷ್ಟ್ರ ಕೆಲವು ಮಾತುಗಳನ್ನು ಹೇಳುತ್ತಾನೆ.

ರನ್ನ ಎಂತಹ ಕರುಣೆಯಿಂದ ಈ ಪದ್ಯಗಳನ್ನು ತುಂಬುತ್ತಾನೆಂದರೆ, ಒಂದು ಪದ್ಯದಲ್ಲಿ " ಧರ್ಮರಾಜ ಒಳ್ಳೆಯದನ್ನೇ ಮಾಡುತ್ತಾನೆ, ಈಗಲೂ ಕಾಲ ಮಿಂಚಿಲ್ಲ, ಸಂಧಿಯನ್ನು ಮಾಡಿಕೋ. ಸಂಧಿಗೆ ಸಂಜಯನನ್ನು ಕಳಿಸುತ್ತೇನೆ. ಭೀಮನ ವೈರ, ತಮ್ಮಂದಿರ ಸ್ನೇಹಿತರ ಸಾವನ್ನು ಮರೆತು ಇನ್ನಾದರೂ ಪಾಂಡವರಿಗೆ ಅರ್ಧರಾಜ್ಯವನ್ನು ಕೊಡು ಎಂದು ಕಾಲಿಗೆ ಬಿದ್ದು ಬೇಡುತ್ತಾನೆ"

ಯಾವ ಮಾತಿಗೂ ಕೇಳದ ಕೌರವ ತನ್ನದೇ ಮೊದಲಿನ ಮಾತುಗಳಿಗೆ ಜೋತು ಬೀಳುತ್ತಾನೆ.

ಆಂ ಮಗನೆನಾಗೆ ಧರ್ಮಜ-
ನೇಂ ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ
ನಿಮ್ಮೊಳ್ ನೇರ್ಪಡುಗಿಡದೆ ಸು-
ಖಂ ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ವೆಂ

ಬಿಡಿಮೆನ್ನನೆಂದು ಮುಂದಿ-
ರ್ದಡಿಗೆರಗಿದ ಮಗನನಪ್ಪಿಕೊಂಡಶ್ರುಜಲಂ
ಗುಡುಗುಡುನೆ ಸುರಿಯೆ ನಾಲಗೆ
ತಡತಡವರೆ ನುಡಿದನಂಧನೃಪನಾ ನೃಪನಂ

ನೀನು ಎಂತುಂ ಎಮ್ಮ ಪೇಳ್ವುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನೊಡಂಬಡೆಯಪ್ಪಿನಂ ನೀನೆಮಗಿನಿತನ್ ಒಳ್ಳಿಕಯ್ಯಲ್ವೇಳ್ವುದು

ನೆಗಳ್ವ ಕಜ್ಜಮಾವುದುಮ್?

ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು, ಅಲ್ಲಿಗೆ ಬಿಜಯಂಗೆಯ್ವುದು!

ನಾವು ಹೇಳಿದಂತೆ ಕೇಳದೆ ನೀನು ನಿನ್ನ ಛಲವೆಂದು ಮುಂದುವರೆಯುತ್ತಿದ್ದೀಯ. ನೀನೊಂದು ಕೆಲಸಮಾಡು, ಅದೇನೆಂದರೆ ನಿನ್ನಜ್ಜ ಭೀಷ್ಮನನ್ನು ನೋಡುವುದು. ಅದಕ್ಕೆ ಸಮ್ಮತಿಸಿ ಕೌರವ ತನ್ನ ಜೊತೆಗಾರ ಸಂಜಯನೊಂದಿಗೆ ಭೀಷ್ಮನಲ್ಲಿರುವಲ್ಲಿಗೆ ತೆರಳುತ್ತಾನೆ.

೭.

ದುರ್ಯೋಧನವಿಲಾಪಂ ಎನ್ನುವ ಆಶ್ವಾಸವು ಈವರೆಗೆ ನೋಡಿದ ಭಾಗಗಳಿಂದ ಬಹಳ ಸುಂದರವಾಗಿರುವಂತಹದ್ದು. ನನಗೆ ಬಹಳ ಇಷ್ಟವಾದ್ದು. ಅತ್ಯುತ್ತಮವೆನ್ನುವಂತೆ ಬಹಳ ನಾಟಕೀಯವಾಗಿ ಬರೆದಿದ್ದಾನೆ ರನ್ನ. ( ಈ ಭಾಗಗಳನ್ನು ರಂಗದಲ್ಲಿ ಅತ್ಯಂತ ಸುಂದರವಾಗಿ ಅಭಿನಯಿಸಬಹುದು ಎನ್ನುವ ಅರ್ಥದಲ್ಲಿ.,)

ಭೀಕರವಾದ ಯುದ್ಧದಿಂದ ಮಸಣವಾದ ರಣಾಂಗಣದಲ್ಲಿ ಕುರುಪತಿ ಮೆಲ್ಲಮೆಲ್ಲನೆ ಬರುತ್ತಿದ್ದಾನೆ. ಅತ್ಯಂತ ಸೊಗಸಾದ ಒಂದು ಪದ್ಯ ಇಲ್ಲಿದೆ.

ಹಲಚಕ್ರಾಂಕುಶರೇಖಾ
ವಿಲಸಿತಪದತಳಕೆ ಮಾಡೆ ಪುನರುಕ್ತತೆಯಂ
ಹಲಚಕ್ರಾಂಕುಶ ಕುರುಕುಲ
ತಿಲಕಂ ಕುಸಿಕುಸಿದು ಮೆಲ್ಲನೆ ನಡೆದಂ.

ರಾಜರ ಪಾದಗಳಲ್ಲಿ ಇರಬಹುದು ಎನ್ನುವಂತಹ ನೇಗಿಲು,ಚಕ್ರ, ಅಂಕುಶ ರೇಖೆಗಳು ಕೌರವನ ಪಾದದಲ್ಲಿದೆ. ಹಾಗೇ ರಣರಂಗದಲ್ಲಿ ಬಿದ್ದಿರುವಂತಹ ಸೈನಿಕರ ಆಯುಧಗಳು ಆ ಕಾಲಿನಲ್ಲಿ ಮತ್ತೆ ಈ ಆಯುಧಗಳ ರೇಖೆಯನ್ನು ಮೂಡಿಸುತ್ತಿದೆ. ಒಬ್ಬ ರಾಜನ ಅವಸ್ಥೆಯನ್ನು ಈ ಪದ್ಯ ಎಷ್ಟು ಸರಳ ಸುಂದರವಾಗಿ ಹೇಳುತ್ತಿದೆ ನೋಡಿ.

ಸಂಜಯ ನೋವಿನಲ್ಲಿ "ನಿಮ್ಮ ಕೋಮಲ ಪಾದ, ವಿರೋಧಿಗಳಮಂಡಳಿಕಮೌಳಿವಿಘಟ್ಟಿತ ಪಾದ ಪೀಠ ಇಂದು ಬಾಣ, ಕತ್ತಿ, ಪರಿಘ ಮುಂತಾದ ಆಯುಧಗಳು ಬಿದ್ದಿರುವ ಈ ಸಂಗ್ರಾಮ ಭೂಮಿಯಲ್ಲಿ ನಡೆಯಬೇಕಾಯಿತೇ" ಎಂದಾಗ

ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆರೆಯವು ಸಮರಾ-
ವನಿಯೊಳುಡಿದಿರ್ದ ಕಯ್ದುಗ-
ಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ

(ಮಕ್ಕಳ, ಸೋದರರ ಸಾವಿನಿಂದ ಉಂಟಾದ ನೋವನ್ನೇ ಲೆಕ್ಕಿಸುತ್ತಿಲ್ಲ, ಮತ್ತೆ ಈ ಜುಜುಬಿ ಆಯುಧಗಳು ನನ್ನನ್ನು ನೋಯಿಸುವುದೇ?)

ಹೀಗೆ ಆ ಯುದ್ಧಭೂಮಿಯಲ್ಲಿ ಮುಂದೆ ಬರುತ್ತಿರಬೇಕಾದರೆ...... ಮರುಳ್ಗಳ್!

೮.

ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ ಕುಡಿದ, ಭೀಷ್ಮನ ನೆತ್ತರನ್ನು ಕುಡಿಯಲು ಅವನಿನ್ನೂ ಸತ್ತಿಲ್ಲ, ಕೌರವಾ, ನಿನ್ನ ನೆತ್ತರನ್ನೇ ಕುಡಿಯಬೇಕೆಂದಿದ್ದೇವೆ ಬಾ ಬಾ ಎಂದೆನುತ್ತಿತ್ತು ಒಂದು ಪಿಶಾಚಿ.

ಅದನ್ನು ಕೇಳುತ್ತ ಮುಂದುವರೆದು ಬರುತ್ತಿರಲು, ಯಾವುದೋ ಶವದ ಮೆದುಳಿನ ಮೇಲಿಟ್ಟು ಜಾರಿ ಬೀಳುವಂತಾಗುತ್ತಾನೆ ಕೌರವ. ಅಯ್ಯೋ, ಜಾಗ್ರತೆ ಕಾಲು ತೊಡೆ ಮುರಿದೀತು ಎನ್ನುತ್ತಾ ಸಂಜಯ ಅವನನ್ನು ಮೇಲಕ್ಕೆತ್ತುತ್ತಾನೆ. ಆಗ ಒಂದು ಪಿಶಾಚಿ "ಭೀಮಕೋಪದಲ್ಲಿ ನಿನಗೆ ಊರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ" ಎಂದು ಅಣಕಿಸುತ್ತದೆ.

ಈ ಭಾಗವನ್ನು ಓದಿಯೇ ಸುಖಿಸಬೇಕು. ಈ ಮರುಳ್ಗಳ ಮಾತಿನಲ್ಲಿ ಹುರುಳಿಲ್ಲ ಎಂದು ಕೌರವ ಎನ್ನುತ್ತಿರುವಾಗ ಅರಗಿನ ಮನೆಯಿಂದಲಾಗಿ, ವಿಷದ ಲಡ್ಡುಗೆಗಳನ್ನು ಕೊಟ್ಟು ಕೊಲ್ಲಲು ಯತ್ನಿಸಿ ಭೀಮನ ವೈರವನ್ನು ಗಳಿಸಿದ ನೀನು ಮರುಳನೋ? ಅಲ್ಲ, ಎಲ್ಲರೊಂದಾಗಿ ಇರುವಂತಹ ನಾವು ಮರುಳ್ಗಳೋ ಎಂದು ಕೇಳಿತು ಪಿಶಾಚಿ. ಮತ್ತೆ ಕೌರವನಿಗೆ ಸವಾಲಾಗಿ,

ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರೆ ಪೋ-
ದೊಡೆ ಕಲಿಭೀಮನಾಣೆಯೆನೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ-
ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಯಂ ಕೊಳೆ ಭೂತಕೋಟಿಯುಂ
ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ

ಈ ಮರುಳ್ಗಳಾಟವೆಲ್ಲವೂ ಕೌರವನ ಮನದಲ್ಲಿ ಆದಂತದ್ದು ಎನ್ನುವಂತೆ ರನ್ನ ಬರೆಯುತ್ತಾನೆ. ಎಷ್ಟು ಅಮೋಘವಾಗಿದೆ ನೋಡಿ ಚಿತ್ರ.

ಸತ್ತವರನ್ನು ನೋಡುವುದಿಲ್ಲ, ನೇರವಾಗಿ ನನ್ನನ್ನು ಭೀಷ್ಮನಿದ್ದಲ್ಲಿ ತಲುಪಿಸು ಎಂದು ಸಂಜಯನಿಗೆ ಹೇಳಿ ಮುಂದೆ ಬರುತ್ತಾನೆ ಕೌರವ. ಹೇಗೆಂದರೆ

ಇಭಶೈಲಂಗಳನೇರಿಯೇರಿ, ರುಧಿರಸ್ರೋತಂಗಳಂ ದಾಂಟಿ ದಾಂಟಿ, ಭದೋರ್ನೀಲತಾಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಮುಂದುವರೆಯುತ್ತಾ ಬಾಣಗಳಿಂದ ಹೊಡೆಯಲ್ಪಟ್ಟು ಪ್ರಾಣವಿಲ್ಲದ ಬಿದ್ದಿರುವ ದ್ರೋಣಾಚಾರ್ಯನನ್ನು ಕಾಣುತ್ತಾನೆ.

ನಿಮ್ಮ ಬಿಲ್ಗಾರಿಕೆಗೆ ಅರ್ಜುನನೇನು? ಆ ಪಿನಾಕಪಾಣಿಯೇ ಬಂದರೂ ಸಮನಲ್ಲ. ಆದರೆ ಇದೇನಾಯ್ತು? ಕರ್ಮವಶದಿಂದಲೋ ಅಥವಾ ನಿಮ್ಮ ಉಪೇಕ್ಷೆಯಿಂದಲೋ ಮರಣಹೊಂದುವಂತಾಯ್ತಲ್ಲ.

ಶರಸಂದೋಹಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ-
ಷ್ಯರ ಮೈಯ್ಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ
ಹರಪಾದಾಂಬುಜಯುಗ್ಮದೊಳ್ ನಿರುಸಿದಂ ಚಾಪಾಗಮಾಚಾರ್ಯರೊಳ್
ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೆಯ್ವೆತ್ತುದೋ

ನಿಮ್ಮ ಬಾಣಗಳೆಲ್ಲ ಶತ್ರುಸೈನ್ಯದ ಒಡಲಿನಲ್ಲಿದೆ, ನಿಮ್ಮ ವಿದ್ಯೆಯೆಲ್ಲವೂ ಶಿಷ್ಯರಲ್ಲಿದೆ. ಕೀರ್ತಿಯು ದಿಕ್ಕುದಿಕ್ಕಿನಲ್ಲಿದೆ, ಮನಸ್ಸು ಹರಪಾದಾಂಬುಜದಲ್ಲಿದೆ.
ಬಿಲ್ವಿದ್ಯೆಯ ಆಚಾರ್ಯನನ್ನು ನೆನೆದು ಕೌರವ ಅಳಲುತ್ತಾನೆ. ಹಿಂದೊಮ್ಮೆ ಬಹಳವಾಗಿ ದ್ರೋಣನನ್ನು ನಿಂದಿಸಿದ್ದ ಕೌರವ ಶವಶರೀರದ ಮುಂದೆ ಹೀಗೆಲ್ಲ ಕೊರಗುವುದನ್ನು ನೋಡಿದರೆ ಕರುಣೆ ಉಕ್ಕದುಳಿದೀತೇ?

ದ್ರೋಣನಿಗೆ ಮೂರುಸುತ್ತು ಬಂದು ಮುಂದುವರೆಯುತ್ತಾ ಕೌರವ...

~
ಇನ್ನೂ ಇದೆ.

No comments:

Post a Comment