Monday 30 January 2012

ಅನುಕೂಲದ್ದು ಯಾವುದೋ ಅದೇ ಸುಖ!

ನನ್ನ ಅಪ್ಪನಿಗೆ ಒಂದು ಒಳ್ಳೆ ಅಭ್ಯಾಸ ಅಂದರೆ ಎಲೆ ಅಡಿಕೆ ಮೆಲ್ಲುವುದು!. ಪಾರಂಪರಿಕವಾಗಿ ಬಂದ ಪಾನ್ ಸಮಾಚಾರವನ್ನು ನಾನೂ ಕೆಲವೊಮ್ಮೆ ತುಟಿಕೆಂಪಾಗುವಷ್ಟು ಮೆಲ್ಲುತ್ತೇನೆ. ಬಿಡಿ ಹೇಳುವ ವಿಷಯ ಅದಲ್ಲ..

ಹಾಗೇ ನಮ್ಮೂರಲ್ಲೊಬ್ಬ. ಎಲ್ಲಾ ಅರೆಹುಚ್ಚ ಅಂದರೂ ಅವನು ತಲೆಕೆಡಿಸಿಕೊಳ್ಳದ ನಿರ್ಲಿಪ್ತ. ಹಕ್ಕಿಯಂತೆ ಸ್ವತಂತ್ರ, ಎಲ್ಲಿಯೂ ನಿಲ್ಲಲಾರ, ಮನೆಯನ್ನೂ ಕಟ್ಟಿಲ್ಲ.

ಬಸ್ಸು ಬರದ ಊರಿನ ಬಸ್ ಸ್ಟಾಂಡು ಅವನ ವಾಸಸ್ಥಾನವಾಗಿ ಸಾರ್ಥಕವಾಗಿತ್ತು. ಕಟ್ಟಿದವರಿಗೂ ಮೀಸೆ ಮೇಲೆ ಕೈ ಹೋಗುವಷ್ಟು ಅವನು ಅಲ್ಲಿರುತ್ತಿದ್ದ. ಅವನಿಗೂ ಒಳ್ಳೆಯ ಅಭ್ಯಾಸ ಅಂದರೆ ಎಲೆಅಡಿಕೆ .

ಎಲೆಯ ನಾರು ತೆಗೆದು, ಸುಣ್ಣಬಳಿದು ಅಡಿಕೆಯ ಜೊತೆ ಸ್ವಲ್ಪ ಜಗಿದು.. ಸುಣ್ಣದ ಜೊತೆ ಸ್ವಲ್ಪ ತಂಬಾಕು ಹಾಕಿ ಗಂಧರ್ವ ನಾಡಿಗೆ ಒಡೆಯನಾಗುವುದು ಯಾರಿಗೆ ಬೇಡ? ಹಾಗೆಯೇ ಅವನೂ..

ಮನೆಮನೆಗೆ ಸಂಚಾರ ಮಾಡುವ ಆತ ಊಟ, ತಿಂಡಿ ಕೊಟ್ಟಷ್ಟು ಸ್ವೀಕರಿಸುತ್ತಾನೆ. ಜಾಸ್ತಿ ಆಯಿತೆಂದು ಚೆಲ್ಲುವುದಿಲ್ಲ, ಕಡಿಮೆ ಆಯಿತೆಂದು ಕೇಳುವುದಿಲ್ಲ. ಸಂಕೋಚವಿಲ್ಲದೆ ಮನೆಯಲ್ಲಿ ಎಲೆ ಅಡಿಕೆಯ ಬಟ್ಟಲು ಕಂಡ ಕೂಡಲೇ ಖುಷಿಪಟ್ಟು ಮೆಲ್ಲುತ್ತಾನೆ.

ಇನ್ನು , ನನ್ನ ತಂದೆಯೋ, ಹೊಗೆಸೊಪ್ಪನ್ನು ತುಂಬಾ ಖುಶಿಯಿಂದ ನೋಡಿಕೊಳ್ಳುವವರು. ಮೂಸಿಯೇ ತೆಗೆದುಕೊಳ್ಳುವವರು. ಅದನ್ನ ತಂದು ಜೋಪಾನವಾಗಿ ಎರಡು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಇಟ್ಟುಕೊಳ್ಳುವುದು. ಒಂದೊಂದೇ ಎಳೆಯನ್ನು ತೆಗೆದು ತಲೆಗೂದಲು ನೇಯುವಂತೆ ನೆಯ್ದು ಅದನ್ನ ತಟ್ಟೆಯಲ್ಲಿಡುವವರು.

ಒಂದು ದಿನ , ನಾನಿದ್ದೆ ಮನೆಯಲ್ಲಿ.. ಅಲ್ಲೇ ಎಲ್ಲೋ ಹೊರಗೆ ಹೋಗಿದ್ದರು ಅಪ್ಪ, ಅಮ್ಮ ಮನೆಯಲ್ಲಿರಲಿಲ್ಲ. ನಮ್ಮ ಹೀರೋ ಬಂದದ್ದೇ ಸುಮ್ಮನೆ ಬಂದು ಚಾವಡಿಯಲ್ಲಿ ಕುಳಿತಿದ್ದ. ನಾನಾಗಿ ಹೋಗಿ ಅನ್ನಲಿಲ್ಲ, ಅವರೂ ಹೋಗಲಿಲ್ಲ. ಸುಮ್ಮನೆ ಕಡೆಗಣಿಸಿದೆ ನಾನೂ ಏನೋ ಓದುತ್ತಾ ಕುಳಿತಿದ್ದೆ.

ಸ್ವಲ್ಪ ಹೊತ್ತಾಗಿ ಅವನು ಹೋದ, ಆದರೆ ನನ್ನ ಅಪ್ಪ ಬಂದವರೇ ಒಂದೇ ಸಮನೆ ನನ್ನನ್ನು ಬಯ್ಯಲಾರಂಭಿಸಿದರು . ಏಕೆ ಗೊತ್ತೇ?

ಅಪ್ಪನ ಕೈಚೀಲ ಎಂದೂ ಹೊರಗಿರುತ್ತದೆ, ಬೆಳಗ್ಗೆ ಬ್ಯಾಂಕಿನಿಂದ ಬಿಡಿಸಿಕೊಂಡು ಬಂದ ಒಂದು ಸಾವಿರ ರೂಪಾಯಿ ಅದರಲ್ಲಿತ್ತಂತೆ. ಆದರೆ ಆ ಸಾವಿರದ ಕಟ್ಟಿಂದ ಒಂದು ನೋಟು ಕೂಡಾ ಹೋಗಿರಲಿಲ್ಲ. ಬದಲಾಗಿ , ತಂದಿರುವ ಹೊಗೆಸೊಪ್ಪಿನ ಒಂದು ಎಳೆ ಮಾಯವಾಗಿತ್ತು...

ಯಾವುದು ಯಾರಿಗೆ ಮುಖ್ಯ ಎಂದರಿಯದೆ ಸುಮ್ಮನಿದ್ದೇನೆ.

Friday 27 January 2012

ಓಹ್ ನನ್ನ ಅದೃಷ್ಟವೇ !

ಏನು ಮಾಡೋದು, ನನ್ನ ದಿನ ಚೆನ್ನಾಗಿಲ್ಲ ಅನ್ಬೇಕು ಅಷ್ಟೆ.. ಎಲ್ಲರಗಿಂತ ಕೆಟ್ಟದಿನ ನನ್ನದ್ದಿರಬೇಕು !

ಬೆಳಗ್ಗೆ ಬೇಗ ಎದ್ದು, ಮೀಸೆಗೆ ಕತ್ತರಿ, ಮುಖಕ್ಕೆ ಬ್ಲೇಡ್ ಹಾಕಿ ಎರಡೇ ಎರಡು ಹನಿ ಪ್ಯಾರಾಚೂಟ್ ಎಣ್ಣೆ ತಲೆಗೇರಿಸಿ ಸ್ಕೂಲ್ ಹುಡುಗನ ರೀತಿ ತಲೆಬಾಚಿ, ಬೆಳ್ಳಿಬಿಳಿಯ ಅಂಗಿಧರಿಸಿ ಹೊರಟಿದ್ದೆ .
ಅವಳ ಭೇಟಿಗೋ ?ಗೊತ್ತಿಲ್ಲ !

ಎಂತಹ ಟ್ರಾಫಿಕ್ಕು.. ರಸ್ತೆ ದಾಟಬೇಕು. ಇನ್ನೊಬ್ಬ ನನ್ನಂತೆಯೇ ಇದ್ದವನ ಜೊತೆ ರಸ್ತೆ ದಾಟುತ್ತಿದ್ದೆ. ನನಗಿಂತ ಸ್ವಲ್ಪ ಸುಂದರ ಅವನು ಪಾಪಿ.

ಅಬ್ಬಾ, ರಿಕ್ಷಾ, ಕಾರು ಓಹ್ ಓಹ್ ಸ್ಕೂಟಿ ಬೈಕು, ಬಸ್ಸು... ದಾಟಲಾಗುವುದಿಲ್ಲ ! ಎರಡು ಅಡಿ ಮುಂದೆ , ಮೂರು ಅಡಿ ಹಿಂದೆ !

ಕೊನೆಗೆ ಧೈರ್ಯ ಮಾಡಿ ಇಬ್ಬರೂ ಮುಖ ಮುಖ ನೋಡಿಕೊಂಡು ರಸ್ತೆ ದಾಟತೊಡಗಿದೆವು.

ಅದೃಷ್ಟದಾಟ ಶುರುವಾಗಿದ್ದು ಆಗಲೇ. ಎಲ್ಲಿಂದಲೋ ಬಂದ ಕಾರು ಬಂದು ಢಿಕ್ಕಿ ಹೊಡೆಯಿತು ಅವನಿಗೆ, ಆಯತಪ್ಪಿ ಬಿದ್ದ ಅವನನ್ನು ನನಗೇ ಗೊತ್ತಿಲ್ಲದ ಮಾನವೀಯತೆ ಎತ್ತಿದ್ದು,ಮತ್ತೆ ಅವನನ್ನ ಆಸ್ಪತ್ರೆಗೆ ಸೇರಿಸಿದ್ದು ಎಲ್ಲಾ ಘಂಟೆಯೊಳಗೆ ನಡೆದೇ ಹೋಯಿತು..

ನನ್ನ ಬಿಳಿ ಅಂಗಿಯ ರಕ್ತದ ಕಲೆ ಹೋಗುತ್ತಾ ಇಲ್ಲ !
ಏನನ್ನಬೇಕು ನನ್ನ ಅದೃಷ್ಟಕ್ಕೆ ?


Friday 20 January 2012

ಈಶ್ವರ ತತ್ವ !

೧.
ನೋಡಕ್ಕೆ ಎಷ್ಟು ಒಳ್ಳೆಯವನು, ನಿಜವಾಗಿ ಹೀಗಾ ? ಯಾಕೆ ತೋರಿಕೆಗೆ ಒಳ್ಳೆತನ ? ಅಂತ ಪ್ರಶ್ನೆ ಮಾಡ್ಬೇಡಿ !!

ಸ್ನಾನದ ಮನೆ ನನ್ನ ಸ್ವಂತ , ಬೇಕಾದ ಹಾಗೆ ಇರ್ತೇನೆ,
ಹೊರಗೆ ಬಂದಾಗ ಬೇಕಾದ ದಿರಿಸು ಧರಿಸುವುದು ಸಾಮಾಜಿಕವಾದ ನನ್ನ ಧರ್ಮ!


೨.
"ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಯ್ದಿರಿಸಿದ ಸೀಟಲ್ಲಿ ಕುಳಿತು ನಾನೇ ಹೋರಾಟಗಾರನಾದಂತೆ !!
 
ಹೋಟೆಲ್ ಲಾಡ್ಜಿನ ಹಾಸಿಗೆ ಮೇಲಿನ ತಿಗಣೆಯೂ ಹಾಗಂತೆ !!



೩.
ಓಹ್. 
ಒಬ್ಬರೇ ನಗಾಡುವವರನ್ನ ಯಾಕೆ ಅನುಮಾನದಿಂದ ನೋಡ್ತೀರಿ ಸ್ವಾಮೀ..
ಒಬ್ಬರೇ ಅಳಬಹುದಾದರೆ, ಒಬ್ಬರೇ ಯಾಕೆ ನಗಬಾರದು ?


೪.ಹೆಣ್ಣು !! ಹೆಣ್ಣೆಂದರೆ ಹೂವು ಇದ್ದ ಹಾಗೆ ! ಒಪ್ಪುತ್ತೀರಾ? ತುಂಬಾ ಕವಿಗಳು ಹೇಳಿದ್ದಾರೆ ಸ್ವಾಮಿ. ಒಂದು ವೇಳೆ "ಹೆಣ್ಣು" ಹೂವಾಗಿದ್ದರೆ ..

೧. ಒಂದು ಹೂವಿಗಿಂತ ಇನ್ನೊಂದು ಹೂವು ಸುಂದರ, ಆಕರ್ಷಣೀಯ.
೨. ಹೂವಿನ ಚಂದ ಸ್ವಲ್ಪ ದಿನ ಮಾತ್ರ . 

ಹೆಣ್ಣು ಹೂವಿನ ಹಾಗೆ !!



೫.
ಸ್ವಲ್ಪ ಮಾತಾಡಿದರೆ ದೊಡ್ಡ ವಿದ್ವಾಂಸ ಅಲ್ಲ . 


ಏಕೆಂದರೆ ಕಿವಿಯೊಳಗೆ ಸೋಪಿನ ನೊರೆ ಇದ್ದ ಮಾತ್ರಕ್ಕೆ ಸ್ನಾನ ಮಾಡಿದ್ದಾನೆ ಅಂತ ನಿರ್ಧರಿಸೋಕ್ಕೆ ಆಗತ್ತಾ?