Sunday 18 August 2013

ಕತೆಯಾದವಳು

ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು.
ರೇಣುಕನ ಎಂದಿನ ಕೆಲಸ ಪ್ರಾರಂಭವಾಯಿತು. ಮೊದಲು ಅಡುಗೆಕೋಣೆ, ಪಾತ್ರೆಗಳಿಗೆ ಒಂದಿಷ್ಟು ನೀರೆರಚಿ, ಉಳಿದ ಕಸಗಳನ್ನೆಲ್ಲಾ ತುಂಬಿಸಿ, ಸ್ವಲ್ಪ ಓರಣ ಮಾಡಿ ಕಸ ಹೊಡೆದು, ಪಾತ್ರೆ ತೊಳೆದು, ಬಟ್ಟೆಯನ್ನು ಮೆಶೀನಿಗೆ ತುರುಕಿ ತನಗಾಗಿ ಕಾಯ್ದಿರಿಸಿದ ಟೋಮೇಟೋ ಬಾತನ್ನು ಸವಿದು ಸುಮ್ಮನೇ ಕುಳಿತಳು ರೇಣುಕ.ದೈನಂದಿನ ವರದಿಯಾಗುತ್ತದೆ ಇದೆಲ್ಲಾ ರೂಪಾ ಮತ್ತೆ ರೇಣುಕಳ ಮಧ್ಯೆ. ಅಂದಹಾಗೆ ಈ ಮನೆಯಲ್ಲಿ ಬಂದುಹೋಗುವ ಒಂದು ಜೀವ ರೇಣುಕನದು, ಬಂದು ಉಳಿಯುವ ಜೀವಗಳು ರೂಪಾ ಮತ್ತು ಜಯಂತನದು.
-೧-
ಸ್ವಂತ ಮನೆಯಲ್ಲವದು ರೇಣುಕನದು, ಸುಮಾರು ಮೂರು ವರ್ಷಗಳಿಂದ ರೂಪಾಳ ತಂದೆಯವರು ಕೊಡಿಸಿದ ಬಾಡಿಗೆ ಮನೆ. ಅಂದರೆ ಮದುವೆಯಾದ ಸಮಯದಲ್ಲಿ ರೇಣುಕ ಮತ್ತು ವೆಂಕಟೇಶ್ ಇಬ್ಬರೂ ಬಂದು ಕೇಳಿದ್ದಕ್ಕೆ ಆ ಮನೆಯನ್ನು ತಿಂಗಳಿನ ಬಾಡಿಗೆಗೆ ಗೊತ್ತು ಮಾಡಿದರು. ತಾವು ಮಗನ ಮನೆಗೆ ಹೊರಟು ಹೋದರು. ತದನಂತರ ಆ ಮನೆಯನ್ನು ತನ್ನ ಮಗಳಿಗೇ ಕೊಟ್ಟು ಜೊತೆಗೆ ಇನ್ನೊಂದು ಮನೆಯನ್ನೂ ಅಲ್ಲಿಯೇ ಕಟ್ಟಿಸಿ ಅದರಲ್ಲಿ ರೇಣುಕನಿಗೆ ವಾಸವಾಗಿರಲು ಹೇಳಿದರು. ಹೀಗೆ ರೂಪಾ ಮತ್ತೆ ಜಯಂತ್ ದಂಪತಿಗಳಿಗೆ ರೇಣುಕ ಮತ್ತು ವೆಂಕಟೇಶ್ ದಂಪತಿಗಳು ನೆರೆಮನೆಯವರಾಗಿದ್ದರು.  ಇದೆಲ್ಲಾ ಹೀಗೇ ಮುಂದುವರೆದರೆ ಕತೆಯಾಗುತ್ತಿರಲಿಲ್ಲ. ಕಾಲದ ಹೊಡೆತದಲ್ಲಿ ಇವತ್ತಿನ ಸ್ಥಿತಿಗೆ ತಲುಪುವುದಕ್ಕೆ ಅದೇನೋ ನಾಟಕಗಳು, ಭಾವಗಳೆಲ್ಲಾ ಹರಿದಾಡತೊಡಗಿತು,.
ರೇಣುಕ ಇದೇ ಊರಿನವಳಲ್ಲ. ವೆಂಕಟೇಶ್ ಮೊದಲು ಕಾರ್ ಡ್ರೈವರಾಗಿದ್ದವನು ಯಾವುದೋ ಕಾರಣಕ್ಕೆ ತಿಪಟೂರಿಗೆ ಬಂದಿದ್ದ. ಸುಮಾರು ೨ ತಿಂಗಳುಗಳ ಕಾಲ ತಿಪಟೂರಿನಲ್ಲೇ ತಾನು ಕೆಲಸ ಮಾಡಬೇಕಾಗಿತ್ತು. ಹೀಗೆ ಉಳಿದುಕೊಂಡಿದ್ದ ನೆರೆಮನೆಯ ಹುಡುಗಿ ೨೦-೨೧ರ ರೇಣುಕಳ ಜೊತೆ ಅನುರಾಗವಾಗಿ ಅವಳನ್ನು ಮದುವೆಯಾಗುತ್ತೇನೆಂದು ಕೇಳಿದ. ಜಾತಿಯ ಪಟ್ಟುಗಳಿಗೆ, ಪೆಟ್ಟುಗಳಿಗೆ ಇವರ ಪ್ರೇಮವೊಂದು ನಗಣ್ಯವೆನಿಸಿದ್ದಕ್ಕೇ ಒಂದು ರಾತ್ರಿ ಇಬ್ಬರೂ ಊರಿನಿಂದ ಹೊರಬಂದರು. ವೆಂಕಟೇಶ್ ತಾನು ಒಳ್ಳೆಯ ಡ್ರೈವರನೆಂದು ಹೆಸರು ಪಡೆದಿದ್ದ. ರೂಪಾಳ ತಂದೆ ಸುಮಾರು ವರ್ಷಗಳಿಂದ ತನ್ನ ಜೊತೆಯಿದ್ದ ವೆಂಕಟೇಶನನ್ನು ಬಲ್ಲವರಾದ್ದರಿಂದ ಅವನ ಸಂಸಾರಕ್ಕೆ ಮುಂದೆ ಹೇಳಿಕೊಳ್ಳುವ ನಷ್ಟವಾಗಲಿಲ್ಲ ಅತ್ತೆ ಮನೆಯೆಂಬ ಸಂಬಂಧ ಹೊರತುಪಡಿಸಿ.
ಎರಡು ವರ್ಷ ಸುಖದ ಸಂಸಾರ. ವೆಂಕಟೇಶ್ ಚೆನ್ನಾಗಿ ದುಡಿಯುತ್ತಿದ್ದ, ಹಿತಮಿತದ ಖರ್ಚು, ಯಾವ ನೋವನ್ನೂ ಕೊಡಲಿಲ್ಲ ರೇಣುಕನಿಗೆ. ಎರಡು ವರ್ಷ ಹೀಗೇ ಸಾಗಿತು. ಒಂದು ದಿನ ಮಾತ್ರ ರೇಣುಕನಿಗೆ ತುಂಬಾ ದುರ್ದಿನವಾಗಿ ಪರಿಣಮಿಸಿತು. ವೆಂಕಟೇಶ್ ಕಾರಿನ ಅಪಘಾತಕ್ಕೆ ಸಿಲುಕಿ ಒಂದೆರಡು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ರೇಣುಕನಿಗೆ ಸಿಗದ ಯಾವುದೋ ದೂರದ ಊರಿನ ಪ್ರಯಾಣಕ್ಕೆ ಸಿದ್ಧನಾಗಿ ಹೊರಟುಹೋಗಿದ್ದ. ಹಠಾತ್ ತಿರುವಿನಲ್ಲಿ ರೇಣುಕ ಒಬ್ಬಳೇ ಸಿಕ್ಕಿ ವಿಲಿವಿಲಿ ಒದ್ದಾಡಿ ಕೊನೆಗೂ ಸಾವಿನ ಆಟದ ಮುಂದೆ ಸೋತು ಏನು ಮಾಡುವುದೆಂದು ತಿಳಿಯದೇ ಹಾಗೇ ಇದ್ದಳು ಹಲವು ದಿನ.
ಇತ್ತ ಕಡೆ ರೂಪಾ ಮತ್ತು ಜಯಂತರದ್ದು ಅನ್ಯೋನ್ಯ ದಾಂಪತ್ಯ. ಸುಮಾರು ತಡವಾಗಿ ಮದುವೆಯಾಗಿದ್ದ ರೂಪಾ ಮತ್ತು ಜಯಂತ್ ತಾವು ವೃತ್ತಿಯಲ್ಲಿ ಔನ್ನತ್ಯಕ್ಕೇರಿದವರು. ಸುಮಾರು ಮೂವತ್ತೈದರ ಆಸುಪಾಸಿನ ರೂಪಾ ಮತ್ತು ಎರಡೋ ಮೂರೋ ವರ್ಷ ದೊಡ್ಡವನಾದ ಜಯಂತ್ ತಮ್ಮ ಓದಿಗೆ ಸಂಬಂಧಪಟ್ಟ ನೌಕರಿ ಹಿಡಿದು, ಮದುವೆಯಾಗುವುದಿಲ್ಲ ಎಂದುಕೊಳ್ಳುತ್ತಲೇ ಮದುವೆಯಾದವರು. ಮಾರ್ಕೆಟಿಂಗ್ ಹೆಡ್ ಎಂಬ ದೊಡ್ಡ ಐದಂಕೆಯ ಸಂಬಳದ ಜಯಂತ್ ನೋಡುವುದಕ್ಕೂ ಹಾಗೆಯೇ ಬಹಳ ಶಿಸ್ತಿನ ಸಿಪಾಯಿ. ಅನಾಥನಾಗದಂತೆ ಸಾಕಿದ ಚಿಕ್ಕಮ್ಮ ಮದುವೆಯಾದ ವರ್ಷವೇ ತೀರಿಕೊಂಡ ಕಾರಣ ರೂಪಾಳಿಗೆ ಸಂಪೂರ್ಣವಾಗಿ ಆವರಿಸಿಕೊಂಡ.
ರೂಪಾಳೂ ಅಷ್ಟೆ, ತಾನಾಯಿತು ಎಂದಿದ್ದವಳು ತನ್ನ ಅಣ್ಣನ ಮದುವೆಯಾಗುತ್ತಲೇ ಮನಸ್ಸು ಬದಲಾಯಿಸಿ ಮದುವೆಯಾಗುತ್ತೇನೆಂದಿದ್ದು ಖುಷಿ ಕೊಟ್ಟಿತ್ತು ಅವಳ ಅಪ್ಪನಿಗೆ. ಹಾಗೇ ಯೋಗ್ಯನೆಂದು ಜಯಂತನನ್ನು ಹುಡುಕಿ ಮದುವೆ ಮಾಡಿಸಿದ್ದರು. ಮದುವೆಯಾದ ಮೇಲೆ ಮನೆಯನ್ನೂ ಅವಳ ಹೆಸರಿಗೆ ಮಾಡಿಕೊಟ್ಟು ವಿದೇಶಕ್ಕೆ ಹೊರಟುಹೋದ ಮೇಲೆ ಅವಳಿಗೂ ತವರೆಂದಿಲ್ಲ, ಬೇರೆ ನೆಂಟಸ್ತಿಕೆಯೂ ಬೇಕಿಲ್ಲವಾಯಿತು.
ಮದುವೆಯಾಯಿತು, ಮಕ್ಕಳಾಗಬೇಡವೇ? ಆ ಯೋಚನೆಯಲ್ಲಿದ್ದ ರೂಪಾಳಿಗೆ ಮೊದಲ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿತು. ತನ್ನ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಂತೆ ಎನಿಸಿದ್ದು ಡಾಕ್ಟರರ ಹೇಳಿಕೆಯ ಮೇಲೆ. ಇನ್ನು ಮಗುವಿನ ಯೋಚನೆಯನ್ನು ಮಾಡುವ ಹಾಗಿಲ್ಲ ಎನ್ನುವ ಡಾಕ್ಟರರ ಮಾತು ರೂಪಾಳ ಮನಸ್ಸಿನ ಆಳದಲ್ಲಿ ಕುಳಿತು ಕಾಡತೊಡಗಿತು. ತನ್ನ ವಯಸ್ಸು ಇನ್ನು ಮಗುವನ್ನು ಕೊಡಲು ಸಾಧ್ಯವಿಲ್ಲವೆಂದೂ, ಗರ್ಭಕ್ಕೆ ಆ ಚೈತನ್ಯ ಇಲ್ಲವೆಂದಲ್ಲವೆಂದೂ ಖಡಾಖಂಡಿತವಾಗಿ ತಿಳಿದ ಮೇಲೆ ತುಂಬಾ ಖಿನ್ನಳಾದಳು ಅವಳು. ದಿನೇ ದಿನೇ ಕಾಡತೊಡಗಿತು ಈ ವಿಷಯ.
ಜಯಂತನೂ ಇದಕ್ಕೆ ಹೊರತಲ್ಲ. ತಾನು ಎಲ್ಲವನ್ನೂ ಕಂಡುಕೊಂಡ ರೂಪಾಳಲ್ಲಿ ಈಗ ತುಂಬಾ ಕನಿಕರಗೊಂಡ. ಇತ್ತ ಕೆಲಸದ ಕಡೆ ಕೂಡಾ ಗಮನವಿಡಲಾರ, ಇದೊಂದು ರೀತಿಯ ದುಗುಡ ಇಡೀ ಮನೆಯನ್ನಾವರಿಸಿತ್ತು.
ರೂಪಾಳ ನೋವು ಮತ್ತು ರೇಣುಕಾಳ ನೋವು ಎರಡೂ ಭಿನ್ನವಾಗಿದ್ದರೂ ಅವರನ್ನು ಒಳ್ಳೆಯ ಸ್ನೇಹಿತೆಯರನ್ನಾಗಿಸಿದ್ದು ಈ ನೋವುಗಳೇ. ಮೊದಲು ಕೆಲಸಕ್ಕೆಂದು ಬಂದ ರೇಣುಕಾಳಲ್ಲಿ ತಾನು ನೋಡಿದ್ದು ನೋವಿನ ಕರಾಳ ಮುಖವೆಂದು ಗೊತ್ತಾದೊಡನೇ ತುಂಬಾ ಹತ್ತಿರವಾಗಿದ್ದಳು ರೂಪ.
ಒಬ್ಬಂಟಿಯಾಗಿದ್ದು ಅಸಹ್ಯವಾದ ಬದುಕು ಎಂದು ಬದುಕನ್ನೇ ದ್ವೇಷಿಸುವ ರೇಣುಕಳಿಗೆ ರೂಪಾ ಮತ್ತು ಜಯಂತ್ ದಂಪತಿ ಇನ್ನೊಂದು ರೀತಿಯ ತನ್ನಂತಿರುವ ಪ್ರಾಣಿಗಳು ಎಂದೆನಿಸಿ ಅವರನ್ನು ಸಮೀಪಿಸಿಕೊಂಡಳು.
-೨-
ಇಂತಹದ್ದೊಂದು ತಿರುವನ್ನು ತಾನು ಬಯಸಿರಲಿಲ್ಲ ಎಂದುಕೊಳ್ಳುತ್ತಾ ಜಯಂತ್ ತನ್ನ ಮನದ ಕೋಣೆಯಲ್ಲಿ ತಾನೇ ವಿಶ್ರಾಂತಿಯಲ್ಲಿದ್ದಾಗ ಅವನನ್ನು ಹೆಚ್ಚು ಕಾಡಿದ್ದು ರೂಪ. ಅದೇನೋ ಇತ್ತೀಚೆಗೆ ಸ್ವಲ್ಪ ಅಸಡ್ಡೆಯಂತೆ ವರ್ತಿಸುತ್ತಾಳೆ ಎಂದೆನಿಸಿ ಒಂದು ತಿಂಗಳಿನಿಂದ ಅವಳನ್ನು ಹತ್ತಿರದಿಂದ ನೋಡಿದ. ರೂಪಾಳಿಗೆ ಮಗುವಿನ ಅದಮ್ಯ ಬಯಕೆ. ತಾನು ಸಶಕ್ತ ಹೌದಾದರೂ ಅವಳಲ್ಲ ಎಂದು ಅವಳಿಗೂ ತಿಳಿದಿದೆ.  ಮತ್ತೆ ಅದು ಯಾಕೆ ಹೀಗೆ ಹಠ ಮಾಡುತ್ತಾಳೆ ಎಂದು ತುಂಬಾ ಯೋಚನೆಯಲ್ಲಿದ್ದ.
ಒಂದು ದಿನ ರೂಪಾಳ ಮಾತು ಈತನನ್ನು ಇಂಚಿಂಚಾಗಿ ಚುಚ್ಚಿದಂತೆ ಭಾಸವಾಯಿತು. ಯಾವುದೇ ಕಾರಣಕ್ಕೂ ಇಂತಹ ಸಂಬಂಧವನ್ನು ಒಪ್ಪವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರೂ ಸಾಯುವ ಮಾತುಗಳನ್ನಾಡಿ ಒಪ್ಪಿಸಿದ್ದಳು ರೂಪ. ಯಾವುದಾದರೂ ಅನಾಥಾಶ್ರಮದ ಮಗುವನ್ನು ಪಡೆಯಬಯಸಿದ ತನ್ನ ನಿಲುವನ್ನು ಅವಳು ಸ್ವಾಗತಿಸದೇ ತನ್ನ ಮತ್ತು ರೇಣುಕಳ ಸಂಬಂಧದಿಂದ ಮಗುವಾಗಲಿ ಎಂದು ಬಯಸಿದ್ದಳು. ಹೇಗೆ ಒಪ್ಪುವುದು? ದೊಡ್ಡ ದ್ರೋಹವೆಂಬಂತೆ ವಿಷಾದವಾಗಿ ಸುಮಾರು ದಿನ ಯೋಚಿಸಿ ಕೊನೆಗೆ ಸರಿ ಎಂದ ಜಯಂತನ ಕಣ್ಣುಗಳಲ್ಲಿ ಯಾವುದೇ ಮಿಂಚುಗಳಿರಲಿಲ್ಲ ಬದಲಾಗಿ ರೂಪಾ ಯಾವುದೋ ಒಂದು ರೀತಿಯ ವಿಚಿತ್ರ ಸಮಾಧಾನಗೊಂಡವಳಂತಿದ್ದಳು.
ತಾನು ಹೇಗೋ ಜಯಂತನನ್ನು ಒಪ್ಪಿಸಿದೆ. ಆದರೆ ರೇಣುಕಳನ್ನು ಒಪ್ಪಿಸಿಕೊಳ್ಳುವ ಬಗೆ ಹೇಗೆ? ಅಂತರಂಗದ ಮಾತುಗಳನ್ನ ಸ್ನೇಹಿತೆಯಲ್ಲಿ ಆಡಬಹುದೇನೋ ಎನ್ನುತ್ತಾ ಅವಳು ತುಂಬಾ ಯೋಚನೆ ಮಾಡಿ ಒಂದು ದಿನ ಏಕಾಂತದಲ್ಲೇ ರೇಣುಕಳಲ್ಲಿ ಹೇಳಿದಳು. ಮೊದಲಿಗೆ ಹೌಹಾರಿದ ರೇಣುಕ ಕ್ರಮೇಣ ತನ್ನ ಪ್ರಾಣವೇ ಜೊತೆಯಲ್ಲಿ ಇರದಿದ್ದ ಮೇಲೆ ಈ ದೇಹದಿಂದ ಇನ್ನೊಬ್ಬರಿಗೆ ತಾಯಿಯಾಗುವುದು ಎಂದೇ ತಿಳಿದು ಒಪ್ಪಿದಳು. ಇದೂ ಕೂಡಾ ರೂಪಾಳ ಪಾಲಿಗೆ ಒದಗಿದ ಅತ್ಯಂತ ಖುಷಿಯ ವಿಚಾರವಾಗಿತ್ತು.
ಸ್ವಲ್ಪ ಸಮಯವಾದ ಮೇಲೆ ಹೇಗೋ ಇಬ್ಬರನ್ನೂ ಒಪ್ಪಿಸಿ ತಾನು ಅವರ ಕೂಡುವಿಕೆಗೆ ಸಮಯವನ್ನೂ ಕೊಟ್ಟು ಅಳುತ್ತಾ ಕುಳಿತುಬಿಟ್ಟಳು. ಯಾವುದೇ ಭಾವವಿಲ್ಲದ ಕೇವಲ ಕೀಲಿಕೈಕೊಟ್ಟರೆ ತಿರುಗುವಂತಹ ಬೊಂಬೆಯಂತೆ ಸುಮಾರು ದಿನ ಮೌನವಾಗಿದ್ದಳು ರೂಪ. ಜಯಂತನೂ ತಾನಾಯಿತು ತನ್ನ ಪಾಡಾಯಿತು ಎನ್ನುತ್ತಾ ಸೋತ ಸೇನೆಯ ನಾಯಕನಂತೆ ಇದ್ದ. ರೇಣುಕಾ ಗೆಲುವಾದಳು, ನಗುತಿದ್ದಳು ಕೆಲವು ದಿನ. ಕೆಲವು ದಿನ ಹುಚ್ಚಿಯಾದಂತಿದ್ದಳು.
ರೇಣುಕಾಳ ಹೊಟ್ಟೆಯಲ್ಲಿ ತನ್ನ ಮಗುವೇ ಹುಟ್ಟಲಿದೆ ಎಂದು ರೂಪಾ ಅತ್ಯಂತ ವಿಶ್ವಾಸವಾಗಿ ನಂಬಿ ಅವಳನ್ನು ಕಾಯುತ್ತಿದ್ದಳು.
-೩-
ತಿಂಗಳುಗಳು ಸವೆದು ಹೋದಂತೆಲ್ಲಾ ರೇಣುಕಾ ಮೈತುಂಬಿಕೊಂಡು ಹೆರಿಗೆಗೆ ಕಾಯುವ ಪ್ರಕೃತಿಯಾದಳು. ರೂಪಾ ಆಶ್ಚರ್ಯದಿಂದ ಅವಳನ್ನು ಗಮನಿಸುತ್ತಾ ಇದ್ದಳು. ಹೀಗೇ ರೇಣುಕಾಳಿಗೆ ತನ್ನ ಗಂಡನ ನೆನಪು ಹೆಚ್ಚಾಗಿ ಹರಿಯತೊಡಗಿತು. ಮಗುವಿನ ಗುದ್ದಾಟ ಹಿತವಾದಂತೆ, ಗಂಡ ಮನದೊಳಗೆ ಇರಿದಂತೆ ಭಾಸವಾಯಿತು. ಇದು ನಿನ್ನದೇ ಮಗು, ನೀನೇ ಅಮ್ಮಾ ಎಂದು ಕರೆದಂತೆ ಭಾಸವಾಗುತ್ತಿತ್ತು. ಸುಮಾರು ೫-೬ ತಿಂಗಳ ಮಗು ಹೊಟ್ಟೆಯಲ್ಲಿ ತನ್ನ ಮೈಯ್ಯ ಮನಸ್ಸಿನ ವಿಪರೀತ ಬದಲಾವಣೆಗಳಿಗೆ ಕಾರಣವಾಗುತ್ತಾ ಹೋಯಿತು.
ಈ ಮಗುವನ್ನು ಹೆತ್ತು ಕೊಟ್ಟರೆ ನಾನು ಪುನಃ ಒಬ್ಬಂಟಿಯಾಗುತ್ತೇನೆ ಎನ್ನುವ ಭಾವ ಕ್ರಮೇಣ ಹೆದರಿಕೆಯಾಗುತ್ತಾ ಸಾಗತೊಡಗಿತು. ಅದು ನಿಮಿಷ ನಿಮಿಷಕ್ಕೂ ತನ್ನ ಘೋರತೆಯನ್ನು ಹೆಚ್ಚಿಸತೊಡಗಿತು. ಇಲ್ಲ ಯಾವ ಕಾರಣಕ್ಕೂ ಈ ಮಗುವನ್ನು ಯಾರಿಗೂ ಕೊಡಲಾರೆ ಎನ್ನುವ ಗಟ್ಟಿಯ ನಿರ್ಧಾರಕ್ಕೆ ಬಂದಂತೆ ರೂಪಾ ಮತ್ತು ಜಯಂತರ ಮುಖ ಇನ್ನೊಂದು ರೀತಿ ಕಾಡಿದಂತೆ ಬೇಡಿದಂತೆ ಅನ್ನಿಸತೊಡಗಿತು. ಏನು ಮಾಡುವುದು ಈ ಘಟನೆಗಳಿಗೆ? ಮೊದಲಿನ ವಿಶ್ವಾಸವೂ ಅವರ ಪ್ರೀತಿಯೂ ಇಂದು ಖಂಡಿತ ದೊಡ್ಡದು ಅನ್ನಿಸುತ್ತಿಲ್ಲ. ಕೇವಲ ಕೆಲವು ತಿಂಗಳುಗಳಲ್ಲಿ ಆದ ಮಾರ್ಪಾಡು ಇದು. ಪ್ರತಿಯೊಂದು ಜೀವಕ್ಕೂ ಒಂದು ದೀರ್ಘವಾದ ನೋವು ಎಂದಿರಬೇಕೇನೋ? ಆ ನೋವನ್ನು ವಿಶ್ಲೇಷಿಸುತ್ತಾ ಸಾಗುವಾಗ ಸಣ್ಣ ನಲಿವುಗಳೆಲ್ಲ ಗೌಣ. ಅದೇ ಬೆಳಗು ಅದೇ ಮನೆಯ ಕತೆಗಳು ಎಂದುಕೊಳ್ಳುತ್ತಲೇ ಜೀವನವನ್ನು ಒಂದೊಂದು ಹೆಜ್ಜೆಯೂರಿ ಸಾಗುವುದು ಮಾನವನಿಗೆ ಅರಿವಾಗದೇ ಸಾಗುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯೊಳಗೆ ಇದೊಂದು ನಡೆದ ಘಟನೆ. ಯಾವ ಜಗತ್ತಿಗೂ ಗೊತ್ತಾಗಲಾರದು ಎಂದುಕೊಂಡಳು.
ಇಂದೇ ಕೊನೆಯ ಬಾರಿಯಾಗಬೇಕು. ಹೇಗಾದರೂ ಒಂದು ಖಡಕ್ ಎಂಬಂತೆ ಉತ್ತರಕೊಟ್ಟು ತೀರ್ಮಾನವಾಗಬೇಕು. ಇದುವರೆಗೆ ನಡೆದ ಘಟನೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವಂತಿಲ್ಲವಾದರೂ ಮುಂದೆ ಹೇಗಿರಬೇಕು. ತನಗೆ ಸಾಧ್ಯವಿಲ್ಲ ಎಂದುಕೊಂಡಳು.
ಆ ದಿನದ ಕೆಲಸ ಮುಗಿಸಿ ಮನೆಗೆ ಬಂದು ಬಾಗಿಲು ಹಾಕಿಕೊಂಡು ಸುಮಾರು ಬಾರಿ ಹೇಳಿದಂತೆ ಒಲಿಸಿದಂತೆ ಅಭಿನಯಿಸಿದಳು ರೇಣುಕ. ಏಕಪಾತ್ರಾಭಿನಯದ ರೂಪಾ ಮತ್ತು ಜಯಂತನ ಪಾತ್ರಗಳು ತನ್ನನ್ನು ಸೋಲಿಸುತ್ತಿದೆ ಎಂದೆನಿಸತೊಡಗಿತು. ಇದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ ತಾನು ಯಾವುದೋ ಊರಿಗೆ ತೆರಳುತ್ತೇನೆ ಎಂದು ನಿರ್ಣಯಿಸಿ ಮನೆಯಿಂದ ಹೊರಗೆ ಬಂದಳು.
ಮನೆಯನ್ನು ನೋಡಿ, ರೂಪಾ ಜಯಂತರ ಮುಖಗಳನ್ನು ಕಣ್ಣಮುಂದೆ ತಂದು, ಸುಖವಾಗಿರಲಿ ಎಂದು ಎದೆದುಂಬಿ ಹಾರೈಸಿ ಸೂರ್ಯನ ಚಲನೆಯಂತೆ ನೇರ ಹೊರಟಳು ರೈಲುತಾಣಕ್ಕೆ. ಬೀಳ್ಕೊಡಲು ಸ್ನೇಹ, ಪ್ರೇಮ, ನಿಷ್ಕಳಂಕ ಬದುಕಿನ ಓಟ ಜೊತೆಯಲ್ಲಿತ್ತು.


೦೯-೦೧-೨೦೧೩
(ಈ ಕತೆ ಪಂಜು ಮ್ಯಾಗಝಿನ್ ನಲ್ಲಿ ಪ್ರಕಟವಾಗಿತ್ತು.. ಲಿಂಕ್ :http://www.panjumagazine.com/?p=89 )

Friday 9 August 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೯ (ತಾಂಬೂಲ ಭಕ್ಷಣಂ)

ಯಕ್ಷಗಾನ ನನಗೆ ಚೆನ್ನಾಗಿತ್ತು. ಚಿಕ್ಕಪ್ಪನಿಗೆ ನೂರರಲ್ಲಿ ಒಂದು, ನನಗೆ ಬರೀ ಒಂದೇ! ಹಾಸ್ಯದ ಸನ್ನಿವೇಶಕ್ಕೆ ದೊಡ್ಡದಾಗಿ ನಕ್ಕಾಗ ವಿಚಿತ್ರವೆಂಬಂತೆ ಚಿಕ್ಕಪ್ಪ ನೋಡಿದ್ದು ಮಾತ್ರ ಹಾಸ್ಯದ ಮೇಲೆ ಸಂಶಯವನ್ನುಂಟು ಮಾಡಿತು. ಆದರೂ ಮೊದಲಿನ ಹಾಸ್ಯದ ಔಚಿತ್ಯ ಮತ್ತು ಗಂಭೀರತೆ ಈಗಿನ ಯಾವ ಕಲಾಪ್ರಕಾರದಲ್ಲೂ ಇಲ್ಲವೇನೊ. ಬೆಳಗ್ಗಿನ ಅಷ್ಟೇನೂ ಭಯಂಕರವಲ್ಲದ ಚಳಿಗೆ ಮರ್ಯಾದೆ ಕಡಿಮೆಯಾಗಬಾರದೆಂದು ತಲೆಗೆ ಒಂದು ಬಟ್ಟೆಯನ್ನು ಸುತ್ತಿ ಹೊರಟೆವು. ಮನುಷ್ಯನಿಗೆ ನಡೆಯುವಾಗ ನಿದ್ದೆ ಮಾಡಲಿಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ನಿದ್ದೆ ಇರಲಿಲ್ಲವಷ್ಟೆ.

ಮಗನೆ, ಇದೇ ಗದ್ದೆಯಲ್ಲಿ ಮೊದಲು ಭಯಂಕರ ಯಕ್ಷಗಾನಗಳು ಆಗ್ತಿತ್ತು. ಅದೂ ಆಗಿನ ಕಲಾವಿದರು ಜೀವ ಬಿಟ್ಟು ಕುಣಿಯುತ್ತಿದ್ದರು. ಈಗಿನ ಹಾಗೆ ಸಮತಟ್ಟಿನ ನೆಲವೂ ಅಲ್ಲ, ಕುಣಿದು ಕಾಲು ಉಳುಕಿಸಿಕೊಂಡು ನಾಳಿನ ಯಕ್ಷಗಾನಕ್ಕೆ ಋಷಿಯ ಪಾತ್ರ ಮಾಡಿದ ಕಲಾವಿದರೂ ಇದ್ದಾರೆ. ಈಗ ಹಾಗೇನಿಲ್ಲ ಒಂದೋ ರಪರಪ ಐವತ್ತು ಸಲ ತಿರುಗುವುದು, ಅರ್ಥ ಹೇಳುವಾಗ ಬೆಬ್ಬೆಬೆ ಹೇಳುವುದು. ಪುಣ್ಯಕ್ಕೆ ಇಂಗ್ಲೀಷೊಂದು ಮಾತನಾಡುವುದಿಲ್ಲ ಎನ್ನುವುದು ಪುಣ್ಯ.

ಹಾಗೇನಿಲ್ಲ ಚಿಕ್ಕಪ್ಪ. ಎಷ್ಟೊ ಜನ ಕಲಿತವರು ತುಂಬಾ ಚಂದ ಮಾಡ್ತಾರೆ. ಆಗಿನ ವ್ಯವಸ್ಥೆ ಹಾಗಿತ್ತಷ್ಟೆ. ಈಗ ಹಾಗಿಲ್ಲ. ಒಳ್ಳೇ ವಿಷಯ ಸಂಪಾದನೆ ಮಾಡಿ ನಂತರ ಮಾತನಾಡುವವರು ಎಷ್ಟೋ ಕಲಾವಿದರಿದ್ದಾರಲ್ಲ. ನಿಮ್ಮ ಹಳೇ ಬಣ್ಣದವೇಷದ ಬಾಯಿಯಲ್ಲಿ ಆರ್ಭಟ ಮಾತ್ರವಿತ್ತು. ಬೇರೆ ಯಾವ ಪಾತ್ರವೂ ಮಾಡುತ್ತಿರಲಿಲ್ಲ. ಈಗಿನ ಕಾಲದಲ್ಲಿ ರಾಕ್ಷಸ ನಾಳಿನ ಇಂದ್ರನಾಗುತ್ತಾನೆ.

ಹೌದು ಮಗನೆ, ಅದು ಸರಿ. ಕಾಲಕ್ಕೆ ತಕ್ಕ ಹಾಗೆ ಕೋಲ. ಒಂದು ಎಲೆ ಅಡಕ್ಕೆ ತಿಂದು ಹೊರಡುವ. ಸ್ವಲ್ಪ ಬೆಚ್ಚಗೆ ಇರ್ತದೆ.

ಎಲೆ ಅಡಕ್ಕೆ ತಿನ್ನಲಿಕ್ಕೆ ಶುರು ಮಾಡಿದ್ದು ನಿನ್ನಪ್ಪನ ಜೊತೆಗೇ ಮಾರಾಯ. ನಮ್ಮ ಅಪ್ಪ ತಿನ್ನುತ್ತಿದ್ದರು. ಒಳ್ಳೇ ಕುಣಿಯ ಹೊಗೆಸೊಪ್ಪು. ಅದೂ ಮಂಗಳೂರಿನ ಯಾವುದೋ ಪೈ ಅಂಗಡಿಯಿಂದ ತಿಂಗಳಿಗೊಮ್ಮೆ ತರಿಸುವುದಾಗಿತ್ತು. ಹೀಗಾಗಿ ಮನೆಯಲ್ಲಿ ಹೊಗೆಸೊಪ್ಪಿನ ಸ್ಟಾಕ್ ಯಾವತ್ತೂ ಇರುತ್ತಿತ್ತು. ಬೇರೆ ಯಾರೂ ಎಲೆ ತಿನ್ನುತ್ತಿರಲಿಲ್ಲ.

ನಿನ್ನಪ್ಪ ಎಲೆ ತಿನ್ನಲು ಶುರುಮಾಡಿದ ಬಗ್ಗೆ ಒಂದು ಸಣ್ಣ ಕತೆ ಇದೆ ಮಾರಾಯ. ಆಗಿನ ಕಾಲದ ಕಬಡ್ಡಿ ಆಟದ ಒಂದು ಕತೆ ಹೇಳ್ತೇನೆ ನಿನಗೆ. ಕಬಡ್ಡಿಯ ಜೊತೆಗೆ ಮನೆಗೆ ತಲುಪಬಹುದು.

ಸುಮಾರು ಕಾಲದಿಂದ ಕಬಡ್ಡಿ ಆಟ ಆಡುತ್ತಿದ್ದೆವು ನಾವು. ಶಾಲೆಯ ದಿನಗಳಿಂದಲೂ ನಿನ್ನಪ್ಪ, ಜಗ್ಗು ಎಲ್ಲರೂ ಒಳ್ಳೆಯ ಕಬಡ್ಡಿ ಆಟಗಾರರು. ನಾನು ಜೊತೆಗೆ ಎಷ್ಟೊ ಆಟಗಳಿಗೆ ಹೋಗಿದ್ದೇನೆ. ನೂರಿನ್ನೂರು ರೂಪಾಯಿಗಳ ಬಹುಮಾನಕ್ಕಿಂತಲೂ ಪ್ರತಿಷ್ಟೆಯ ಆಟವಾಗಿತ್ತು ಕೆಲ ವರ್ಷಗಳಿಗೆ. ಅದೊಂದು ದಿನ ಆನೆಕಲ್ಲಿನ ಶಾಲೆಯ ಮೈದಾನದಲ್ಲಿ ಕಬಡ್ಡಿ ಪಂದ್ಯ. ಸುಮಾರು ಆಟಗಾರರು ಬಂದಿದ್ದರು. ಜಗ್ಗುವಿನ ಟೀಮಿನಲ್ಲಿ ನಾನೂ ಸೇರಿಕೊಂಡಿದ್ದೆ. ಹೀಗೆ ನಾನೂ ನಿನ್ನಪ್ಪನೂ ಬೆಳಗ್ಗೆ ಏಳು ಘಂಟೆಗೆ ಮನೆಯಿಂದ ಹೊರಟು ಜಗ್ಗು ಮತ್ತೆ ಉಳಿದವರ ಜೊತೆ ಹೇಗೂ ಆನೆಕಲ್ಲಿನ ಶಾಲೆಗೆ ತಲುಪಿದೆವು.

ಕಬಡ್ಡಿಗೆ ಹೆಸರು ಕೊಟ್ಟು ಆಡಿಯೂ ಆಯಿತು. ಎಲ್ಲರಿಂದ ಬಲಾಢ್ಯ ಮತ್ತು ಚುರುಕಿನ ಆಟಗಾರರಿದ್ದುದರಿಂದ ಮತ್ತು ಹೆಚ್ಚಿನ ಅಭ್ಯಾಸವಿದ್ದುದರಿಂದ ಎರಡೋ ಮೂರೋ ಪಂದ್ಯ ಗೆದ್ದೆವು. ಮತ್ತೆ ನಮ್ಮ ಆಟ ಇದ್ದುದು ಮಧ್ಯಾಹ್ನದ ಮೇಲೆಯೇ. ಊಟ ಮಾಡುವುದಕ್ಕೆಂದು ಅಲ್ಲಿಯೇ ಹೊಳೆಯ ಹತ್ತಿರ ಇದ್ದ ಹೋಟೆಲ್ ಬಳಿ ಬಂದು ಏನನ್ನೋ ತಿಂದು ಇನ್ನೂ ತುಂಬಾ ಸಮಯವಿದ್ದುದರಿಂದ ಹೊಳೆಯಲ್ಲಿ ಈಜಾಡಿ ಆಟದ ತರಚುಗಾಯಗಳ ನೋವನ್ನು ಅನುಭವಿಸಿದೆವು.

ನಂತರ ಏನೂ ಕೆಲಸವಿರಲಿಲ್ಲವಾದ್ದರಿಂದ ಅಲ್ಲಿ ಬಸ್ ಸ್ಟಾಂಡ್ ಎಂದು ಕರೆಯಲ್ಪಡುವ ಜೋಪಡಿಯ ಒಳಗೆ ಹಾಕಿದ್ದ ಕರೆಂಟ್ ಕಂಬದ ಬೆಂಚಿನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಜಗ್ಗುವೋ ಅಲ್ಲ ಇನ್ನೊಬ್ಬನಾರೋ ಎಲೆ ಅಡಿಕೆ ತಂದು ತಿನ್ನತೊಡಗಿದರು. ನಿನ್ನಪ್ಪ ಸುಮ್ಮನಿರಲಾರದೆ ಮನೆಯಲ್ಲಿರುವ ತಾಂಬೂಲದ ಪೆಟ್ಟಿಗೆ, ತೆಂಗಿನ ಮರಕ್ಕೆ ಹಬ್ಬಿದ ಎಲೆಬಳ್ಳಿ ಮುಂತಾದುವುಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ಕೊನೆಗೆ ಹೊಗೆಸೊಪ್ಪಿನ ವಿಷಯ ಬಂತು. ನಮ್ಮ ಮನೆಯ ಹೊಗೆಸೊಪ್ಪು ಒಂದು ಸಣ್ಣ ತುಂಡು ಸಾಕು, ಇದೆಲ್ಲ ಎಂತದ್ದು? ಲೆಕ್ಕಕ್ಕೆ ಇಲ್ಲ ಎನ್ನುವ ಮಾತುಗಳನ್ನೂ ಸೇರಿಸಿ ಬಿಟ್ಟ.

ಭಟ್ರೆ, ನೀವು ತಿಂದಿದ್ದೀರಾ? ಸುಮ್ಮನೆ ಬಡಾಯಿ ಕೊಚ್ಚುವುದೇನು ಬೇಡ. ತಾಕತ್ತಿದ್ದರೆ ಒಮ್ಮೆ ಎಲೆಅಡಿಕೆ ಹಾಕಿ ನೋಡಿ ಹೊಗೆಸೊಪ್ಪಿನ ಸಹಿತ ಎಂದನೊಬ್ಬ. ನಿನ್ನಪ್ಪನ ದೊಡ್ಡ ಮರ್ಯಾದೆ ಅಲ್ಲೆಲ್ಲೋ ಹರಾಜಾದಂತನಿಸಿತೇನೋ, ಒಮ್ಮೆಲೆ ಓಹೋ, ನೋಡು ನನ್ನ ತಾಕತ್ತು ಎಂದು ಅರ್ಧ ಬೆರಳಿನಷ್ಟುದ್ದದ ಹೊಗೆಸೊಪ್ಪಿನ ಸಹಿತ ಎಲೆ ಅಡಿಕೆ ಜಗಿದ. ಅದೇನಾಯಿತೋ ಏನೋ ನಿನ್ನಪ್ಪ ಕೆಂಪು ಕೆಂಪಗಾದ. ಮುಖದಲ್ಲಿ ಬೆವರು ಧಾರಾಕಾರ ಶುರುವಾಯಿತು. ವಾಂತಿ ಬಂದಂತೆ ವ್ಯಾಕ್ ಎಂದ. ಕಣ್ಣುಗಳನ್ನ ಗಿರ ಗಿರ ತಿರುಗಿಸಿದ.

ನಮಗೆ ಮೊದಲು ಮೋಜೆನ್ನಿಸಿದರೂ ಕ್ರಮೇಣ ನಿನ್ನಪ್ಪ ಜೋಪಡಿಗೆರಗಿ ಕುಸಿದು ಕುಳಿತ. ಆಗ ಹೆದರಿಕೆ ಶುರುವಾಗತೊಡಗಿತು ನಮಗೆ. ಹೋಟೆಲಿನಿಂದ ಮಜ್ಜಿಗೆ ನೀರು ತಂದು ಕುಡಿಸಿದೆವು, ಸರಿ ಹೋಗಲಿಲ್ಲ. ಯಾರೋ ಬಸ್ ಸ್ಟಾಂಡಿಗೆ ಬಂದವರು, ಸ್ವಲ್ಪ ಮಲಗಲಿ, ಎಲ್ಲಾ ಸರಿ ಹೋಗುತ್ತದೆ, ತಲೆಗೆ ಏರಿರಬೇಕು ಹೊಗೆಸೊಪ್ಪು ಎಂದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಬಡ್ಡಿ ಆಟವೂ ಇದ್ದಿತ್ತು. ನಿನ್ನಪ್ಪನಿಲ್ಲದೇ ಆಡಿದೆವು. ಒಂದು ಪಂದ್ಯ ಗೆದ್ದರೂ, ನಂತರದ ಪಂದ್ಯದಲ್ಲಿ ಸೋತೆವು. ಅಷ್ಟಾಗುವಾಗ ಸಂಜೆಯಗಿತ್ತು. ನಿನ್ನಪ್ಪನ ನೆನಪೇ ಇರಲಿಲ್ಲ ನಮಗೆ. ಪಂದ್ಯ ಮುಗಿದ ಕೂಡಲೇ ಬಸ್ ಸ್ಟಾಂಡಿಗೆ ಬಂದು ನೋಡಿದರೆ ನಿನ್ನಪ್ಪ ಸುಖನಿದ್ರೆಯಲ್ಲೇ ಇದ್ದ. ಎಬ್ಬಿಸಿದರೂ ಏಳಲಿಲ್ಲ.

ನಮ್ಮ ಟೀಮಿನ ಎಲ್ಲರೂ ಹೊರಟು ಹೋದರು. ನಾನು ಮತ್ತು ಜಗ್ಗ ಮಾತ್ರ ಉಳಿದವರು. ಕೊನೆಗೆ ನೀರು ತಂದು ಮುಖಕ್ಕೆ ಹಾಕಿ, ಇನ್ಯಾರೋ ಹೇಳಿದ ತೆಂಗಿನ ಎಣ್ಣೆ ತಲೆಗೆ ಹಾಕಿ ಮತ್ತೊಂದು ಘಂಟೆಯ ನಂತರ ಅಲ್ಲಿಂದ ನಿನ್ನಪ್ಪನ ಜೊತೆಗೂಡಿ ಮನೆಗೆ ಹೊರಟೆವು.

ಇದಾಗಿ ಸುಮಾರು ದಿನಗಳು ನಿನ್ನಪ್ಪ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಕೊನೆಗೆ ಒಂದೊಂದು ಸಲ ಎಲೆ ಅಡಿಕೆ ಪ್ರಾರಂಭಿಸಿದವರು ಯಕ್ಷಗಾನ, ಬೇರೆ ಕಡೆಯ ಮದುವೆಗಳು ಎಂದೆಲ್ಲಾ ತಿನ್ನತೊಡಗಿದರು. ನಂತರ ಅದನ್ನು ಅಭ್ಯಾಸ ಮಾಡಿಕೊಂಡರು.

ಈಗಲೂ ಅರ್ಧ ಬೆರಳಿನಷ್ಟು ಹೊಗೆಸೊಪ್ಪಿಲ್ಲದಿದ್ದರೆ ಅವರಿಗೆ ತಿಂದದ್ದು ಸಮಾಧಾನ ಇಲ್ಲ. ಅದೂ ಸುಮ್ಮನೇ ತಿಂದು ಉಗುಳುವುದಲ್ಲ. ಚಂದವೇ ಬೇರೆ. ಅದೊಂದು ಕಲೆಯೋ ಏನೋ? ಹಹ್ಹ..

ಎಲ್ಲಿದ್ದೇವೆ ಈಗ? ಹ್ಮ್.. ಇವತ್ತು ತೋಟದ ಕೆಲಸಕ್ಕೆ ಕೆಲಸದವರು ಬರ್ತಾರೆ. ಇನ್ನು ಮನೆಗೆ ಹೋಗಿ ಒಂದು ಸ್ವಲ್ಪ ಮಲಗಿ, ಚಾಯ ಕುಡಿದು ತೋಟಕ್ಕೆ ಹೋಗಬೇಕು.

ಹೌದಾ, ಕಷ್ಟ. ಈಗ ಜನವೂ ಸಿಗುವುದಿಲ್ಲ ಅಲ್ವ? ಸರಿ ಚಿಕ್ಕಪ್ಪ.. ನಾನು ಮತ್ತೆ ಬರ್ತೇನೆ. ಈಗ ನಾನು ಚಂದ ನಿದ್ದೆ ಮಾಡ್ಬೇಕು. ಮೊದಲೆಲ್ಲಾ ಯಕ್ಷಗಾನ ನೋಡಿದ ಮೇಲೆ ಮಲಗಿದರೆ ಪಾತ್ರಗಳು ಬಂದು ನಿದ್ದೆಯಲ್ಲಿ ಕುಣಿಯುತ್ತಿದ್ದವು. ಈಗ ಕುಣೀತದಾ ನೋಡ್ಬೇಕು..