Wednesday 20 August 2014

ರನ್ನನ ಗದಾಯುದ್ಧ - ನೋಟ - ಭಾಗ ೩


೯.

ದ್ರೋಣನನ್ನು ನೋಡಿ ಮುಂಬರಿದು ಬರುತ್ತಾ ಕೌರವ ರುಧಿರಸ್ರೋತದಲ್ಲಿ ಮುಳುಗಿರುವ ಅಭಿಮನ್ಯುವನ್ನು ಕಾಣುತ್ತಾನೆ. ಅಭಿಮನ್ಯುವಿನ ಸಾಹಸವನ್ನು ಕೌರವನೇ ಮೆಚ್ಚುವುದಾದರೆ ಅಭಿಮನ್ಯು ಎಷ್ಟು ದೊಡ್ಡವನು? ರನ್ನನ ವರ್ಣನೆ ನೋಡಿ.

ಅರೆಮುಗಿದಿರ್ದ ಕಣ್ಮಲರಲರ್ದ ಮೊಗಂ ಕಡಿವೋದ ಕಯ್ಯುಮಾ-
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ-
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನಾಜಿವೀರನಂ

ಅರೆನಿಮೀಲಿತ ಕಣ್ಣುಗಳು, ಇನ್ನೂ ಅರಳಿರ್ದ ಮೊಗ, ಕತ್ತರಿಸಿಹೋದ ಕೈಗಳು, ಅವಡುಕಚ್ಚಿದವನು, ಶತ್ರುಶರಗಳಿಂದ ಜರ್ಜರಿತನಾಗಿ ಹೊಸನೆತ್ತರಿನ ಸಮುದ್ರದಲ್ಲಿ ಬಿದ್ದ ಅಭಿಮನ್ಯುಕುಮಾರನನ್ನು ಕೌರವ ನೋಡುತ್ತಾನೆ.

ದ್ರೋಣಾಚಾರ್ಯ ಮಾಡಿದಂತಹ ಪದ್ಮವ್ಯೂಹವನ್ನು ಹೊಕ್ಕು, ಶತ್ರುಗಳನ್ನು ಇಕ್ಕಿದ ನಿನ್ನಂತಹ ಗಂಡುಗಳು ಇದ್ದಾರೆಯೇ? ನಿನ್ನನ್ನು ಹೆತ್ತವಳೆ ವೀರಜನನಿ ಎಂದೆಲ್ಲಾ ಹೇಳುತ್ತಾ ಕೌರವನ ಬಾಯಿಯಿಂದ ಒಂದು ಅದ್ಭುತ ಸಾಲನ್ನು ಬರೆಯಿಸುತ್ತಾನೆ ರನ್ನ.

ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿತಂ ಪ್ರಾ-
ರ್ಥಿಸುವೆನಭಿಮನ್ಯು ನಿಜಸಾ-
ಹಸೈಕದೇಶಾನುಮರಣಮೆಮಗಕ್ಕೆ ಗಡಾ

ನಿನ್ನಂತೆ ಸಾಹಸವನ್ನು ಮೆರೆಯುವುದು ಅಸಂಭವ. ಅದರಲ್ಲಿ ಒಂದಂಶದ ಸಾಹಸವನ್ನಾದರೂ ನಾನು ತೋರಿಸುವಂತೆ ಮಾಡು ಎಂದು ಅಭಿಮನ್ಯುವನ್ನು ಪ್ರಾರ್ಥಿಸಿ ಮುಂದುವರೆಯುತ್ತಾನೆ.

ಮುಂದೆ ಮಗನಾದ ಲಕ್ಷಣಕುಮಾರನನ್ನು ಕಂಡು ಕಣ್ಣೀರು ತುಂಬಿ,

ಜನಕಂಗೆ ಜಲಾಂಜಲಿಯಂ
ತನೂಭವಂ ಕುಡುವುದುಚಿತಮುದುಗೆಟ್ಟೀಗಳ್
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ?

ಅಪ್ಪನಿಗೆ ತಿಲೋದಕವನ್ನು ಕೊಡುವುದು ಉಚಿತವಾದ್ದು. ಆದರೆ ನಾನು ನಿನಗೆ ಕೊಡುವಂತಾಯ್ತೇ. ಕ್ರಮತಪ್ಪುವುದು ಸರಿಯೇ?

ಎಂದಲ್ಲಿ ನಿಲಲಾರದಾ ಪ್ರದೇಶದಿಂ ತಳರ್ದು ಬರೆವರೆ ಶಲ್ಯನನ್ನೂ ಶಕುನಿಯನ್ನೂ ಕಂಡು ಅವರಿಗಾಗಿಯೂ ನೋಯುತ್ತಾನೆ. ಪಶ್ಚಾತ್ತಾಪದಲ್ಲಿರುವ ಕೌರವನನ್ನು ಸಂಜಯ ಸಂತೈಸಿ ಮುಂದೆ ಕರೆದುಕೊಂಡು ಸಾಗುತ್ತಾನೆ. ಭೀಮಸೇನನ ಗದಾಘಾತದಿಂದ ನೆತ್ತರಿನ ಪ್ರವಾಹದಲ್ಲಿ ಮುಳುಗಿರುವ ಯುವರಾಜ ದುಶ್ಶಾಸನನನ್ನು ಕಾಣುತ್ತಾನೆ.

೧೦.

ಸಂಜಯ ಹೇಳುತ್ತಾನೆ " ನೆಲದಲ್ಲಿ ಉರುಳಿಸಿ ಮೈ ಪುಡಿಪುಡಿ ಮಾಡಿ, ಕೊರೆದು, ತಿಂದು, ನೆತ್ತರು ಕುಡಿದರೂ ಹಿಡಿಂಬರಿಪು ತಣಿದನಿಲ್ಲ ದುಶ್ಶಾಸನನಂ". ಕೌರವ ಇದನ್ನ ಕೇಳಿ ದುಶ್ಶಾಸನನನ್ನ ನೋಡುತ್ತಾನೆ

ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ-
ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ
ಕುಡಿದನ ನೆತ್ತರಂ ಕುಡಿಯದನ್ನೆಗಮೆನ್ನಳಲೆಂತು ಪೋಕುಮೆಂ-
ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನಂ

ಸೊಂಟ ಮುರಿಯುವವರೆಗೆ ಏರಿ, ಎಲುಬುಗಳು ಪುಡಿಪುಡಿಯಾಗುವ ವರೆಗೆ ಒತ್ತಿ ಮೆಟ್ಟಿ, ಮೈ ಮಾಂಸದ ಮುದ್ದೆಯನ್ನಾಗಿ ಮಾಡಿ, ದೇಹವನ್ನ ಎರಡು ಹೋಳಾಗಿ ಸೀಳಿ ನೆತ್ತರನ್ನು ಮೊಗೆಮೊಗೆದು ಕುಡಿದವನ ನೆತ್ತರನ್ನು ಕುಡಿಯದೆ ಹೇಗೆ ಹೋಗಲಿ ಎಂದು ಅಡಿಗಡಿಗೆ ವಿಲಂಪಿಸಿ ತನ್ನ ತಮ್ಮನನ್ನು ನೋಡುತ್ತಾನೆ ಕೌರವ.

ರನ್ನ ಇಲ್ಲಿ ಒಂದು ಅತ್ಯುತ್ತಮವಾದ ಪದ್ಯ ಬರೆಯುತ್ತಾನೆ. ಪಂಚಭೂತಗಳಿಂದ ಯುಕ್ತವಾದ ಈ ಶರೀರವನ್ನು ದುಶ್ಶಾಸನನ ಪ್ರಾಣ ಹೋದ ಸಂದರ್ಭಕ್ಕೆ ಹೋಲಿಸಿ ಬರೆಯುತ್ತಾನೆ.

ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀಹಸ್ತದೊಳ್
ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ-
ನುಜ ದುಶ್ಶಾಸನ ಭೀಮಭೀಮಗದೆಯಿಂ ಪಂಚತ್ವಮಂ ಪೊರ್ದಿದಯ್

ಜೀವ, ಮಾಂಸ, ರಕ್ತ, ತಲೆ ಮತ್ತು ಕಾಯ ಈ ಪಂಚಪ್ರಧಾನವಾದ ವಸ್ತುಗಳು ಹೇಗೆಲ್ಲಾ ಬೇರಾಯಿತು. ನಿನ್ನ ಪ್ರಾಣ ಪರಲೋಕದಲ್ಲಿ, ಮಾಂಸ ಪಿಶಾಚಿಗಳ ಹೊಟ್ಟೆಯಲ್ಲಿ, ರಕ್ತವು ಭೀಮನ ಹೊಟ್ಟೆಯಲ್ಲಿ, ತಲೆ ನಕ್ತಂಚರಿ(ಚಂಡಿಕೆಯೊ ಇನ್ನೊಂದು ದೈವವೋ ಚೆಂಡಾಟವಾಡಲು ಬಳಸಿರಬಹುದು!) ಹಸ್ತದಲ್ಲಿ, ದೇಹ ಕುರುಭೂಮಿಯಲ್ಲೂ ನೆಲಸಲು ತಮ್ಮನಾದ, ಗಾಂಧಾರಿಯ ಮಗನಾದ ದುಶ್ಶಾಸನನು ಭೀಮನ ಭೀಕರವಾದ ಗದೆಯಿಂದ ಪಂಚತ್ವವನ್ನು ಹೊಂದಿದೆ. ಪಂಚತ್ವ ಎಂದರೆ ಸಾವು ಎಂದೂ ಅರ್ಥವಿದೆಯಂತೆ.

ದುಶ್ಶಾಸನನಿಗಾಗಿ ಬಹಳ ಮರುಗುತ್ತಾನೆ ಕೌರವ. ಎಂತಹ ಸೋದರ ಸಂಬಂಧ ಅವರದ್ದು.. ಕೆಟ್ಟವರಾದರೂ ಒಳ್ಳೇ ಸೋದರರು.

ಅನುಜನ ನೆತ್ತರನ್ನು ಈಂಟಿದವನ ನೆತ್ತರನ್ನು ಜೀವಸಹಿತ ಈಂಟದೆ ಇದ್ದರೆ ದುರ್ಯೋಧನನೇ ಅಲ್ಲ ಎಂದು ಕೋಪದಿಂದ ಪ್ರತಿಜ್ಞೆ ಮಾಡಿ ಮುಂದೆ ಬರುತ್ತಾನೆ.

ಮುಂದೆ ಬಂದಾಗ ನರನ ಶರದಿಂದ ಜರ್ಜರಿತನಾಗಿ ಬಿದ್ದ ಅಂಗರಾಜ ಕರ್ಣನನ್ನು ಕಾಣುತ್ತಾನೆ.. ಸಂಜಯನು "ಗಂಡಸ್ಯೋಪರಿ ಸ್ಫೋಟಕಂ" ಎನ್ನುವಂತೆ ಅದನ್ನು ಗ್ರಹಿಸುತ್ತಾನೆ. ( ಗಾಯದ ಮೇಲೆ ಬರೆ ಎಳೆದಂತೆ ಎಂದು).

೧೧.

"ಗಂಡಸ್ಯೋಪರಿ ಸ್ಫೋಟಕಂ" ಎನ್ನುವಂತೆ ಸಂಜಯ ಭಾವಿಸಿದ ಈ ಚಿತ್ರದಲ್ಲಿ ಕರ್ಣ ಮಡಿದು ಬಿದ್ದಿದ್ದಾನೆ. ತನ್ನ ಕಾರ್ಯಕ್ಕಾಗಿ ಯುದ್ಧದಲ್ಲಿ ಪಾಲ್ಗೊಂಡು ಸತ್ತರೂ ನಗುಮೊಗದಲಿದ್ದ ಅಂಗಪತಿಯನ್ನು ನೋಡಿ ಕೌರವ ಶೋಕದಿಂದ ಉದ್ಗರಿಸುವ ಸಾಲುಗಳು ಮುಂದೆ ಬರುತ್ತದೆ.

ಅದರಲ್ಲೂ ಎಂಟು ಕಂದ ಪದ್ಯಗಳು "ಅಂಗಾಧಿಪತೀ" ಎಂದು ಕೊನೆಯಾಗುತ್ತದೆ. ಪಂಪನಂತೆಯೇ ರನ್ನನೂ ಕರ್ಣ ಮತ್ತು ಕೌರವರ ಸಂಬಂಧವನ್ನು ಬಹಳ ಚಿತ್ರಿಸಿದ್ದಾನೆ.

ನಿನ್ನ ಮಗಂ ವೃಷಸೇನಂ
ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ-
ನೆನ್ನ ಸಂತೈಸುವುದಾಂ
ನಿನ್ನಂ ಸಂತೈಸೆ ಬಂದೆನಂಗಾಧಿಪತೀ

ನಿನ್ನನ್ನು ಹೀಗೆ ಕಂಡುದಿಲ್ಲ, ನನ್ನ ಮೇಲೇನು ಕೋಪವೇ? ಯಾಕೆ ಮರುಮಾತುಗಳನ್ನಾಡುವುದಿಲ್ಲ, ಮರೆವೆಯೇ? ಅಲ್ಲ ಬಳಲಿಕೆಯೇ?

ನಿನ್ನ ಗೆಳೆಯ ಸುಯೋಧನನನ್ನು ನೋಡದೆ, ನೋಡಿ ಅಪ್ಪಿಕೊಳ್ಳದೆ, ವಿಚಾರಿಸದೆ, ಜೀಯಾ ದೇವಾ ಎಂದೆನ್ನದೆ ಸುಮ್ಮನೇಕುಳಿದೆ ಅಂಗಾಧಿಪತೀ?

ಆನರಿವೆಂ ಪೃಥೆಯರಿವಳ್
ದಾನವರಿಪುವರಿವನರ್ಕನರಿವಂ ದಿವ್ಯ-
ಜ್ಞಾನಿ ಸಹದೇವನರಿವಂ
ನೀನಾರ್ಗೆಂದಾರುಮರಿಯರಂಗಾಧಿಪತೀ

ನನಗೆ, ಕುಂತಿಗೆ, ಕೃಷ್ಣನಿಗೆ, ಸೂರ್ಯನಿಗೆ ಮತ್ತು ಸಹದೇವನಿಗೆ ಮಾತ್ರ ನಿನ್ನ ಹುಟ್ಟಿನ ರಹಸ್ಯ ಗೊತ್ತಿದೆ.

ಒಡವುಟ್ಟಿದನೆಂದರಿದೊಡೆ
ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ
ಕುಡಲಾರ್ತೆನಿಲ್ಲ ರಾಜ್ಯ-
ಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತೀ

ನಿನ್ನನ್ನು ಅಣ್ಣ ಎಂದು ತಿಳಿದೊಡನೆ ರಾಜ್ಯವನ್ನು ಧರ್ಮರಾಯ ಕೊಡುತ್ತಿದ್ದ, ನಾನು ಗೊತ್ತಿದ್ದೂ ಕೊಡಲಿಲ್ಲ ಎಂದೆಲ್ಲಾ ರೋಧಿಸುತ್ತಾನೆ ಕೌರವ.

ಇನ್ನೊಂದು ಪದ್ಯದಲ್ಲಿ,

ಕೆಳೆಯಂಗಾಯ್ತು ಸುಮೋಕ್ಷಮಾಗದೆನಗಂ ಬಾಷ್ಪಾಂಬುಮೋಕ್ಷಂ ಧರಾ-
ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾ ಕೊಟ್ಟೆನಿಲ್ಲನ್ಯಮಂ-
ಡಳಮಂ ಸುಟ್ಟನಿವಂ ಪ್ರತಾಪಶಿಖಿಯಿಂದಾನೀತನಂ ಸತ್ಕ್ರಿಯಾ-
ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ

ಗೆಳೆಯ ಕರ್ಣನಿಗೆ ಸುಮೋಕ್ಷವಾಯ್ತು, ನಾನು ಕಣ್ಣೀರ ಮೋಕ್ಷವನ್ನೂ ಕೊಡಲಿಲ್ಲ. ನನಗಾಗಿ ಕರ್ಣ ಭೂಮಿಯನ್ನೇ ಗೆದ್ದುಕೊಟ್ಟ, ಅವನಿಗೆ ನಾನು ಎಳ್ಳುನೀರೂ ಕೊಡಲಿಲ್ಲ. ಶತ್ರುರಾಜರನ್ನು ತನ್ನ ಪ್ರತಾಪಶಿಖಿಯಿಂದ ಸುಟ್ಟ ಕರ್ಣ. ನಾನು ಅವನ ಅಂತ್ಯಸಂಸ್ಕಾರವನ್ನೂ ಮಾಡಲಿಲ್ಲ. ಎಲ್ಲವನ್ನೂ ನನಗಾಗಿ ಮಾಡಿದ ಕರ್ಣನಿಗೆ ನಾನೇನು ಮಾಡಿದೆ?

ಅದ್ಭುತವಾದ ಪದ್ಯ ಇದು. ಸಂಜಯನ ಉತ್ತರವೂ ಸಮಾಧಾನವೂ ಇನ್ನೆರಡು ಪದ್ಯದಲ್ಲಿದೆ.

ಜಲದಾನಕ್ರಿಯೆಯಂ ವಾ-
ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ
ಕೆಳೆಯಂಗೆ ಮಾಡಿದಯ್ ಕುರು-
ಕುಲದರ್ಪಣ ಮರೆವುದಿನ್ನಹರ್ಪತಿಸುತನಂ

ಪೆಂಡಿರ್ ಪಳಯಿಸುವಂದದೆ
ಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್
ಕೊಂಡೆಸಪರಾರೊ ಕುರುಕುಲ
ಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ

ಕಣ್ಣೀರಿನಿಂದ, ಕರುಣೆಯ ಮಾತುಗಳಿಂದ, ಕೋಪಾಗ್ನಿಯಿಂದ ಗೆಳೆಯನಿಗೆ ಅಂತ್ಯಕ್ರಿಯೆಯನ್ನು ಮಾಡಿದ್ದೀಯೆ!, ಇನ್ನು ರವಿಸುತನನ್ನು ಮರೆ.

ಹೆಂಗಸರು ಹಳಹಳಿಸುವಂತೆ ಗಂಡಾದ ನೀನು ಹಳಹಳಿಸಿದರೆ ಕೆಲಸವಾಗುವುದು ಹೇಗೆ? ನಿನ್ನ ಛಲವನ್ನು ನೀನು ಮೆರೆ ಕುರುಕುಲಮಂಡನಾ!

೧೨.

ಗುರು ದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು-
ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವಂ ಕ್ರೀಡಾರಸಕ್ಕಾನೆಯಾಳ್
ಗುರುಭಾರಕ್ಕಿರಿವಾಳ್ ರಣಕ್ಕೆ ತುರಿಲಾಳ್ ಕಟ್ಟಾಯದೊಳ್ ಮೇಳದಾಳ್
ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ

ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನಮಗೊದಗುವ ಮಿತ್ರ ಇಲ್ಲದಿದ್ದಾಗ ಅನೇಕ ಮಂದಿಯನ್ನು ಕಳೆದುಕೊಂಡಾಗುತ್ತದೆ. ಅಂತೆಯೇ ಕರ್ಣನ ವಿಯೋಗದಿಂದ ದುರ್ಯೋಧನ ಎಷ್ಟು ಜನರನ್ನು ಕಳೆದುಕೊಂಡ ದುಃಖವನ್ನು ಅನುಭವಿಸುತ್ತಾನೆ ನೋಡಿ. ಅದನ್ನ ರನ್ನ ಬಹಳ ಸುಂದರವಾಗಿ ಈ ಪದ್ಯದಲ್ಲಿ ಹೇಳುತ್ತಾನೆ.

ದೀಕ್ಷಾವಿಧಿಗಳಿಗೆ ಗುರುವಿನಂತೆ, ಹಿತಕಾರ್ಯದ ಆಲೋಚನೆಗಳಿಗೆ ಮಂತ್ರಿಯಂತೆ, ರಾಜನಾಗಿ, ಕ್ರೀಡಾ ವಿನೋದಕ್ಕೆ ನರ್ಮ ಸಚಿವನಾಗಿ, ಆನೆಯಂತೆ ಭಾರವನ್ನೆಳೆಯುವ ಕೆಲಸಕ್ಕೆ, ಯುದ್ಧಕ್ಕೆ ಮೊದಲಿಗನಾಗಿ, ತಮಾಷೆಗೆ ವಿದೂಷಕನಂತೆ ಇದ್ದಂತಹ ಕರ್ಣನನ್ನು ದುರ್ಯೋಧನ ಹೇಗೆ ಮರೆತಾನು?

ಕರ್ಣನನ್ನು ನೆನೆದು ಕೌರವನ ಶೋಕಸಾಗರವನ್ನು ಕೋಪವೆಂಬ ಬಡಬಾಗ್ನಿ ಹೀರಿತು.

ದೇವಾ, ಭೀಷ್ಮರು ಈ ಕಡೆ ಇದ್ದಾರೆ ಎಂದು ಸಂಜಯನು ಹೇಳಲಾಗಿ, ಅಪ್ಪ ಹೇಳಿದಂತ ಮಾತುಗಳನ್ನ ಸ್ಮರಣೆ ಮಾಡಿ, ಸಂಜಯನ ಮಾತನ್ನೂ ಮೀರದೆ ಶರಶಯ್ಯೆಯೊಳಗೆ ಇರುವಂತಹ ನದೀನಂದನನ ಚರಣಾರವಿಂದವದನಂ ಗೈಯ್ಯಲೆಂದು ಗಾಂಧಾರೀನಂದನಂ ಎಯ್ದೆವಂದಂ.

~
ಇನ್ನೂ ಇದೆ.

Monday 18 August 2014

ರನ್ನನ ಗದಾಯುದ್ಧ - ನೋಟ - ಭಾಗ ೨

೫.

ಪಡೆ ಪನ್ನೊಂದಕ್ಷೋಹಿಣಿ
ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ-
ಳ್ಗೊಡೆಯ ನಡುವಿರ್ಪ ನೀನಿ-
ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ

(ನೀನ್ ಇರ್ದೆಡೆಯುಮನ್ ಎಮಗೆ ಅರಿಯದಂತುಟಾದುದೆ)
ಎಂದೆಲ್ಲಾ ಹಳಹಳಿಸಿ ಬರುತಿರ್ದ ಕೌರವನ ತಂದೆ ತಾಯಿ, ಪುರಜನರ ಬಗ್ಗೆ ಸಂಜಯನು ಸುಯೋಧನನಿಗೆ ಹೇಳುತ್ತಾನೆ.

ಅರಿಭೂಪಾಲರನಿಕ್ಕಿ ಗೆಲ್ದೊಸಗೆಯಿಂ ತೂರ್ಯಸ್ವನಂ ಪೊಣ್ಮೆ ಸೋ-
ದರರುಂ ಮಕ್ಕಳುಮಾಪ್ತರುಂ ಬೆರಸು ಬಂದಾನಂದದಿಂ ಕಾಣ್ಬೆನೆಂ-
ದಿರಲಿಂತಾಯ್ತು ವಿಧಾತ್ರ ಮದ್ಗುರುಗಳಂ ದುಃಖಾತ್ಮರಂ ಶೋಕತ೦
ತ್ಪರರಂ ಮೆಯ್ಯೊಳೆ ಬೀಳುವಶ್ರುಮುಖರಂ ಕಾಣ್ಬಂತುಟಂ ಮಾಡಿದಯ್

ಕಂದ ನಿಜಾನುಜರೆಲ್ಲಿದ-
ರೆಂದೆನ್ನಂ ಜನನಿ ಬಂದು ಬೆಸಗೊಂಡೊಡದೇ-
ನೆಂದು ಮರುಮಾತುಗೊಡುವೆಂ
ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ

ಅತ್ಯಂತ ಸೊಗಸಾಗಿ ಹೇಳಲಾದ ಪದ್ಯಗಳಲ್ಲಿ ಕೌರವನ ದಯನೀಯ ಸ್ಥಿತಿಯ ಬಗ್ಗೆ ಕನಿಕರವಾಗುತ್ತದೆ.
"ಓಂದುವೇಳೆ ಅಮ್ಮ ಬಂದು, ಕಂದಾ ನಿನ್ನ ಅನುಜರು ಎಲ್ಲಿದ್ದಾರೆ ಎಂದು ಕೇಳಿದರೆ ಏನೆಂದು ಉತ್ತರ ಕೊಡಲಿ? ಕುಂತಿಯ ಮಕ್ಕಳು ಕೊಂದರೆಂದು ಬಿನ್ನವಿಸಲೇ?" ( ಒಬ್ಬ ತಾಯಿಯ ಮಕ್ಕಳನ್ನು ಇನ್ನೊಬ್ಬ ತಾಯಿಯ ಮಕ್ಕಳು ಕೊಂದರು ಎನ್ನುವಾಗ ಉಂಟಾಗುವ ಭಾವ ಭಿನ್ನ! ಅಬ್ಬಬ್ಬ ಕವಿರನ್ನ!)

ಶೋಕವು ಹೆಚ್ಚಾಗಿ ಫಣಿರಾಜಪತಾಕನು ಕಣ್ಣೀರಿನಿಂದ ತೋಯ್ದು, ಹಾ ದುಶ್ಶಾಸನಾ, ಹಾ ಕರ್ಣಾ ಎನ್ನುತ್ತಾ ಮೂರ್ಛೆ ಹೋಗುತ್ತಾನೆ.
ಸಂಜಯವಚನಂ ಎನ್ನುವ ಆಶ್ವಾಸ ಇಲ್ಲಿಗೆ ಮುಗಿಯಿತು. ಮುಂದೆ ಧೃತರಾಷ್ಟ್ರವಚನಂ!

೬.

ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ.

ಗಾಂಧಾರಿಯ ಮಾತು-

ಎಮಗಂಧಯಷ್ಟಿಯಾಗಿ-
ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ-
ನ್ನುಮನಿರಿಸದೆ ಕುರುವಂಶಾ-
ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ

(ಅಂಧಯಷ್ಟಿ= ಊರುಗೋಲು, ನಮಗೆ ಊರುಗೋಲಾಗಿದ್ದೆ ಮಗನೆ, ನೀನೊಬ್ಬ ಉಳಿದರೂ ಎಲ್ಲರೂ ಇದ್ದಾರೆ ಎಂದುಕೊಳ್ಳುತ್ತಿದ್ದೆವು, ನಿನ್ನನ್ನೂ ಇರಿಸದಂತೆ ಆ ನಿಮಿತ್ತರಿಪು ಪಾಶಪಾಣಿ (ಯಮ) ಸವಿನೋಡಿದನೇ?).

ಮಡಿದೀ ದುಶ್ಶಾಸನನೇಂ
ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ
ನುಡಿಯಿಸುವನೊ ದುಷ್ಕರ್ಣಂ
ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ!

ಎಂದು ಗಾಂಧಾರಿ ಅಳುತ್ತಿರಲು, ತಂದೆ ಧೃತರಾಷ್ಟ್ರ ತನ್ನ ಮಗನ ಕಾಲ ಮೇಲೆ ಬಿದ್ದು ಹಾ! ಕುರುಕುಲಚೂಡಾಮಣಿ, ಹಾ ಕುರುಕುಲಚಕ್ರವರ್ತಿ ಎಂದು ರೋಧಿಸುತ್ತಾನೆ. ತನ್ನ ತಂದೆತಾಯಿಗಳ ಈ ರೋಧನೆಗೆ ಪುನಃ ಮೂರ್ಛೆ ತಪ್ಪುತ್ತಾನೆ ಕೌರವ.

ಮೂರ್ಛೆ ತಿಳಿದೆದ್ದು ಲಜ್ಜೆಯಿಂದ ಅವರ ಕಾಲಿಗೆ ನಮಸ್ಕರಿಸಲು, ಅಪ್ಪಿಕೊಂಡು, ಆಶೀರ್ವದಿಸಿ ಧೃತರಾಷ್ಟ್ರ ಕೆಲವು ಮಾತುಗಳನ್ನು ಹೇಳುತ್ತಾನೆ.

ರನ್ನ ಎಂತಹ ಕರುಣೆಯಿಂದ ಈ ಪದ್ಯಗಳನ್ನು ತುಂಬುತ್ತಾನೆಂದರೆ, ಒಂದು ಪದ್ಯದಲ್ಲಿ " ಧರ್ಮರಾಜ ಒಳ್ಳೆಯದನ್ನೇ ಮಾಡುತ್ತಾನೆ, ಈಗಲೂ ಕಾಲ ಮಿಂಚಿಲ್ಲ, ಸಂಧಿಯನ್ನು ಮಾಡಿಕೋ. ಸಂಧಿಗೆ ಸಂಜಯನನ್ನು ಕಳಿಸುತ್ತೇನೆ. ಭೀಮನ ವೈರ, ತಮ್ಮಂದಿರ ಸ್ನೇಹಿತರ ಸಾವನ್ನು ಮರೆತು ಇನ್ನಾದರೂ ಪಾಂಡವರಿಗೆ ಅರ್ಧರಾಜ್ಯವನ್ನು ಕೊಡು ಎಂದು ಕಾಲಿಗೆ ಬಿದ್ದು ಬೇಡುತ್ತಾನೆ"

ಯಾವ ಮಾತಿಗೂ ಕೇಳದ ಕೌರವ ತನ್ನದೇ ಮೊದಲಿನ ಮಾತುಗಳಿಗೆ ಜೋತು ಬೀಳುತ್ತಾನೆ.

ಆಂ ಮಗನೆನಾಗೆ ಧರ್ಮಜ-
ನೇಂ ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ
ನಿಮ್ಮೊಳ್ ನೇರ್ಪಡುಗಿಡದೆ ಸು-
ಖಂ ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ವೆಂ

ಬಿಡಿಮೆನ್ನನೆಂದು ಮುಂದಿ-
ರ್ದಡಿಗೆರಗಿದ ಮಗನನಪ್ಪಿಕೊಂಡಶ್ರುಜಲಂ
ಗುಡುಗುಡುನೆ ಸುರಿಯೆ ನಾಲಗೆ
ತಡತಡವರೆ ನುಡಿದನಂಧನೃಪನಾ ನೃಪನಂ

ನೀನು ಎಂತುಂ ಎಮ್ಮ ಪೇಳ್ವುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನೊಡಂಬಡೆಯಪ್ಪಿನಂ ನೀನೆಮಗಿನಿತನ್ ಒಳ್ಳಿಕಯ್ಯಲ್ವೇಳ್ವುದು

ನೆಗಳ್ವ ಕಜ್ಜಮಾವುದುಮ್?

ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು, ಅಲ್ಲಿಗೆ ಬಿಜಯಂಗೆಯ್ವುದು!

ನಾವು ಹೇಳಿದಂತೆ ಕೇಳದೆ ನೀನು ನಿನ್ನ ಛಲವೆಂದು ಮುಂದುವರೆಯುತ್ತಿದ್ದೀಯ. ನೀನೊಂದು ಕೆಲಸಮಾಡು, ಅದೇನೆಂದರೆ ನಿನ್ನಜ್ಜ ಭೀಷ್ಮನನ್ನು ನೋಡುವುದು. ಅದಕ್ಕೆ ಸಮ್ಮತಿಸಿ ಕೌರವ ತನ್ನ ಜೊತೆಗಾರ ಸಂಜಯನೊಂದಿಗೆ ಭೀಷ್ಮನಲ್ಲಿರುವಲ್ಲಿಗೆ ತೆರಳುತ್ತಾನೆ.

೭.

ದುರ್ಯೋಧನವಿಲಾಪಂ ಎನ್ನುವ ಆಶ್ವಾಸವು ಈವರೆಗೆ ನೋಡಿದ ಭಾಗಗಳಿಂದ ಬಹಳ ಸುಂದರವಾಗಿರುವಂತಹದ್ದು. ನನಗೆ ಬಹಳ ಇಷ್ಟವಾದ್ದು. ಅತ್ಯುತ್ತಮವೆನ್ನುವಂತೆ ಬಹಳ ನಾಟಕೀಯವಾಗಿ ಬರೆದಿದ್ದಾನೆ ರನ್ನ. ( ಈ ಭಾಗಗಳನ್ನು ರಂಗದಲ್ಲಿ ಅತ್ಯಂತ ಸುಂದರವಾಗಿ ಅಭಿನಯಿಸಬಹುದು ಎನ್ನುವ ಅರ್ಥದಲ್ಲಿ.,)

ಭೀಕರವಾದ ಯುದ್ಧದಿಂದ ಮಸಣವಾದ ರಣಾಂಗಣದಲ್ಲಿ ಕುರುಪತಿ ಮೆಲ್ಲಮೆಲ್ಲನೆ ಬರುತ್ತಿದ್ದಾನೆ. ಅತ್ಯಂತ ಸೊಗಸಾದ ಒಂದು ಪದ್ಯ ಇಲ್ಲಿದೆ.

ಹಲಚಕ್ರಾಂಕುಶರೇಖಾ
ವಿಲಸಿತಪದತಳಕೆ ಮಾಡೆ ಪುನರುಕ್ತತೆಯಂ
ಹಲಚಕ್ರಾಂಕುಶ ಕುರುಕುಲ
ತಿಲಕಂ ಕುಸಿಕುಸಿದು ಮೆಲ್ಲನೆ ನಡೆದಂ.

ರಾಜರ ಪಾದಗಳಲ್ಲಿ ಇರಬಹುದು ಎನ್ನುವಂತಹ ನೇಗಿಲು,ಚಕ್ರ, ಅಂಕುಶ ರೇಖೆಗಳು ಕೌರವನ ಪಾದದಲ್ಲಿದೆ. ಹಾಗೇ ರಣರಂಗದಲ್ಲಿ ಬಿದ್ದಿರುವಂತಹ ಸೈನಿಕರ ಆಯುಧಗಳು ಆ ಕಾಲಿನಲ್ಲಿ ಮತ್ತೆ ಈ ಆಯುಧಗಳ ರೇಖೆಯನ್ನು ಮೂಡಿಸುತ್ತಿದೆ. ಒಬ್ಬ ರಾಜನ ಅವಸ್ಥೆಯನ್ನು ಈ ಪದ್ಯ ಎಷ್ಟು ಸರಳ ಸುಂದರವಾಗಿ ಹೇಳುತ್ತಿದೆ ನೋಡಿ.

ಸಂಜಯ ನೋವಿನಲ್ಲಿ "ನಿಮ್ಮ ಕೋಮಲ ಪಾದ, ವಿರೋಧಿಗಳಮಂಡಳಿಕಮೌಳಿವಿಘಟ್ಟಿತ ಪಾದ ಪೀಠ ಇಂದು ಬಾಣ, ಕತ್ತಿ, ಪರಿಘ ಮುಂತಾದ ಆಯುಧಗಳು ಬಿದ್ದಿರುವ ಈ ಸಂಗ್ರಾಮ ಭೂಮಿಯಲ್ಲಿ ನಡೆಯಬೇಕಾಯಿತೇ" ಎಂದಾಗ

ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆರೆಯವು ಸಮರಾ-
ವನಿಯೊಳುಡಿದಿರ್ದ ಕಯ್ದುಗ-
ಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ

(ಮಕ್ಕಳ, ಸೋದರರ ಸಾವಿನಿಂದ ಉಂಟಾದ ನೋವನ್ನೇ ಲೆಕ್ಕಿಸುತ್ತಿಲ್ಲ, ಮತ್ತೆ ಈ ಜುಜುಬಿ ಆಯುಧಗಳು ನನ್ನನ್ನು ನೋಯಿಸುವುದೇ?)

ಹೀಗೆ ಆ ಯುದ್ಧಭೂಮಿಯಲ್ಲಿ ಮುಂದೆ ಬರುತ್ತಿರಬೇಕಾದರೆ...... ಮರುಳ್ಗಳ್!

೮.

ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ ಕುಡಿದ, ಭೀಷ್ಮನ ನೆತ್ತರನ್ನು ಕುಡಿಯಲು ಅವನಿನ್ನೂ ಸತ್ತಿಲ್ಲ, ಕೌರವಾ, ನಿನ್ನ ನೆತ್ತರನ್ನೇ ಕುಡಿಯಬೇಕೆಂದಿದ್ದೇವೆ ಬಾ ಬಾ ಎಂದೆನುತ್ತಿತ್ತು ಒಂದು ಪಿಶಾಚಿ.

ಅದನ್ನು ಕೇಳುತ್ತ ಮುಂದುವರೆದು ಬರುತ್ತಿರಲು, ಯಾವುದೋ ಶವದ ಮೆದುಳಿನ ಮೇಲಿಟ್ಟು ಜಾರಿ ಬೀಳುವಂತಾಗುತ್ತಾನೆ ಕೌರವ. ಅಯ್ಯೋ, ಜಾಗ್ರತೆ ಕಾಲು ತೊಡೆ ಮುರಿದೀತು ಎನ್ನುತ್ತಾ ಸಂಜಯ ಅವನನ್ನು ಮೇಲಕ್ಕೆತ್ತುತ್ತಾನೆ. ಆಗ ಒಂದು ಪಿಶಾಚಿ "ಭೀಮಕೋಪದಲ್ಲಿ ನಿನಗೆ ಊರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ" ಎಂದು ಅಣಕಿಸುತ್ತದೆ.

ಈ ಭಾಗವನ್ನು ಓದಿಯೇ ಸುಖಿಸಬೇಕು. ಈ ಮರುಳ್ಗಳ ಮಾತಿನಲ್ಲಿ ಹುರುಳಿಲ್ಲ ಎಂದು ಕೌರವ ಎನ್ನುತ್ತಿರುವಾಗ ಅರಗಿನ ಮನೆಯಿಂದಲಾಗಿ, ವಿಷದ ಲಡ್ಡುಗೆಗಳನ್ನು ಕೊಟ್ಟು ಕೊಲ್ಲಲು ಯತ್ನಿಸಿ ಭೀಮನ ವೈರವನ್ನು ಗಳಿಸಿದ ನೀನು ಮರುಳನೋ? ಅಲ್ಲ, ಎಲ್ಲರೊಂದಾಗಿ ಇರುವಂತಹ ನಾವು ಮರುಳ್ಗಳೋ ಎಂದು ಕೇಳಿತು ಪಿಶಾಚಿ. ಮತ್ತೆ ಕೌರವನಿಗೆ ಸವಾಲಾಗಿ,

ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರೆ ಪೋ-
ದೊಡೆ ಕಲಿಭೀಮನಾಣೆಯೆನೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ-
ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಯಂ ಕೊಳೆ ಭೂತಕೋಟಿಯುಂ
ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ

ಈ ಮರುಳ್ಗಳಾಟವೆಲ್ಲವೂ ಕೌರವನ ಮನದಲ್ಲಿ ಆದಂತದ್ದು ಎನ್ನುವಂತೆ ರನ್ನ ಬರೆಯುತ್ತಾನೆ. ಎಷ್ಟು ಅಮೋಘವಾಗಿದೆ ನೋಡಿ ಚಿತ್ರ.

ಸತ್ತವರನ್ನು ನೋಡುವುದಿಲ್ಲ, ನೇರವಾಗಿ ನನ್ನನ್ನು ಭೀಷ್ಮನಿದ್ದಲ್ಲಿ ತಲುಪಿಸು ಎಂದು ಸಂಜಯನಿಗೆ ಹೇಳಿ ಮುಂದೆ ಬರುತ್ತಾನೆ ಕೌರವ. ಹೇಗೆಂದರೆ

ಇಭಶೈಲಂಗಳನೇರಿಯೇರಿ, ರುಧಿರಸ್ರೋತಂಗಳಂ ದಾಂಟಿ ದಾಂಟಿ, ಭದೋರ್ನೀಲತಾಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಮುಂದುವರೆಯುತ್ತಾ ಬಾಣಗಳಿಂದ ಹೊಡೆಯಲ್ಪಟ್ಟು ಪ್ರಾಣವಿಲ್ಲದ ಬಿದ್ದಿರುವ ದ್ರೋಣಾಚಾರ್ಯನನ್ನು ಕಾಣುತ್ತಾನೆ.

ನಿಮ್ಮ ಬಿಲ್ಗಾರಿಕೆಗೆ ಅರ್ಜುನನೇನು? ಆ ಪಿನಾಕಪಾಣಿಯೇ ಬಂದರೂ ಸಮನಲ್ಲ. ಆದರೆ ಇದೇನಾಯ್ತು? ಕರ್ಮವಶದಿಂದಲೋ ಅಥವಾ ನಿಮ್ಮ ಉಪೇಕ್ಷೆಯಿಂದಲೋ ಮರಣಹೊಂದುವಂತಾಯ್ತಲ್ಲ.

ಶರಸಂದೋಹಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ-
ಷ್ಯರ ಮೈಯ್ಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ
ಹರಪಾದಾಂಬುಜಯುಗ್ಮದೊಳ್ ನಿರುಸಿದಂ ಚಾಪಾಗಮಾಚಾರ್ಯರೊಳ್
ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೆಯ್ವೆತ್ತುದೋ

ನಿಮ್ಮ ಬಾಣಗಳೆಲ್ಲ ಶತ್ರುಸೈನ್ಯದ ಒಡಲಿನಲ್ಲಿದೆ, ನಿಮ್ಮ ವಿದ್ಯೆಯೆಲ್ಲವೂ ಶಿಷ್ಯರಲ್ಲಿದೆ. ಕೀರ್ತಿಯು ದಿಕ್ಕುದಿಕ್ಕಿನಲ್ಲಿದೆ, ಮನಸ್ಸು ಹರಪಾದಾಂಬುಜದಲ್ಲಿದೆ.
ಬಿಲ್ವಿದ್ಯೆಯ ಆಚಾರ್ಯನನ್ನು ನೆನೆದು ಕೌರವ ಅಳಲುತ್ತಾನೆ. ಹಿಂದೊಮ್ಮೆ ಬಹಳವಾಗಿ ದ್ರೋಣನನ್ನು ನಿಂದಿಸಿದ್ದ ಕೌರವ ಶವಶರೀರದ ಮುಂದೆ ಹೀಗೆಲ್ಲ ಕೊರಗುವುದನ್ನು ನೋಡಿದರೆ ಕರುಣೆ ಉಕ್ಕದುಳಿದೀತೇ?

ದ್ರೋಣನಿಗೆ ಮೂರುಸುತ್ತು ಬಂದು ಮುಂದುವರೆಯುತ್ತಾ ಕೌರವ...

~
ಇನ್ನೂ ಇದೆ.

ರನ್ನನ ಗದಾಯುದ್ಧ - ನೋಟ

ಗದಾಯುದ್ಧವನ್ನು ಸಂಪೂರ್ಣ ವಾಚ್ಯ ಮಾಡುವುದು ಉದ್ದೇಶವಲ್ಲದಿದ್ದರೂ ಟ್ರೇಲರ್ ತೋರಿಸಿದ್ರೆ ಸಿನೆಮಾಕ್ಕೆ ಜನ ಬರಬಹುದೆಂಬ ಉದ್ದೇಶದಿಂದ ಕೆಲವೊಂದು ಸಾಲುಗಳನ್ನು ನನ್ನ ವ್ಯಾಪ್ತಿಯೊಳಗೆ ಅರಿಕೆ ಮಾಡಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯದ ಈಗಿನ ಜನರು ಸಂಪೂರ್ಣರಾಗಿ ಇಂತಹ ಕಾವ್ಯಗಳಿಂದ ವಿಮುಖರಾಗಿ ತಮ್ಮ ಬರಿಮೈ ಪ್ರತಿಭೆಯನ್ನು ತೋರುತ್ತಾ ಸಾಗುವಾಗ ಇಂತಹ ಕಾವ್ಯಗಳ ಚರ್ಮ ಮತ್ತು ಚರಮ ಸೌಂದರ್ಯ ಯಾಕೆ ಬೇಕಾಗುತ್ತದೆ ಎಂದು ಓದುಗರು ತಿಳಿದುಕೊಳ್ಳುತ್ತಾ ಸಾಗಬೇಕು.

ತನ್ನ ಆಶ್ರಯದಾತನನ್ನೂ ತನಗೆ ಕವಿರತ್ನನೆಂದು ಬಿರುದು ಕೊಟ್ಟವರನ್ನೂ ನೆನೆದು ಬರೆಯುವುದು ಸಂಪ್ರದಾಯ. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ!!. ಹೀಗೇ ರನ್ನನೂ ಒಂದು ಅತ್ಯಂತ ಉತ್ಕೃಷ್ಟವಾದ ಪದ್ಯವನ್ನು, ರೂಪಕವನ್ನು ಕೊಡುತ್ತಾನೆ ಕಂದದಲ್ಲಿ.

ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡು ಪೋಗೆಯುಂ ಕುಂದದೆ ಪ-
ಜ್ಜಳಿಸುವೊಲ್ ಜಗಮೆಲ್ಲಂ
ಕೊಳಲು ತವದಿತ್ತು ಮೆರೆವನಿರುವ ಬೆಡಂಗಂ!

ಉರಿಯುವ ದೀಪದಿಂದ ಇನ್ನೊಂದು ದೀಪವನ್ನು ಉರಿಸಿದರೆ ಮೊದಲಿನ ದೀಪದ ಪ್ರಕಾಶಕ್ಕೆ ಕುಂದುಂಟಾದೀತೇ? ಅಂತೆಯೇ ಇರುವಬೆಡಂಗ ಸತ್ಯಾಶ್ರಯ ಎಷ್ಟು ಕೊಟ್ಟರೂ ಆತ ಮೆರೆಯುತ್ತಾನೆ ಎನ್ನುವ ಅತ್ಯುತ್ತಮ ಪದ್ಯ ಇದು.

ಗುಣದೋಷಮಂ ನಿಕಷಮಿಟ್ಟು ನೋಡೆ ತಾವೆ ಪೇಳವೆ? ಬುಧರಿರ್ದು ನೋಳ್ಪುದು ಪುರಾತನ ನೂತನ ಕಾವ್ಯ ರೇಖೆಯಂ ಎನ್ನುವ ರನ್ನ ಮೊದಲಿಗೆ ತನ್ನ ಕಾವ್ಯವನ್ನು ವಿಮರ್ಶೆ ಮಾಡುವವರಿಗೆ ಎಂಟೆರ್ದೆಯೇ ಎಂದು ಕೇಳುತ್ತಾನೆ.
ರನ್ನನ ಹೆಮ್ಮೆಗೆ ಅವನ ಗದಾಯುದ್ಧದ ಪ್ರಾರಂಭದ ಪದ್ಯಗಳನ್ನು ಓದಿದರೆ ಸಾಕು. ಅದೆಂತಹ ಧೈರ್ಯ?

ಆರಾತೀಯಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ-
ಡಾರದ ಮುದ್ರೆಯನೊಡೆದಂ
ಸಾರಸ್ವತವೆನಿಪ ಕವಿತೆಯೊಳ್ ಕವಿರತ್ನಂ.

ರತ್ನಪರೀಕ್ಷನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ-
ರತ್ನಮಮಂ ರನ್ನನ ಕೃತಿ-
ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ?

ಮಹಾಭಾರತ ಕತೆಯ ಒಳಹೊಕ್ಕು, ಈ ಕತೆಯೆಲ್ಲವನ್ನೂ ಗದಾಯುದ್ಧದೊಳಗೆ ಸಿಂಹಾವಲೋಕನ ಕ್ರಮದಿಂದ ಮುಂದೆ ಹೇಳುತ್ತಾ ಸಾಗುತ್ತಾನೆ ಕವಿರತ್ನ.
೨.
ಎರಡನೇ ಆಶ್ವಾಸಕ್ಕೆ ಹೆಸರು ಭೀಮಸೇನಪ್ರತಿಜ್ಞೆಯೆಂದು. ಮೊದಲ ಪದ್ಯದಲ್ಲೇ ಭೀಮನ ಕಾರ್ಯಗಳ ಬಗ್ಗೆ ಅತ್ಯಂತ ಸುಂದರವಾಗಿ ಹೇಳಿಬಿಡುತ್ತಾನೆ ರನ್ನ. ಈ ಭಾಗದ ಕೆಲವೊಂದನ್ನು ನಿನ್ನೆ ಹಂಚಿಕೊಂಡದ್ದಾಗಿದೆ.
ದ್ರೌಪದಿ ಮತ್ತು ಭೀಮಸೇನರ ಸಂವಾದವು ಇದರಲ್ಲಿದೆ. ಧರ್ಮರಾಯ ಇನ್ನೂ ಸಂಧಾನಕ್ಕೆ ಮುಂದಾದಾನು ಎನ್ನುವ ಸಂಶಯದೊಂದಿಗೆ ಬಂದ ದ್ರೌಪದಿ ಭೀಮನಲ್ಲಿ ಹೇಳುವ ಒಂದು ಮಾತು

ಸಮವಾಯಮಹಿತರೊಳ್ ಸಂ-
ಧಿಮಾಡಿ ಯಮಸೂನು ಪೇಳೆ ವನವಾಸವೆ ದಲ್
ನಿಮಗೆ ಶರಣೆನಗಮಂದ
ಗ್ನಿಮುಖದೆ ಪುಡ್ಡಿದುದರಿಂದೆ ಶರಣಗ್ನಿಮುಖಂ

ಒಂದುವೇಳೆ ಧರ್ಮರಾಯ ಸಂಧಿಯನ್ನು ಮಾಡಿಕೊಂಡರೆ ನೀವುಗಳು ವನವಾಸವನ್ನು ಅನುಭವಿಸಿ, ಅಗ್ನಿಮುಖದಿಂದ ಹುಟ್ಟಿದ ನಾನು ಅಗ್ನಿಯನ್ನೇ ಪ್ರವೇಶಮಾಡುವೆನು ಎನ್ನುವ ಮಾತು.

ಭೀಮನ ಉತ್ತರವೂ ಆಶ್ವಾಸನೆಯೂ ಅತ್ಯಂತ ಸೊಗಸಾಗಿದೆ ಈ ಭಾಗದಲ್ಲಿ. ಅದರಲ್ಲೂ ಈ ಸಾಲು!

ಕುರುಕುಲಶೋಣಿತಪಾದಪದ್ಮತಳಂ ತಳೋ-
ದರಿಗೆ ವೃಕೋದರನಾಗಿಪಂ ಕಚಬಂಧ ಬಂ-
ಧುರತೆಯನಾತನ ಪೂಣ್ದ ಪೂಣ್ಕೆ ಶಿಳಾತಳಾ-
ಕ್ಷರಮೆನಿಸಿರ್ಪ ಜನೋಕ್ತಿಯಂ ಪುಸಿಮಾಳ್ಪನೇ?

ಕೊನೆಗೆ ಬಂದ ವಿದೂಷಕನೊಬ್ಬ ನೂರನ್ನು ಕೊಂದವನಿಗೆ ಇವನೊಬ್ಬನ್ಯಾವ ಲೆಕ್ಕ ಎನ್ನುತ್ತಾ ದ್ರೌಪದಿಯ ಮೊಗವನ್ನು ನೋಡಿ,

ಕುರುಕುಲಮಂ ನುಂಗಿದೆಯಿ
ನ್ನರೆಬರುಮಂ ನುಂಗಲಿರ್ದೆ ಕುರುಪತಿಯುಮುನಿ-
ನ್ನೆರಡನೆಯ ಹಿಡಿಂಬೆಯನೆ-
ಮ್ಮರಸಂ ರಕ್ಕಸಿಯನೆಲ್ಲಿ ತಂದನೋ ನಿನ್ನಂ

(ಓ ದ್ರೌಪದೀ, ಕುರುಕುಲವನ್ನೇ ನುಂಗಿದೆ, ಇನ್ನು ಕುರುಪತಿಯನ್ನೂ ನುಂಗಲಿರುವ ಎರಡನೆಯ ಹಿಡಿಂಬೆಯನ್ನು ನಮ್ಮ ಅರಸ ಭೀಮಸೇನ ಅದೆಲ್ಲಿಂದ ತಂದನೋ?)

ಹೇಳಲು, ಅಳುತ್ತ ಬಂದಿದ್ದ ದ್ರೌಪದಿ ನಸುನಗುತ್ತಾ ತನ್ನ ಅಂತಃಪುರಕ್ಕೆ ಸಾಗಿದಳು.
---
ಅತ್ತಲಾ ಕುರುರಾಯ!


ಛಲದಂಕಮಲ್ಲನುಂ ಸಕಲಭೋಗಲಕ್ಷ್ಮೀಪತಿಯುಂ ಅಭಿಮಾನಧನನುಂ ಎನಿಸಿದ ಸುಯೋಧನಂ ಚಿಂತಾಕ್ರಾಂತನಾಗಿ ಮುಂದೆಬರುತ್ತಾ ಇರುವಂತಹ ಈ ಭಾಗ ಸಂಜಯವಚನಂ ಎಂದು ಹೇಳಿದ್ದಾನೆ ರನ್ನ. ಈ ಭಾಗದಲ್ಲಿ ಕೆಲವು ಅತ್ಯುನ್ನತ ಕಂದಪದ್ಯಗಳೂ ವೃತ್ತಗಳೂ ಇದೆ.

ಅಸುಹೃತ್ಸೇನೆಗೆ ಸಾಲ್ವನೊರ್ವನೆ ಗಡಂ ರುದ್ರಾವತಾರಂ ಗಡಂ
ನೊಸಲೊಳ್ ಕಣ್ ಗಡಮೆಂದು ನಚ್ಚಿ ಪೊರೆದಂ ತಾನಕ್ಕೆ ತಮ್ಮಮ್ಮನ-
ಕ್ಕಿಸಲಂಬಂ ತಿರುವಾಯ್ಗೆ ತಂದರಿವರೇ ತಮ್ಮಿರ್ವರುಂ ಕಯ್ದುವಂ
ಬಿಸುಟರ್ ಜೋಳದ ಪಾಳಿಯಂ ಬಗೆದರಿಲ್ಲಾ ದ್ರೌಣಿಯಂ ದ್ರೋಣನುಂ

ಅನ್ನದ ಋಣವನ್ನು ದ್ರೋಣನೂ ದ್ರೋಣಿಯೂ ಮರೆತರು ಎಂದು ನಿರಾಶೆಯಿಂದ ಬೈಯ್ಯುತ್ತಾ ಇನ್ನೊಂದು ಪದ್ಯವನ್ನು ಸುಯೋಧನನ ಬಾಯಿಯಿಂದ ಹೇಳಿಸುತ್ತಾನೆ ರನ್ನ.

ಈಯಲಿರಿಯಲ್ ಶರಣ್ಬುಗೆ
ಕಾಯಲ್ ಕ್ಷತ್ರಿಯರೆ ಬಲ್ಲರಾ ಬ್ರಹ್ಮಣ್ಯರ್
ಭೋಯೆನಲುಂ ಬಲ್ಲರ್ ಕೊಲೆ
ಧೋಯೆನಲುಂ ಬಲ್ಲರರಿಯಲವರೆತ್ತಲರಿವರ್!

ಈಯಲು ಅರ್ಥಾತ್ ಕೊಡಲು, ಇರಿಯಲ್ ಅರ್ಥಾತ್ ಯುದ್ಧಕ್ಕೆ, ಶರಣಾದವರನ್ನು ಕಾಯಲು ಕ್ಷತ್ರಿಯರೆ ಬಲ್ಲರು. ಬ್ರಾಹ್ಮಣರು ಓ ಅಯ್ಯಯ್ಯೋ ಎನಲಷ್ಟೇ, ಎಂದು ದ್ರೋಣನನ್ನು ಮೂದಲಿಸುತ್ತಾನೆ.

ಕರವಾಳಂ ಮಸೆವಂತಿರೆ
ಮರವಾಳಂ ಮಸೆಯೆ ಕೂರಿತಕ್ಕುಮೆ ಕಲಿಯಂ
ಪೊರೆದೊಡೆ ಕೂರ್ಪಂ ತೋರ್ಪಂ-
ತಿರೆ ತೋರ್ಕುಮೆ ಪಂದೆ ಪತಿಗೆ ಸಂಗರದೆಡೆಯೊಳ್

ಅಹಹ.. ಕಬ್ಬಿಣದ ಕತ್ತಿಯನ್ನು ಮಸೆಯುವಂತೆ ಮರದ ಕತ್ತಿಯನ್ನು ಎಷ್ಟು ಮಸೆದರೇನು? ಹರಿತವಾದೀತೇ? ಹೇಡಿಗಳನ್ನು ಬೆಳೆಸಿದರೆ ಸಂಗ್ರಾಮಕ್ಕೆ ಉಪಯೋಗ ಬಂದೀತೇ?

ಮುಂದೆ ಸಂಜಯನ ಜೊತೆಗೆ ಮಾತನ್ನಾಡುತ್ತಾ ಹಳೆಯ ಕತೆಗಳನ್ನು ಕುರುಕ್ಷೇತ್ರದ ಮೊದಲಿನ ಯುದ್ಧದ ಮಾತುಗಳನ್ನೂ ಆಡುತ್ತಾನೆ ಸುಯೋಧನ. ಮುಂದುವರೆದು ಭೀಮ, ಅರ್ಜುನ ಧರ್ಮರಾಯ ನಕುಲ ಸಹದೇವರನ್ನು ಛೇಡಿಸುತ್ತಾ ಕೆಲವು ಪದ್ಯಗಳಿವೆ. ಅವೆಲ್ಲಾ ಬಹಳ ಸೊಗಸಾದ ರನ್ನನ ರಚನೆಗಳು. ಧರ್ಮರಾಜನನ್ನು ಹೊಗಳಿದ ಸಂಜಯನ ಮಾತಿಗೆ ಕಿಡಿಯಾದ ಕೌರವ

ಸ್ಥಿರಸತ್ಯವ್ರತಿಯೆಂದು ಧರ್ಮರುಚಿಯೆಂದಾ ಧರ್ಮಪುತ್ರಂ ದಯಾ-
ಪರನೆಂದೆಲ್ಲರ ಪೇಳ್ದ ಮಾತು ಪುಸಿಯಾಯ್ತೀ ಕಾರ್ಮುಕಾಚಾರ್ಯನಂ
ಗುರುವಂ ಬ್ರಾಹ್ಮಣನಂ ತೊದಳ್ನುಡಿದು ಕೊಂದಾಗಳ್ ಮೃಷಾಪಾತಕಂ
ಪರಮೆಂಬೀ ನುಡಿಯಿಂ ಪೃಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ?

ಮತ್ತೆ ಭೀಮನಿಗೆ,

ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗೆವಲ್ಲಿ ಗಂಡನಾ-
ಗನೆ ಭಗದತ್ತನಾನೆ ಅರಿಯೆಲ್ವುಡಿವನ್ನೆಗಮೊತ್ತೆ ಗಂಡನಾ-
ಗನೆ ಕೊಲಲೊಲ್ಲದಂಗಪತಿ ಬಿಲ್ಗೊಳೆ ಕೋದೆರವಲ್ಲಿ ಗಂಡನಾ-
ಗನೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೇ?

ರನ್ನನ ಕಾವ್ಯದ ಶಕ್ತಿ ಇಲ್ಲಿ ಗಮನಿಸಬೇಕಾದ್ದು. ಮೊದಲಿನ ಕೆಲವು ಕತೆಗಳನ್ನು ಹೇಳುತ್ತಾ ಕೊನೆಗೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೆ ಎನ್ನುವಾಗ ಭೀಮನಿಂದ ದುಶ್ಶಾಸನ ಬಹಳ ಸಣ್ಣವನೆಂದು ನೋಡಿಕೊಂಡಿದ್ದಾನೆ. ಅದು ಬೇರೆ ಭೀಮನಿಗೆ ಮಾರುತಿ ಎಂದೂ ಕರೆದಿದ್ದಾನೆ. ಬಹಳ ಸುಂದರವಾದ ಪದ್ಯ.

ಇನ್ನೊಂದು ಪದ್ಯದಲ್ಲಿ ಆಂಜನೇಯನನ್ನೂ ಜರೆಯುವ ಕೌರವ "ಕಪಿಗೆ ಚಪಲತೆ ಸಹಜಂ" ಎನ್ನುತ್ತಾಮೆ ರನ್ನ.

ಸಂಜಯವಚನಂ ಎನ್ನುವ ಆಶ್ವಾಸದಲ್ಲಿ ಇನ್ನೂ ತುಂಬಾ ಚೆನ್ನಾಗಿರುವ ಪದ್ಯಗಳಿವೆ. ನಾಳೆಗೆ ಮುಂದುವರಿಕೆ.


ಈ ಭಾಗದಲ್ಲಿ(ಸಂಜಯವಚನಂ) ದುರ್ಯೋಧನ ಕೃಷ್ಣನನ್ನೂ ಮೂದಲಿಸುತ್ತಾನೆ. ಸಂಜಯನು ಬಲರಾಮ ಬರಲಿ, ಅಶ್ವತ್ಥಾಮ ಬರಲಿ ಕೃಪ ಕೃತವರ್ಮರು ಬರಲಿ, ಅವರಲ್ಲೊಬ್ಬರಿಗೆ ಸೇನಾಧಿಪತ್ಯವನ್ನು ಕೊಟ್ಟು ಯುದ್ಧ ಮುಂದುವರೆಸು ಎಂದಾಗ

ತ್ರಿದಶನದೀಸುತಂನಿಂ ತೀ-
ರದ ಕಜ್ಜಂ ಮುನ್ನ ಕಳಶಸಂಭವನಿಂ ತೀ-
ರದ ಕಜ್ಜಮಿನಜನಿಂ ತೀರ-
ರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ

(ಬಿಡಿಸಿ ಓದುವುದು ಹೇಗೆ ಎಂದು ಕೆಲವರು ಕೇಳಿದ್ದರು, ಹಳೆಗನ್ನಡಕಾವ್ಯವನ್ನು ಬಸ್ಸಿನಲ್ಲೋ ರೈಲಿನಲ್ಲೋ ಓದುವುದಕ್ಕಾಗುವುದಿಲ್ಲ. ಸ್ವಲ್ಪ ಗಟ್ಟಿಯಾಗಿ ಓದಿಕೊಂಡರೆ ತಾನಾಗಿ ಒಲಿಯುತ್ತದೆ ಹಳೆಗನ್ನಡ. ಉದಾಹರಣೆಗೆ : ತ್ರಿದಶನದೀ ಸುತನಿಂ ತೀರದ ಕಜ್ಜಂ, ಕಳಶಸಂಭವನಿಂ ತೀರದ ಕಜ್ಜಂ, ಇನಜನಿಂ ತೀರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ". ಅರ್ಥವಾಗದೇ?)

ಗಾಂಗೇಯನಿಂದ, ದ್ರೋಣನಿಂದ, ಕರ್ಣನಿಂದ ಆಗದ ಕಾರ್ಯ ದ್ರೋಣನ ಮಗನಾದ ಅಶ್ವತ್ಥಾಮನಿಂದ ಸಾಧ್ಯವಾದೀತೇ ಎಂದು ದುರ್ಯೋಧನ ಕೇಳ್ತಾನೆ. ಹಾಗೇ ಹಲಿಯಂ ರಣಕೇಳಿಕುತೂಹಲಿಯು ಆದಂತಹ ಬಲರಾಮ ತೀರ್ಥಯಾತ್ರೆಗೆ ಹೋಗಿದ್ದಾನೆ, ಇನ್ನು ಬಾರನು ಮತ್ತು ಹಗೆ ಮಡಿಯುವುದಾದರೆ ಕರ್ಣನಿಗೆ, ದುಶ್ಶಾಸನನಿಗೆ ಇಲ್ಲವಾದಲ್ಲಿ ನನಗೆ, ಉಳಿದವರಿಗಲ್ಲ ಎನ್ನುತ್ತಾನೆ.

ಈ ಕಂದ ಪದ್ಯಗಳ ಸೂಗಸು ಓದಿಯೇ ತಿಳಿಯಬೇಕು. ಶೂನ್ಯಂ ಶೂನ್ಯಂ ಎನ್ನುವ ಪಂಪನ ಹಾಗೇ ರನ್ನನ ಶೂನ್ಯಂ ಕಂದ ಪದ್ಯ.

ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಶಾ-
ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ!

ಈ ರೀತಿಯೆಲ್ಲಾ ಶೋಕಿಸುತ್ತಿರುವಾಗ ಚಾರರು ಹೇಳಿದಂತಹ ಮಾತುಗಳನ್ನು ಕೇಳಿ ಗಾಂಧಾರಿಯೂ ಧೃತರಾಷ್ಟ್ರನೂ ಆ ರಣಕ್ಷೇತ್ರಕ್ಕೆ ಕೌರವನನ್ನು ಹುಡುಕಿ ಬರುತ್ತಾರೆ.

~
ಇನ್ನೂ ಇದೆ.

Sunday 18 August 2013

ಕತೆಯಾದವಳು

ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು.
ರೇಣುಕನ ಎಂದಿನ ಕೆಲಸ ಪ್ರಾರಂಭವಾಯಿತು. ಮೊದಲು ಅಡುಗೆಕೋಣೆ, ಪಾತ್ರೆಗಳಿಗೆ ಒಂದಿಷ್ಟು ನೀರೆರಚಿ, ಉಳಿದ ಕಸಗಳನ್ನೆಲ್ಲಾ ತುಂಬಿಸಿ, ಸ್ವಲ್ಪ ಓರಣ ಮಾಡಿ ಕಸ ಹೊಡೆದು, ಪಾತ್ರೆ ತೊಳೆದು, ಬಟ್ಟೆಯನ್ನು ಮೆಶೀನಿಗೆ ತುರುಕಿ ತನಗಾಗಿ ಕಾಯ್ದಿರಿಸಿದ ಟೋಮೇಟೋ ಬಾತನ್ನು ಸವಿದು ಸುಮ್ಮನೇ ಕುಳಿತಳು ರೇಣುಕ.ದೈನಂದಿನ ವರದಿಯಾಗುತ್ತದೆ ಇದೆಲ್ಲಾ ರೂಪಾ ಮತ್ತೆ ರೇಣುಕಳ ಮಧ್ಯೆ. ಅಂದಹಾಗೆ ಈ ಮನೆಯಲ್ಲಿ ಬಂದುಹೋಗುವ ಒಂದು ಜೀವ ರೇಣುಕನದು, ಬಂದು ಉಳಿಯುವ ಜೀವಗಳು ರೂಪಾ ಮತ್ತು ಜಯಂತನದು.
-೧-
ಸ್ವಂತ ಮನೆಯಲ್ಲವದು ರೇಣುಕನದು, ಸುಮಾರು ಮೂರು ವರ್ಷಗಳಿಂದ ರೂಪಾಳ ತಂದೆಯವರು ಕೊಡಿಸಿದ ಬಾಡಿಗೆ ಮನೆ. ಅಂದರೆ ಮದುವೆಯಾದ ಸಮಯದಲ್ಲಿ ರೇಣುಕ ಮತ್ತು ವೆಂಕಟೇಶ್ ಇಬ್ಬರೂ ಬಂದು ಕೇಳಿದ್ದಕ್ಕೆ ಆ ಮನೆಯನ್ನು ತಿಂಗಳಿನ ಬಾಡಿಗೆಗೆ ಗೊತ್ತು ಮಾಡಿದರು. ತಾವು ಮಗನ ಮನೆಗೆ ಹೊರಟು ಹೋದರು. ತದನಂತರ ಆ ಮನೆಯನ್ನು ತನ್ನ ಮಗಳಿಗೇ ಕೊಟ್ಟು ಜೊತೆಗೆ ಇನ್ನೊಂದು ಮನೆಯನ್ನೂ ಅಲ್ಲಿಯೇ ಕಟ್ಟಿಸಿ ಅದರಲ್ಲಿ ರೇಣುಕನಿಗೆ ವಾಸವಾಗಿರಲು ಹೇಳಿದರು. ಹೀಗೆ ರೂಪಾ ಮತ್ತೆ ಜಯಂತ್ ದಂಪತಿಗಳಿಗೆ ರೇಣುಕ ಮತ್ತು ವೆಂಕಟೇಶ್ ದಂಪತಿಗಳು ನೆರೆಮನೆಯವರಾಗಿದ್ದರು.  ಇದೆಲ್ಲಾ ಹೀಗೇ ಮುಂದುವರೆದರೆ ಕತೆಯಾಗುತ್ತಿರಲಿಲ್ಲ. ಕಾಲದ ಹೊಡೆತದಲ್ಲಿ ಇವತ್ತಿನ ಸ್ಥಿತಿಗೆ ತಲುಪುವುದಕ್ಕೆ ಅದೇನೋ ನಾಟಕಗಳು, ಭಾವಗಳೆಲ್ಲಾ ಹರಿದಾಡತೊಡಗಿತು,.
ರೇಣುಕ ಇದೇ ಊರಿನವಳಲ್ಲ. ವೆಂಕಟೇಶ್ ಮೊದಲು ಕಾರ್ ಡ್ರೈವರಾಗಿದ್ದವನು ಯಾವುದೋ ಕಾರಣಕ್ಕೆ ತಿಪಟೂರಿಗೆ ಬಂದಿದ್ದ. ಸುಮಾರು ೨ ತಿಂಗಳುಗಳ ಕಾಲ ತಿಪಟೂರಿನಲ್ಲೇ ತಾನು ಕೆಲಸ ಮಾಡಬೇಕಾಗಿತ್ತು. ಹೀಗೆ ಉಳಿದುಕೊಂಡಿದ್ದ ನೆರೆಮನೆಯ ಹುಡುಗಿ ೨೦-೨೧ರ ರೇಣುಕಳ ಜೊತೆ ಅನುರಾಗವಾಗಿ ಅವಳನ್ನು ಮದುವೆಯಾಗುತ್ತೇನೆಂದು ಕೇಳಿದ. ಜಾತಿಯ ಪಟ್ಟುಗಳಿಗೆ, ಪೆಟ್ಟುಗಳಿಗೆ ಇವರ ಪ್ರೇಮವೊಂದು ನಗಣ್ಯವೆನಿಸಿದ್ದಕ್ಕೇ ಒಂದು ರಾತ್ರಿ ಇಬ್ಬರೂ ಊರಿನಿಂದ ಹೊರಬಂದರು. ವೆಂಕಟೇಶ್ ತಾನು ಒಳ್ಳೆಯ ಡ್ರೈವರನೆಂದು ಹೆಸರು ಪಡೆದಿದ್ದ. ರೂಪಾಳ ತಂದೆ ಸುಮಾರು ವರ್ಷಗಳಿಂದ ತನ್ನ ಜೊತೆಯಿದ್ದ ವೆಂಕಟೇಶನನ್ನು ಬಲ್ಲವರಾದ್ದರಿಂದ ಅವನ ಸಂಸಾರಕ್ಕೆ ಮುಂದೆ ಹೇಳಿಕೊಳ್ಳುವ ನಷ್ಟವಾಗಲಿಲ್ಲ ಅತ್ತೆ ಮನೆಯೆಂಬ ಸಂಬಂಧ ಹೊರತುಪಡಿಸಿ.
ಎರಡು ವರ್ಷ ಸುಖದ ಸಂಸಾರ. ವೆಂಕಟೇಶ್ ಚೆನ್ನಾಗಿ ದುಡಿಯುತ್ತಿದ್ದ, ಹಿತಮಿತದ ಖರ್ಚು, ಯಾವ ನೋವನ್ನೂ ಕೊಡಲಿಲ್ಲ ರೇಣುಕನಿಗೆ. ಎರಡು ವರ್ಷ ಹೀಗೇ ಸಾಗಿತು. ಒಂದು ದಿನ ಮಾತ್ರ ರೇಣುಕನಿಗೆ ತುಂಬಾ ದುರ್ದಿನವಾಗಿ ಪರಿಣಮಿಸಿತು. ವೆಂಕಟೇಶ್ ಕಾರಿನ ಅಪಘಾತಕ್ಕೆ ಸಿಲುಕಿ ಒಂದೆರಡು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ರೇಣುಕನಿಗೆ ಸಿಗದ ಯಾವುದೋ ದೂರದ ಊರಿನ ಪ್ರಯಾಣಕ್ಕೆ ಸಿದ್ಧನಾಗಿ ಹೊರಟುಹೋಗಿದ್ದ. ಹಠಾತ್ ತಿರುವಿನಲ್ಲಿ ರೇಣುಕ ಒಬ್ಬಳೇ ಸಿಕ್ಕಿ ವಿಲಿವಿಲಿ ಒದ್ದಾಡಿ ಕೊನೆಗೂ ಸಾವಿನ ಆಟದ ಮುಂದೆ ಸೋತು ಏನು ಮಾಡುವುದೆಂದು ತಿಳಿಯದೇ ಹಾಗೇ ಇದ್ದಳು ಹಲವು ದಿನ.
ಇತ್ತ ಕಡೆ ರೂಪಾ ಮತ್ತು ಜಯಂತರದ್ದು ಅನ್ಯೋನ್ಯ ದಾಂಪತ್ಯ. ಸುಮಾರು ತಡವಾಗಿ ಮದುವೆಯಾಗಿದ್ದ ರೂಪಾ ಮತ್ತು ಜಯಂತ್ ತಾವು ವೃತ್ತಿಯಲ್ಲಿ ಔನ್ನತ್ಯಕ್ಕೇರಿದವರು. ಸುಮಾರು ಮೂವತ್ತೈದರ ಆಸುಪಾಸಿನ ರೂಪಾ ಮತ್ತು ಎರಡೋ ಮೂರೋ ವರ್ಷ ದೊಡ್ಡವನಾದ ಜಯಂತ್ ತಮ್ಮ ಓದಿಗೆ ಸಂಬಂಧಪಟ್ಟ ನೌಕರಿ ಹಿಡಿದು, ಮದುವೆಯಾಗುವುದಿಲ್ಲ ಎಂದುಕೊಳ್ಳುತ್ತಲೇ ಮದುವೆಯಾದವರು. ಮಾರ್ಕೆಟಿಂಗ್ ಹೆಡ್ ಎಂಬ ದೊಡ್ಡ ಐದಂಕೆಯ ಸಂಬಳದ ಜಯಂತ್ ನೋಡುವುದಕ್ಕೂ ಹಾಗೆಯೇ ಬಹಳ ಶಿಸ್ತಿನ ಸಿಪಾಯಿ. ಅನಾಥನಾಗದಂತೆ ಸಾಕಿದ ಚಿಕ್ಕಮ್ಮ ಮದುವೆಯಾದ ವರ್ಷವೇ ತೀರಿಕೊಂಡ ಕಾರಣ ರೂಪಾಳಿಗೆ ಸಂಪೂರ್ಣವಾಗಿ ಆವರಿಸಿಕೊಂಡ.
ರೂಪಾಳೂ ಅಷ್ಟೆ, ತಾನಾಯಿತು ಎಂದಿದ್ದವಳು ತನ್ನ ಅಣ್ಣನ ಮದುವೆಯಾಗುತ್ತಲೇ ಮನಸ್ಸು ಬದಲಾಯಿಸಿ ಮದುವೆಯಾಗುತ್ತೇನೆಂದಿದ್ದು ಖುಷಿ ಕೊಟ್ಟಿತ್ತು ಅವಳ ಅಪ್ಪನಿಗೆ. ಹಾಗೇ ಯೋಗ್ಯನೆಂದು ಜಯಂತನನ್ನು ಹುಡುಕಿ ಮದುವೆ ಮಾಡಿಸಿದ್ದರು. ಮದುವೆಯಾದ ಮೇಲೆ ಮನೆಯನ್ನೂ ಅವಳ ಹೆಸರಿಗೆ ಮಾಡಿಕೊಟ್ಟು ವಿದೇಶಕ್ಕೆ ಹೊರಟುಹೋದ ಮೇಲೆ ಅವಳಿಗೂ ತವರೆಂದಿಲ್ಲ, ಬೇರೆ ನೆಂಟಸ್ತಿಕೆಯೂ ಬೇಕಿಲ್ಲವಾಯಿತು.
ಮದುವೆಯಾಯಿತು, ಮಕ್ಕಳಾಗಬೇಡವೇ? ಆ ಯೋಚನೆಯಲ್ಲಿದ್ದ ರೂಪಾಳಿಗೆ ಮೊದಲ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿತು. ತನ್ನ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಂತೆ ಎನಿಸಿದ್ದು ಡಾಕ್ಟರರ ಹೇಳಿಕೆಯ ಮೇಲೆ. ಇನ್ನು ಮಗುವಿನ ಯೋಚನೆಯನ್ನು ಮಾಡುವ ಹಾಗಿಲ್ಲ ಎನ್ನುವ ಡಾಕ್ಟರರ ಮಾತು ರೂಪಾಳ ಮನಸ್ಸಿನ ಆಳದಲ್ಲಿ ಕುಳಿತು ಕಾಡತೊಡಗಿತು. ತನ್ನ ವಯಸ್ಸು ಇನ್ನು ಮಗುವನ್ನು ಕೊಡಲು ಸಾಧ್ಯವಿಲ್ಲವೆಂದೂ, ಗರ್ಭಕ್ಕೆ ಆ ಚೈತನ್ಯ ಇಲ್ಲವೆಂದಲ್ಲವೆಂದೂ ಖಡಾಖಂಡಿತವಾಗಿ ತಿಳಿದ ಮೇಲೆ ತುಂಬಾ ಖಿನ್ನಳಾದಳು ಅವಳು. ದಿನೇ ದಿನೇ ಕಾಡತೊಡಗಿತು ಈ ವಿಷಯ.
ಜಯಂತನೂ ಇದಕ್ಕೆ ಹೊರತಲ್ಲ. ತಾನು ಎಲ್ಲವನ್ನೂ ಕಂಡುಕೊಂಡ ರೂಪಾಳಲ್ಲಿ ಈಗ ತುಂಬಾ ಕನಿಕರಗೊಂಡ. ಇತ್ತ ಕೆಲಸದ ಕಡೆ ಕೂಡಾ ಗಮನವಿಡಲಾರ, ಇದೊಂದು ರೀತಿಯ ದುಗುಡ ಇಡೀ ಮನೆಯನ್ನಾವರಿಸಿತ್ತು.
ರೂಪಾಳ ನೋವು ಮತ್ತು ರೇಣುಕಾಳ ನೋವು ಎರಡೂ ಭಿನ್ನವಾಗಿದ್ದರೂ ಅವರನ್ನು ಒಳ್ಳೆಯ ಸ್ನೇಹಿತೆಯರನ್ನಾಗಿಸಿದ್ದು ಈ ನೋವುಗಳೇ. ಮೊದಲು ಕೆಲಸಕ್ಕೆಂದು ಬಂದ ರೇಣುಕಾಳಲ್ಲಿ ತಾನು ನೋಡಿದ್ದು ನೋವಿನ ಕರಾಳ ಮುಖವೆಂದು ಗೊತ್ತಾದೊಡನೇ ತುಂಬಾ ಹತ್ತಿರವಾಗಿದ್ದಳು ರೂಪ.
ಒಬ್ಬಂಟಿಯಾಗಿದ್ದು ಅಸಹ್ಯವಾದ ಬದುಕು ಎಂದು ಬದುಕನ್ನೇ ದ್ವೇಷಿಸುವ ರೇಣುಕಳಿಗೆ ರೂಪಾ ಮತ್ತು ಜಯಂತ್ ದಂಪತಿ ಇನ್ನೊಂದು ರೀತಿಯ ತನ್ನಂತಿರುವ ಪ್ರಾಣಿಗಳು ಎಂದೆನಿಸಿ ಅವರನ್ನು ಸಮೀಪಿಸಿಕೊಂಡಳು.
-೨-
ಇಂತಹದ್ದೊಂದು ತಿರುವನ್ನು ತಾನು ಬಯಸಿರಲಿಲ್ಲ ಎಂದುಕೊಳ್ಳುತ್ತಾ ಜಯಂತ್ ತನ್ನ ಮನದ ಕೋಣೆಯಲ್ಲಿ ತಾನೇ ವಿಶ್ರಾಂತಿಯಲ್ಲಿದ್ದಾಗ ಅವನನ್ನು ಹೆಚ್ಚು ಕಾಡಿದ್ದು ರೂಪ. ಅದೇನೋ ಇತ್ತೀಚೆಗೆ ಸ್ವಲ್ಪ ಅಸಡ್ಡೆಯಂತೆ ವರ್ತಿಸುತ್ತಾಳೆ ಎಂದೆನಿಸಿ ಒಂದು ತಿಂಗಳಿನಿಂದ ಅವಳನ್ನು ಹತ್ತಿರದಿಂದ ನೋಡಿದ. ರೂಪಾಳಿಗೆ ಮಗುವಿನ ಅದಮ್ಯ ಬಯಕೆ. ತಾನು ಸಶಕ್ತ ಹೌದಾದರೂ ಅವಳಲ್ಲ ಎಂದು ಅವಳಿಗೂ ತಿಳಿದಿದೆ.  ಮತ್ತೆ ಅದು ಯಾಕೆ ಹೀಗೆ ಹಠ ಮಾಡುತ್ತಾಳೆ ಎಂದು ತುಂಬಾ ಯೋಚನೆಯಲ್ಲಿದ್ದ.
ಒಂದು ದಿನ ರೂಪಾಳ ಮಾತು ಈತನನ್ನು ಇಂಚಿಂಚಾಗಿ ಚುಚ್ಚಿದಂತೆ ಭಾಸವಾಯಿತು. ಯಾವುದೇ ಕಾರಣಕ್ಕೂ ಇಂತಹ ಸಂಬಂಧವನ್ನು ಒಪ್ಪವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರೂ ಸಾಯುವ ಮಾತುಗಳನ್ನಾಡಿ ಒಪ್ಪಿಸಿದ್ದಳು ರೂಪ. ಯಾವುದಾದರೂ ಅನಾಥಾಶ್ರಮದ ಮಗುವನ್ನು ಪಡೆಯಬಯಸಿದ ತನ್ನ ನಿಲುವನ್ನು ಅವಳು ಸ್ವಾಗತಿಸದೇ ತನ್ನ ಮತ್ತು ರೇಣುಕಳ ಸಂಬಂಧದಿಂದ ಮಗುವಾಗಲಿ ಎಂದು ಬಯಸಿದ್ದಳು. ಹೇಗೆ ಒಪ್ಪುವುದು? ದೊಡ್ಡ ದ್ರೋಹವೆಂಬಂತೆ ವಿಷಾದವಾಗಿ ಸುಮಾರು ದಿನ ಯೋಚಿಸಿ ಕೊನೆಗೆ ಸರಿ ಎಂದ ಜಯಂತನ ಕಣ್ಣುಗಳಲ್ಲಿ ಯಾವುದೇ ಮಿಂಚುಗಳಿರಲಿಲ್ಲ ಬದಲಾಗಿ ರೂಪಾ ಯಾವುದೋ ಒಂದು ರೀತಿಯ ವಿಚಿತ್ರ ಸಮಾಧಾನಗೊಂಡವಳಂತಿದ್ದಳು.
ತಾನು ಹೇಗೋ ಜಯಂತನನ್ನು ಒಪ್ಪಿಸಿದೆ. ಆದರೆ ರೇಣುಕಳನ್ನು ಒಪ್ಪಿಸಿಕೊಳ್ಳುವ ಬಗೆ ಹೇಗೆ? ಅಂತರಂಗದ ಮಾತುಗಳನ್ನ ಸ್ನೇಹಿತೆಯಲ್ಲಿ ಆಡಬಹುದೇನೋ ಎನ್ನುತ್ತಾ ಅವಳು ತುಂಬಾ ಯೋಚನೆ ಮಾಡಿ ಒಂದು ದಿನ ಏಕಾಂತದಲ್ಲೇ ರೇಣುಕಳಲ್ಲಿ ಹೇಳಿದಳು. ಮೊದಲಿಗೆ ಹೌಹಾರಿದ ರೇಣುಕ ಕ್ರಮೇಣ ತನ್ನ ಪ್ರಾಣವೇ ಜೊತೆಯಲ್ಲಿ ಇರದಿದ್ದ ಮೇಲೆ ಈ ದೇಹದಿಂದ ಇನ್ನೊಬ್ಬರಿಗೆ ತಾಯಿಯಾಗುವುದು ಎಂದೇ ತಿಳಿದು ಒಪ್ಪಿದಳು. ಇದೂ ಕೂಡಾ ರೂಪಾಳ ಪಾಲಿಗೆ ಒದಗಿದ ಅತ್ಯಂತ ಖುಷಿಯ ವಿಚಾರವಾಗಿತ್ತು.
ಸ್ವಲ್ಪ ಸಮಯವಾದ ಮೇಲೆ ಹೇಗೋ ಇಬ್ಬರನ್ನೂ ಒಪ್ಪಿಸಿ ತಾನು ಅವರ ಕೂಡುವಿಕೆಗೆ ಸಮಯವನ್ನೂ ಕೊಟ್ಟು ಅಳುತ್ತಾ ಕುಳಿತುಬಿಟ್ಟಳು. ಯಾವುದೇ ಭಾವವಿಲ್ಲದ ಕೇವಲ ಕೀಲಿಕೈಕೊಟ್ಟರೆ ತಿರುಗುವಂತಹ ಬೊಂಬೆಯಂತೆ ಸುಮಾರು ದಿನ ಮೌನವಾಗಿದ್ದಳು ರೂಪ. ಜಯಂತನೂ ತಾನಾಯಿತು ತನ್ನ ಪಾಡಾಯಿತು ಎನ್ನುತ್ತಾ ಸೋತ ಸೇನೆಯ ನಾಯಕನಂತೆ ಇದ್ದ. ರೇಣುಕಾ ಗೆಲುವಾದಳು, ನಗುತಿದ್ದಳು ಕೆಲವು ದಿನ. ಕೆಲವು ದಿನ ಹುಚ್ಚಿಯಾದಂತಿದ್ದಳು.
ರೇಣುಕಾಳ ಹೊಟ್ಟೆಯಲ್ಲಿ ತನ್ನ ಮಗುವೇ ಹುಟ್ಟಲಿದೆ ಎಂದು ರೂಪಾ ಅತ್ಯಂತ ವಿಶ್ವಾಸವಾಗಿ ನಂಬಿ ಅವಳನ್ನು ಕಾಯುತ್ತಿದ್ದಳು.
-೩-
ತಿಂಗಳುಗಳು ಸವೆದು ಹೋದಂತೆಲ್ಲಾ ರೇಣುಕಾ ಮೈತುಂಬಿಕೊಂಡು ಹೆರಿಗೆಗೆ ಕಾಯುವ ಪ್ರಕೃತಿಯಾದಳು. ರೂಪಾ ಆಶ್ಚರ್ಯದಿಂದ ಅವಳನ್ನು ಗಮನಿಸುತ್ತಾ ಇದ್ದಳು. ಹೀಗೇ ರೇಣುಕಾಳಿಗೆ ತನ್ನ ಗಂಡನ ನೆನಪು ಹೆಚ್ಚಾಗಿ ಹರಿಯತೊಡಗಿತು. ಮಗುವಿನ ಗುದ್ದಾಟ ಹಿತವಾದಂತೆ, ಗಂಡ ಮನದೊಳಗೆ ಇರಿದಂತೆ ಭಾಸವಾಯಿತು. ಇದು ನಿನ್ನದೇ ಮಗು, ನೀನೇ ಅಮ್ಮಾ ಎಂದು ಕರೆದಂತೆ ಭಾಸವಾಗುತ್ತಿತ್ತು. ಸುಮಾರು ೫-೬ ತಿಂಗಳ ಮಗು ಹೊಟ್ಟೆಯಲ್ಲಿ ತನ್ನ ಮೈಯ್ಯ ಮನಸ್ಸಿನ ವಿಪರೀತ ಬದಲಾವಣೆಗಳಿಗೆ ಕಾರಣವಾಗುತ್ತಾ ಹೋಯಿತು.
ಈ ಮಗುವನ್ನು ಹೆತ್ತು ಕೊಟ್ಟರೆ ನಾನು ಪುನಃ ಒಬ್ಬಂಟಿಯಾಗುತ್ತೇನೆ ಎನ್ನುವ ಭಾವ ಕ್ರಮೇಣ ಹೆದರಿಕೆಯಾಗುತ್ತಾ ಸಾಗತೊಡಗಿತು. ಅದು ನಿಮಿಷ ನಿಮಿಷಕ್ಕೂ ತನ್ನ ಘೋರತೆಯನ್ನು ಹೆಚ್ಚಿಸತೊಡಗಿತು. ಇಲ್ಲ ಯಾವ ಕಾರಣಕ್ಕೂ ಈ ಮಗುವನ್ನು ಯಾರಿಗೂ ಕೊಡಲಾರೆ ಎನ್ನುವ ಗಟ್ಟಿಯ ನಿರ್ಧಾರಕ್ಕೆ ಬಂದಂತೆ ರೂಪಾ ಮತ್ತು ಜಯಂತರ ಮುಖ ಇನ್ನೊಂದು ರೀತಿ ಕಾಡಿದಂತೆ ಬೇಡಿದಂತೆ ಅನ್ನಿಸತೊಡಗಿತು. ಏನು ಮಾಡುವುದು ಈ ಘಟನೆಗಳಿಗೆ? ಮೊದಲಿನ ವಿಶ್ವಾಸವೂ ಅವರ ಪ್ರೀತಿಯೂ ಇಂದು ಖಂಡಿತ ದೊಡ್ಡದು ಅನ್ನಿಸುತ್ತಿಲ್ಲ. ಕೇವಲ ಕೆಲವು ತಿಂಗಳುಗಳಲ್ಲಿ ಆದ ಮಾರ್ಪಾಡು ಇದು. ಪ್ರತಿಯೊಂದು ಜೀವಕ್ಕೂ ಒಂದು ದೀರ್ಘವಾದ ನೋವು ಎಂದಿರಬೇಕೇನೋ? ಆ ನೋವನ್ನು ವಿಶ್ಲೇಷಿಸುತ್ತಾ ಸಾಗುವಾಗ ಸಣ್ಣ ನಲಿವುಗಳೆಲ್ಲ ಗೌಣ. ಅದೇ ಬೆಳಗು ಅದೇ ಮನೆಯ ಕತೆಗಳು ಎಂದುಕೊಳ್ಳುತ್ತಲೇ ಜೀವನವನ್ನು ಒಂದೊಂದು ಹೆಜ್ಜೆಯೂರಿ ಸಾಗುವುದು ಮಾನವನಿಗೆ ಅರಿವಾಗದೇ ಸಾಗುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯೊಳಗೆ ಇದೊಂದು ನಡೆದ ಘಟನೆ. ಯಾವ ಜಗತ್ತಿಗೂ ಗೊತ್ತಾಗಲಾರದು ಎಂದುಕೊಂಡಳು.
ಇಂದೇ ಕೊನೆಯ ಬಾರಿಯಾಗಬೇಕು. ಹೇಗಾದರೂ ಒಂದು ಖಡಕ್ ಎಂಬಂತೆ ಉತ್ತರಕೊಟ್ಟು ತೀರ್ಮಾನವಾಗಬೇಕು. ಇದುವರೆಗೆ ನಡೆದ ಘಟನೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವಂತಿಲ್ಲವಾದರೂ ಮುಂದೆ ಹೇಗಿರಬೇಕು. ತನಗೆ ಸಾಧ್ಯವಿಲ್ಲ ಎಂದುಕೊಂಡಳು.
ಆ ದಿನದ ಕೆಲಸ ಮುಗಿಸಿ ಮನೆಗೆ ಬಂದು ಬಾಗಿಲು ಹಾಕಿಕೊಂಡು ಸುಮಾರು ಬಾರಿ ಹೇಳಿದಂತೆ ಒಲಿಸಿದಂತೆ ಅಭಿನಯಿಸಿದಳು ರೇಣುಕ. ಏಕಪಾತ್ರಾಭಿನಯದ ರೂಪಾ ಮತ್ತು ಜಯಂತನ ಪಾತ್ರಗಳು ತನ್ನನ್ನು ಸೋಲಿಸುತ್ತಿದೆ ಎಂದೆನಿಸತೊಡಗಿತು. ಇದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ ತಾನು ಯಾವುದೋ ಊರಿಗೆ ತೆರಳುತ್ತೇನೆ ಎಂದು ನಿರ್ಣಯಿಸಿ ಮನೆಯಿಂದ ಹೊರಗೆ ಬಂದಳು.
ಮನೆಯನ್ನು ನೋಡಿ, ರೂಪಾ ಜಯಂತರ ಮುಖಗಳನ್ನು ಕಣ್ಣಮುಂದೆ ತಂದು, ಸುಖವಾಗಿರಲಿ ಎಂದು ಎದೆದುಂಬಿ ಹಾರೈಸಿ ಸೂರ್ಯನ ಚಲನೆಯಂತೆ ನೇರ ಹೊರಟಳು ರೈಲುತಾಣಕ್ಕೆ. ಬೀಳ್ಕೊಡಲು ಸ್ನೇಹ, ಪ್ರೇಮ, ನಿಷ್ಕಳಂಕ ಬದುಕಿನ ಓಟ ಜೊತೆಯಲ್ಲಿತ್ತು.


೦೯-೦೧-೨೦೧೩
(ಈ ಕತೆ ಪಂಜು ಮ್ಯಾಗಝಿನ್ ನಲ್ಲಿ ಪ್ರಕಟವಾಗಿತ್ತು.. ಲಿಂಕ್ :http://www.panjumagazine.com/?p=89 )

Friday 9 August 2013

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೯ (ತಾಂಬೂಲ ಭಕ್ಷಣಂ)

ಯಕ್ಷಗಾನ ನನಗೆ ಚೆನ್ನಾಗಿತ್ತು. ಚಿಕ್ಕಪ್ಪನಿಗೆ ನೂರರಲ್ಲಿ ಒಂದು, ನನಗೆ ಬರೀ ಒಂದೇ! ಹಾಸ್ಯದ ಸನ್ನಿವೇಶಕ್ಕೆ ದೊಡ್ಡದಾಗಿ ನಕ್ಕಾಗ ವಿಚಿತ್ರವೆಂಬಂತೆ ಚಿಕ್ಕಪ್ಪ ನೋಡಿದ್ದು ಮಾತ್ರ ಹಾಸ್ಯದ ಮೇಲೆ ಸಂಶಯವನ್ನುಂಟು ಮಾಡಿತು. ಆದರೂ ಮೊದಲಿನ ಹಾಸ್ಯದ ಔಚಿತ್ಯ ಮತ್ತು ಗಂಭೀರತೆ ಈಗಿನ ಯಾವ ಕಲಾಪ್ರಕಾರದಲ್ಲೂ ಇಲ್ಲವೇನೊ. ಬೆಳಗ್ಗಿನ ಅಷ್ಟೇನೂ ಭಯಂಕರವಲ್ಲದ ಚಳಿಗೆ ಮರ್ಯಾದೆ ಕಡಿಮೆಯಾಗಬಾರದೆಂದು ತಲೆಗೆ ಒಂದು ಬಟ್ಟೆಯನ್ನು ಸುತ್ತಿ ಹೊರಟೆವು. ಮನುಷ್ಯನಿಗೆ ನಡೆಯುವಾಗ ನಿದ್ದೆ ಮಾಡಲಿಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ನಿದ್ದೆ ಇರಲಿಲ್ಲವಷ್ಟೆ.

ಮಗನೆ, ಇದೇ ಗದ್ದೆಯಲ್ಲಿ ಮೊದಲು ಭಯಂಕರ ಯಕ್ಷಗಾನಗಳು ಆಗ್ತಿತ್ತು. ಅದೂ ಆಗಿನ ಕಲಾವಿದರು ಜೀವ ಬಿಟ್ಟು ಕುಣಿಯುತ್ತಿದ್ದರು. ಈಗಿನ ಹಾಗೆ ಸಮತಟ್ಟಿನ ನೆಲವೂ ಅಲ್ಲ, ಕುಣಿದು ಕಾಲು ಉಳುಕಿಸಿಕೊಂಡು ನಾಳಿನ ಯಕ್ಷಗಾನಕ್ಕೆ ಋಷಿಯ ಪಾತ್ರ ಮಾಡಿದ ಕಲಾವಿದರೂ ಇದ್ದಾರೆ. ಈಗ ಹಾಗೇನಿಲ್ಲ ಒಂದೋ ರಪರಪ ಐವತ್ತು ಸಲ ತಿರುಗುವುದು, ಅರ್ಥ ಹೇಳುವಾಗ ಬೆಬ್ಬೆಬೆ ಹೇಳುವುದು. ಪುಣ್ಯಕ್ಕೆ ಇಂಗ್ಲೀಷೊಂದು ಮಾತನಾಡುವುದಿಲ್ಲ ಎನ್ನುವುದು ಪುಣ್ಯ.

ಹಾಗೇನಿಲ್ಲ ಚಿಕ್ಕಪ್ಪ. ಎಷ್ಟೊ ಜನ ಕಲಿತವರು ತುಂಬಾ ಚಂದ ಮಾಡ್ತಾರೆ. ಆಗಿನ ವ್ಯವಸ್ಥೆ ಹಾಗಿತ್ತಷ್ಟೆ. ಈಗ ಹಾಗಿಲ್ಲ. ಒಳ್ಳೇ ವಿಷಯ ಸಂಪಾದನೆ ಮಾಡಿ ನಂತರ ಮಾತನಾಡುವವರು ಎಷ್ಟೋ ಕಲಾವಿದರಿದ್ದಾರಲ್ಲ. ನಿಮ್ಮ ಹಳೇ ಬಣ್ಣದವೇಷದ ಬಾಯಿಯಲ್ಲಿ ಆರ್ಭಟ ಮಾತ್ರವಿತ್ತು. ಬೇರೆ ಯಾವ ಪಾತ್ರವೂ ಮಾಡುತ್ತಿರಲಿಲ್ಲ. ಈಗಿನ ಕಾಲದಲ್ಲಿ ರಾಕ್ಷಸ ನಾಳಿನ ಇಂದ್ರನಾಗುತ್ತಾನೆ.

ಹೌದು ಮಗನೆ, ಅದು ಸರಿ. ಕಾಲಕ್ಕೆ ತಕ್ಕ ಹಾಗೆ ಕೋಲ. ಒಂದು ಎಲೆ ಅಡಕ್ಕೆ ತಿಂದು ಹೊರಡುವ. ಸ್ವಲ್ಪ ಬೆಚ್ಚಗೆ ಇರ್ತದೆ.

ಎಲೆ ಅಡಕ್ಕೆ ತಿನ್ನಲಿಕ್ಕೆ ಶುರು ಮಾಡಿದ್ದು ನಿನ್ನಪ್ಪನ ಜೊತೆಗೇ ಮಾರಾಯ. ನಮ್ಮ ಅಪ್ಪ ತಿನ್ನುತ್ತಿದ್ದರು. ಒಳ್ಳೇ ಕುಣಿಯ ಹೊಗೆಸೊಪ್ಪು. ಅದೂ ಮಂಗಳೂರಿನ ಯಾವುದೋ ಪೈ ಅಂಗಡಿಯಿಂದ ತಿಂಗಳಿಗೊಮ್ಮೆ ತರಿಸುವುದಾಗಿತ್ತು. ಹೀಗಾಗಿ ಮನೆಯಲ್ಲಿ ಹೊಗೆಸೊಪ್ಪಿನ ಸ್ಟಾಕ್ ಯಾವತ್ತೂ ಇರುತ್ತಿತ್ತು. ಬೇರೆ ಯಾರೂ ಎಲೆ ತಿನ್ನುತ್ತಿರಲಿಲ್ಲ.

ನಿನ್ನಪ್ಪ ಎಲೆ ತಿನ್ನಲು ಶುರುಮಾಡಿದ ಬಗ್ಗೆ ಒಂದು ಸಣ್ಣ ಕತೆ ಇದೆ ಮಾರಾಯ. ಆಗಿನ ಕಾಲದ ಕಬಡ್ಡಿ ಆಟದ ಒಂದು ಕತೆ ಹೇಳ್ತೇನೆ ನಿನಗೆ. ಕಬಡ್ಡಿಯ ಜೊತೆಗೆ ಮನೆಗೆ ತಲುಪಬಹುದು.

ಸುಮಾರು ಕಾಲದಿಂದ ಕಬಡ್ಡಿ ಆಟ ಆಡುತ್ತಿದ್ದೆವು ನಾವು. ಶಾಲೆಯ ದಿನಗಳಿಂದಲೂ ನಿನ್ನಪ್ಪ, ಜಗ್ಗು ಎಲ್ಲರೂ ಒಳ್ಳೆಯ ಕಬಡ್ಡಿ ಆಟಗಾರರು. ನಾನು ಜೊತೆಗೆ ಎಷ್ಟೊ ಆಟಗಳಿಗೆ ಹೋಗಿದ್ದೇನೆ. ನೂರಿನ್ನೂರು ರೂಪಾಯಿಗಳ ಬಹುಮಾನಕ್ಕಿಂತಲೂ ಪ್ರತಿಷ್ಟೆಯ ಆಟವಾಗಿತ್ತು ಕೆಲ ವರ್ಷಗಳಿಗೆ. ಅದೊಂದು ದಿನ ಆನೆಕಲ್ಲಿನ ಶಾಲೆಯ ಮೈದಾನದಲ್ಲಿ ಕಬಡ್ಡಿ ಪಂದ್ಯ. ಸುಮಾರು ಆಟಗಾರರು ಬಂದಿದ್ದರು. ಜಗ್ಗುವಿನ ಟೀಮಿನಲ್ಲಿ ನಾನೂ ಸೇರಿಕೊಂಡಿದ್ದೆ. ಹೀಗೆ ನಾನೂ ನಿನ್ನಪ್ಪನೂ ಬೆಳಗ್ಗೆ ಏಳು ಘಂಟೆಗೆ ಮನೆಯಿಂದ ಹೊರಟು ಜಗ್ಗು ಮತ್ತೆ ಉಳಿದವರ ಜೊತೆ ಹೇಗೂ ಆನೆಕಲ್ಲಿನ ಶಾಲೆಗೆ ತಲುಪಿದೆವು.

ಕಬಡ್ಡಿಗೆ ಹೆಸರು ಕೊಟ್ಟು ಆಡಿಯೂ ಆಯಿತು. ಎಲ್ಲರಿಂದ ಬಲಾಢ್ಯ ಮತ್ತು ಚುರುಕಿನ ಆಟಗಾರರಿದ್ದುದರಿಂದ ಮತ್ತು ಹೆಚ್ಚಿನ ಅಭ್ಯಾಸವಿದ್ದುದರಿಂದ ಎರಡೋ ಮೂರೋ ಪಂದ್ಯ ಗೆದ್ದೆವು. ಮತ್ತೆ ನಮ್ಮ ಆಟ ಇದ್ದುದು ಮಧ್ಯಾಹ್ನದ ಮೇಲೆಯೇ. ಊಟ ಮಾಡುವುದಕ್ಕೆಂದು ಅಲ್ಲಿಯೇ ಹೊಳೆಯ ಹತ್ತಿರ ಇದ್ದ ಹೋಟೆಲ್ ಬಳಿ ಬಂದು ಏನನ್ನೋ ತಿಂದು ಇನ್ನೂ ತುಂಬಾ ಸಮಯವಿದ್ದುದರಿಂದ ಹೊಳೆಯಲ್ಲಿ ಈಜಾಡಿ ಆಟದ ತರಚುಗಾಯಗಳ ನೋವನ್ನು ಅನುಭವಿಸಿದೆವು.

ನಂತರ ಏನೂ ಕೆಲಸವಿರಲಿಲ್ಲವಾದ್ದರಿಂದ ಅಲ್ಲಿ ಬಸ್ ಸ್ಟಾಂಡ್ ಎಂದು ಕರೆಯಲ್ಪಡುವ ಜೋಪಡಿಯ ಒಳಗೆ ಹಾಕಿದ್ದ ಕರೆಂಟ್ ಕಂಬದ ಬೆಂಚಿನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಜಗ್ಗುವೋ ಅಲ್ಲ ಇನ್ನೊಬ್ಬನಾರೋ ಎಲೆ ಅಡಿಕೆ ತಂದು ತಿನ್ನತೊಡಗಿದರು. ನಿನ್ನಪ್ಪ ಸುಮ್ಮನಿರಲಾರದೆ ಮನೆಯಲ್ಲಿರುವ ತಾಂಬೂಲದ ಪೆಟ್ಟಿಗೆ, ತೆಂಗಿನ ಮರಕ್ಕೆ ಹಬ್ಬಿದ ಎಲೆಬಳ್ಳಿ ಮುಂತಾದುವುಗಳ ಬಗ್ಗೆ ಕೊಚ್ಚಿಕೊಳ್ಳುತ್ತಾ ಕೊನೆಗೆ ಹೊಗೆಸೊಪ್ಪಿನ ವಿಷಯ ಬಂತು. ನಮ್ಮ ಮನೆಯ ಹೊಗೆಸೊಪ್ಪು ಒಂದು ಸಣ್ಣ ತುಂಡು ಸಾಕು, ಇದೆಲ್ಲ ಎಂತದ್ದು? ಲೆಕ್ಕಕ್ಕೆ ಇಲ್ಲ ಎನ್ನುವ ಮಾತುಗಳನ್ನೂ ಸೇರಿಸಿ ಬಿಟ್ಟ.

ಭಟ್ರೆ, ನೀವು ತಿಂದಿದ್ದೀರಾ? ಸುಮ್ಮನೆ ಬಡಾಯಿ ಕೊಚ್ಚುವುದೇನು ಬೇಡ. ತಾಕತ್ತಿದ್ದರೆ ಒಮ್ಮೆ ಎಲೆಅಡಿಕೆ ಹಾಕಿ ನೋಡಿ ಹೊಗೆಸೊಪ್ಪಿನ ಸಹಿತ ಎಂದನೊಬ್ಬ. ನಿನ್ನಪ್ಪನ ದೊಡ್ಡ ಮರ್ಯಾದೆ ಅಲ್ಲೆಲ್ಲೋ ಹರಾಜಾದಂತನಿಸಿತೇನೋ, ಒಮ್ಮೆಲೆ ಓಹೋ, ನೋಡು ನನ್ನ ತಾಕತ್ತು ಎಂದು ಅರ್ಧ ಬೆರಳಿನಷ್ಟುದ್ದದ ಹೊಗೆಸೊಪ್ಪಿನ ಸಹಿತ ಎಲೆ ಅಡಿಕೆ ಜಗಿದ. ಅದೇನಾಯಿತೋ ಏನೋ ನಿನ್ನಪ್ಪ ಕೆಂಪು ಕೆಂಪಗಾದ. ಮುಖದಲ್ಲಿ ಬೆವರು ಧಾರಾಕಾರ ಶುರುವಾಯಿತು. ವಾಂತಿ ಬಂದಂತೆ ವ್ಯಾಕ್ ಎಂದ. ಕಣ್ಣುಗಳನ್ನ ಗಿರ ಗಿರ ತಿರುಗಿಸಿದ.

ನಮಗೆ ಮೊದಲು ಮೋಜೆನ್ನಿಸಿದರೂ ಕ್ರಮೇಣ ನಿನ್ನಪ್ಪ ಜೋಪಡಿಗೆರಗಿ ಕುಸಿದು ಕುಳಿತ. ಆಗ ಹೆದರಿಕೆ ಶುರುವಾಗತೊಡಗಿತು ನಮಗೆ. ಹೋಟೆಲಿನಿಂದ ಮಜ್ಜಿಗೆ ನೀರು ತಂದು ಕುಡಿಸಿದೆವು, ಸರಿ ಹೋಗಲಿಲ್ಲ. ಯಾರೋ ಬಸ್ ಸ್ಟಾಂಡಿಗೆ ಬಂದವರು, ಸ್ವಲ್ಪ ಮಲಗಲಿ, ಎಲ್ಲಾ ಸರಿ ಹೋಗುತ್ತದೆ, ತಲೆಗೆ ಏರಿರಬೇಕು ಹೊಗೆಸೊಪ್ಪು ಎಂದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಬಡ್ಡಿ ಆಟವೂ ಇದ್ದಿತ್ತು. ನಿನ್ನಪ್ಪನಿಲ್ಲದೇ ಆಡಿದೆವು. ಒಂದು ಪಂದ್ಯ ಗೆದ್ದರೂ, ನಂತರದ ಪಂದ್ಯದಲ್ಲಿ ಸೋತೆವು. ಅಷ್ಟಾಗುವಾಗ ಸಂಜೆಯಗಿತ್ತು. ನಿನ್ನಪ್ಪನ ನೆನಪೇ ಇರಲಿಲ್ಲ ನಮಗೆ. ಪಂದ್ಯ ಮುಗಿದ ಕೂಡಲೇ ಬಸ್ ಸ್ಟಾಂಡಿಗೆ ಬಂದು ನೋಡಿದರೆ ನಿನ್ನಪ್ಪ ಸುಖನಿದ್ರೆಯಲ್ಲೇ ಇದ್ದ. ಎಬ್ಬಿಸಿದರೂ ಏಳಲಿಲ್ಲ.

ನಮ್ಮ ಟೀಮಿನ ಎಲ್ಲರೂ ಹೊರಟು ಹೋದರು. ನಾನು ಮತ್ತು ಜಗ್ಗ ಮಾತ್ರ ಉಳಿದವರು. ಕೊನೆಗೆ ನೀರು ತಂದು ಮುಖಕ್ಕೆ ಹಾಕಿ, ಇನ್ಯಾರೋ ಹೇಳಿದ ತೆಂಗಿನ ಎಣ್ಣೆ ತಲೆಗೆ ಹಾಕಿ ಮತ್ತೊಂದು ಘಂಟೆಯ ನಂತರ ಅಲ್ಲಿಂದ ನಿನ್ನಪ್ಪನ ಜೊತೆಗೂಡಿ ಮನೆಗೆ ಹೊರಟೆವು.

ಇದಾಗಿ ಸುಮಾರು ದಿನಗಳು ನಿನ್ನಪ್ಪ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಕೊನೆಗೆ ಒಂದೊಂದು ಸಲ ಎಲೆ ಅಡಿಕೆ ಪ್ರಾರಂಭಿಸಿದವರು ಯಕ್ಷಗಾನ, ಬೇರೆ ಕಡೆಯ ಮದುವೆಗಳು ಎಂದೆಲ್ಲಾ ತಿನ್ನತೊಡಗಿದರು. ನಂತರ ಅದನ್ನು ಅಭ್ಯಾಸ ಮಾಡಿಕೊಂಡರು.

ಈಗಲೂ ಅರ್ಧ ಬೆರಳಿನಷ್ಟು ಹೊಗೆಸೊಪ್ಪಿಲ್ಲದಿದ್ದರೆ ಅವರಿಗೆ ತಿಂದದ್ದು ಸಮಾಧಾನ ಇಲ್ಲ. ಅದೂ ಸುಮ್ಮನೇ ತಿಂದು ಉಗುಳುವುದಲ್ಲ. ಚಂದವೇ ಬೇರೆ. ಅದೊಂದು ಕಲೆಯೋ ಏನೋ? ಹಹ್ಹ..

ಎಲ್ಲಿದ್ದೇವೆ ಈಗ? ಹ್ಮ್.. ಇವತ್ತು ತೋಟದ ಕೆಲಸಕ್ಕೆ ಕೆಲಸದವರು ಬರ್ತಾರೆ. ಇನ್ನು ಮನೆಗೆ ಹೋಗಿ ಒಂದು ಸ್ವಲ್ಪ ಮಲಗಿ, ಚಾಯ ಕುಡಿದು ತೋಟಕ್ಕೆ ಹೋಗಬೇಕು.

ಹೌದಾ, ಕಷ್ಟ. ಈಗ ಜನವೂ ಸಿಗುವುದಿಲ್ಲ ಅಲ್ವ? ಸರಿ ಚಿಕ್ಕಪ್ಪ.. ನಾನು ಮತ್ತೆ ಬರ್ತೇನೆ. ಈಗ ನಾನು ಚಂದ ನಿದ್ದೆ ಮಾಡ್ಬೇಕು. ಮೊದಲೆಲ್ಲಾ ಯಕ್ಷಗಾನ ನೋಡಿದ ಮೇಲೆ ಮಲಗಿದರೆ ಪಾತ್ರಗಳು ಬಂದು ನಿದ್ದೆಯಲ್ಲಿ ಕುಣಿಯುತ್ತಿದ್ದವು. ಈಗ ಕುಣೀತದಾ ನೋಡ್ಬೇಕು..