Saturday 24 March 2012

ಅಸ್ಪಷ್ಟ !


ಸುಂದರವಾದ ಒಂದು ಬಿಳಿಯ ಗುಲಾಬಿ, ತಿಳಿ ಬಣ್ಣ.. ನೋಡನೋಡುತ್ತಿದ್ದಂತೇ ಬೆಳೆಯಲಾರಂಭಿಸಿತು. ಇದೇಕೆ ಹೀಗೆ?  
ಆ ಬಿಳಿಯ ಪಕಳೆಗಳು ದೊಡ್ಡದಾಗುತ್ತಾ ಅದರ ಒಳಗೆ ಇಳಿಯುತ್ತಿದ್ದೇನೆ ಎಂದೆನಿಸಿತು.. ಸತ್ತಿದ್ದ ನೊಣ ಕೂಡ ಕಾಣಬಲ್ಲೆ ! ಏನಾಯಿತು ? ಎಲ್ಲಿ ಇಳಿಯುತ್ತಿದ್ದೇನೆ ಎಂಬುದನ್ನೂ ಯೋಚಿಸದೆ ಇಳಿಯತೊಡಗಿದೆ.. ಒಂದೊಂದು ಪಕಳೆಯಿಂದ ಇನ್ನೊಂದು ಪಕಳೆಗೆ ಜಾರುಬಂಡೆಯ ರೀತಿ ಇಳಿಯುತ್ತಾ ಮುಂದುವರೆದೆ.. ಪಕಳೆಗಳ ಮೇಲೆ ಇದ್ದ ನೀರಿನ ದೊಡ್ಡ ದೊಡ್ದ ಹನಿಗಳು ಕೆಣಕಿದಂತೆ ಜಾರುತ್ತಾ ಮುಂದುವರೆದೆ.. ಜಾರಿದೆ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರಿದೆ. .

ಹಾರುತ್ತಿದ್ದಂತೆ ಮತ್ತೇರಿಸುವ ಆ ಗುಲಾಬಿಯ ಸುಗಂಧ ಮತ್ತೇನನ್ನೋ ಯೋಚಿಸದಂತೆ ಇರುವಂತ ಸ್ಥಿತಿ..ಆಘ್ರಾಣಿಸುತ್ತಾ ಜಾರತೊಡಗಿದೆ. ಒಮ್ಮೊಮ್ಮೆ ಪ್ರಪಾತಕ್ಕಿಳಿಯುತ್ತೇನೆಂದೆಣಿಸಿದರೂ ಆ ಜಾರುವಿಕೆಯಲ್ಲಿ ಅದೆಂತಹ ಅಮೋಘ ಸುಖ. ಜಾರುವುದೂ ಒಂದು ಕಲೆಯೆಂದು ನನ್ನ ಮೇಲೆಯೇ ಹೆಮ್ಮೆಪಡುತ್ತಾ ಜಾರುತ್ತಾ ಹೋದೆ..

ಕೆಳಕ್ಕಿಳಿದಂತೆ ಹಳದಿ, ಸ್ವಲ್ಪಬಿಳಿ, ಮತ್ತೆ ಕೆಂಪು ಕೇಸರ.. ಹೂವಿನ ಒಳಪದರು.. ಸಣ್ಣ ಪಕಳೆಗಳು. ಸ್ವಲ್ಪ ಕಸಿವಿಸಿಯೆಂದೆನಿದರೂ ಮತ್ತೆ ನೋಡುತ್ತಾ ಕುಳಿತೆ.. ಗುಲಾಬಿಯ ಪರಿಮಳದ ತೀವ್ರತೆ ಹುಚ್ಚುಹಿಡಿಸುವಂತೆ ಹೆದರಿಸತೊಡಗಿತು ..

ಇಳಿಯುವಾಗ ಸುಲಭವಾಗಿದ್ದ ಪಕಳೆಗಳ ದಾರಿಯನ್ನು ಹತ್ತುವುದು ಸಾಧ್ಯವಲ್ಲ. ಮತ್ತೆ ಕೊಳೆಯಲಾರಂಬಿಸಿದ ಹೂವಿನ ಬುಡದಲ್ಲಿರುವುದು ಆಗದ ಕಾರ್ಯ, ಇನ್ನೂ ಇಲ್ಲಿ ಇರುವುದು ಸಾಧ್ಯವೇ ಇಲ್ಲ.. ಹತ್ತುವ ಬಗೆ ಹೇಗೆ ?

ಹತ್ತತೊಡಗಿದೆ, ಜಾರಿ ಬಿದ್ದೆ, ಪುನಃ ಹತ್ತಿದೆ ಪುನಃ ಬಿದ್ದೆ.. ಇನ್ನು ಆಗುವುದಿಲ್ಲ ಎಂದೆಣಿಸಿ ಹೂವಿನ ಪಕಳೆಗಳನ್ನ ಒಂದೊಂದಾಗಿ ಹರಿಯತೊಡಗಿದೆ. ಅದೂ ಆಗಲಿಲ್ಲ. ಸುಗಂಧವೆಲ್ಲಾ ವಾಸನೆಯೆಂದೆಣಿಸಿ ವಾಕರಿಕೆ ಬರತೊಡಗಿತು. ಹೇಗಾದರೂ ಹತ್ತಬೇಕು ಎನ್ನುವ ಆದಮ್ಯ ಆಸೆಯಿಂದ ಕಷ್ಟಪಟ್ಟು ಮೇಲೇರತೊಡಗಿದೆ. ಏನೋ ಬೇರೆಯ ಜಗತ್ತಿನ ಬೆಳಕು ನೋಡಿದಂತೆ ಅನ್ನಿಸತೊಡಗಿತು. ಆ ಬೆಳಕಿಗಾಗಿ, ಆ ಹೊರಜಗತ್ತಿಗಾಗಿ ಹಾತೊರೆಯುತ್ತಾ ಮೇಲೇರಿದೆ .. ಇನ್ನೇನು ಹೊರಗೆ ಇಣುಕಬೇಕು, ಅಷ್ಟರಲ್ಲಿ ಕಾಲು ಜಾರಿತು..

ಕನಸಿನಿಂದ ಬೆಚ್ಚೆತ್ತು ಎದ್ದು ಹಾಸಿಗೆಯಿಂದ ಹೊರಗೆ ನೋಡಿದಾಗ ಬೆಳಕಾಗಿತ್ತು.

9 comments:

  1. ಸಾವಿರ ಅರ್ಥದ ಕಥೆ.. 3ಡಿ ಕಥೆಯಾ ಇದು...

    ReplyDelete
  2. ಕಿರಣ ನಿಜ ಸಾವಿರ ಅರ್ಥ ಇದ್ದು ... ಹೊರಗಿನಿಂದ ಯಾವದೇ ಚಂದ ಕಂಡರೂ ಒಳಗಿನಿಂದ ಅದರ ನಿಜರೂಪ ಬೇರೆದಾಗೆ ಇರ್ತು .. ಚೆನ್ನಾಗಿದ್ದು ಕಲ್ಪನೆ ...

    ReplyDelete
  3. ಸುಂದರವಾದ , ಅರ್ಥಪೂರ್ಣ ಕಥೆ !
    ತೀವ್ರವಾದ ಸೆಳೆತ , ಆಕರ್ಷಣೆ ನಮ್ಮನ್ನು ಜಾರಿಸಿ ಬಿಡುವಾಗ , ಆ ಜಾರಿಕೆ ಹಿತವೆನಿಸುತ್ತದೆ . ಆದರೆ ಅಲ್ಲಿಂದ ಮತ್ತೇ ಮೇಲೆ ಹಟ್ಟುವ ಹಾದಿ ... ಸುಲಭವೇ?

    ತುಂಬಾ ಇಷ್ಟವಾಯ್ತು !!!!

    ReplyDelete
  4. ಸುಂದರವಾದ , ಅರ್ಥಪೂರ್ಣ ಕಥೆ !
    ತೀವ್ರವಾದ ಸೆಳೆತ , ಆಕರ್ಷಣೆ ನಮ್ಮನ್ನು ಜಾರಿಸಿ ಬಿಡುವಾಗ , ಆ ಜಾರಿಕೆ ಹಿತವೆನಿಸುತ್ತದೆ . ಆದರೆ ಅಲ್ಲಿಂದ ಮತ್ತೇ ಮೇಲೆ ಹತ್ತುವ ಹಾದಿ ... ಸುಲಭವೇ?

    ತುಂಬಾ ಇಷ್ಟವಾಯ್ತು !!!!

    ReplyDelete
  5. ಕಿರಣ ತತ್ವ....
    ಆಳಕ್ಕಿಳಿದಂತೆ ತೆರೆದುಕೊಳ್ಳುವ ಲೋಕ ವಿಸ್ಮಯಕರವಾದುದು
    ಕುತೂಹಲವ ಬೆನ್ನಟ್ಟಿ ರಸಾತಳಕ್ಕಿಳಿದರೂ, ಮನಮೋಹಕ ಲೋಕದವು ಕಣ್ಣೆದುರು ಅನಾವರಣಗೊಂಡರೂ ಸಹ...
    ಮತ್ತೆ ಮೇಲೆ ಮರಳಬೇಕು ಎನ್ನುವ ಬಯಕೆ...
    ಮುದಗೊಳ್ಳುವ ಮಾಧುರ್ಯವಿದ್ದರೂ ಸ್ವಚ್ಛಂದ ಬೆಳಕು ಮತ್ತು ನಿರ್ಮಲ ಪ್ರಾಣವಾಯು ಎಂದೆದಿಗೂ ಅವಶ್ಯಕ...

    ಬೇರೆಯದರಲ್ಲಿ ಇಳಿಯುವುದರ ಬದಲು
    ನಮ್ಮೊಳಗೆ ನಾವು ಇಳಿಯಬೇಕು....


    ನಿಮ್ಮ ಭಾವಾಭಿವ್ಯಕ್ತಿಗೆ
    ಅಭಿನಂದನೆಗಳು.. :)

    ReplyDelete
  6. ಎಲ್ಲಿಂದ ಯೋಚನೆಗೆ ತೊಡಗಿ ಎಲ್ಲಿ ಆ ಯೋಚನೆಗೆ ಬ್ರೇಕ್ ಹಾಕುವದೋ ತಿಳಿಯೆ, ಹಲವು ಮುಗ್ಗುಲುಗಳ ಅರ್ಥಗಳು,ಒಟ್ಟಿನಲ್ಲಿ ಒಂದೆ ಮಾತು ಸೂಪರ್್್್್್್್.

    ReplyDelete
  7. ನಿಜವಾಗಲೂ ಮೂಕಳಾದೆ...ನಿನ್ನ ಕತೆ ಓದಿ...ಜೀವನದ ನಿಜವಾದ ತತ್ವವನ್ನು ಹೇಳಿದಂತಿದೆ..!! ಜೀವನದ ಮಜಲುಗಳೆಲ್ಲಾ ಚೆಲುವೆಂದುಕೊಳ್ಳುವಸ್ಟರಲ್ಲೆ ಅದರ ಆಳದ ಅರಿವಾಗಿ, ಇನ್ನೇನೂ ಇಲ್ಲದ ಶೂನ್ಯದ ಭಾವ ಆವರಿಸಿಕೊಳ್ಳುವದನ್ನ ಸೊಗಸಾಗಿ ಹೇಳುವಲ್ಲಿ ಸಫಲವಾದೆ...!!

    ReplyDelete
  8. ಅಬ್ಬಾ !! ಎಂಥ ಕತೆ ಕಿಣ್ಣಣ್ಣ .. ಎಲ್ಲೆಲ್ಲಿಂದ ಎಲ್ಲೆಲ್ಲಿಗೋ ಕರ್ಕಂಡು ಹೋತು ..

    ReplyDelete