Friday 12 October 2012

ಅಪ್ಪಚ್ಚಿ ಹೇಳಿದ ಅಪ್ಪನ ಕತೆ- ಭಾಗ ೨ (ಸುರಂಗದ ಕತೆ)



ನಿನ್ನೆಯ ಕತೆ ಬಹಳ ಹೊತ್ತು ಯೋಚಿಸುವಂತೆ ಮಾಡಿತು. ಕತೆಯೇನೋ ರಮ್ಯವಾಗಿತ್ತು. ಅಂತಹ ಧೈರ್ಯವಿತ್ತೇ? ಯೋಚನೆಯಿತ್ತೇ ಬಾಲ್ಯದಲ್ಲೇ? ಸಾಧ್ಯವಿಲ್ಲವೇನೋ. ಚಿಕ್ಕಪ್ಪ ನನ್ನನ್ನು ರಂಜಿಸುವುದಕ್ಕೆಂದು ಹೇಳಿದ್ದಿರಬಹುದೇ? ಇಲ್ಲ ಕಟ್ಟುಕತೆಯಾಗಿರಬಹುದೇ? ಇದೆಲ್ಲಾ ವಿಚಾರಗಳು ತಲೆಯಲ್ಲಿ ಕೊರೆಯುತ್ತಿದೆ. ನಾಳೆಯೂ ಚಿಕ್ಕಪ್ಪನಿಗೆ ಎಲ್ಲೂ ಹೋಗಲಿಕ್ಕಿರಲಿಕ್ಕಿಲ್ಲ. ಹೋಗಿ ಅವರಮನೆಯಲ್ಲೇ ಕುಳಿತು ಸುಮ್ಮನೆ ಹೀಗೇ ಮಾತನಾಡಿಸಿದರೆ ಮುಂದಿನ ಕೆಲವು ಕತೆಗಳನ್ನಾದರೂ ಹೇಳಬಹುದು. ಹೇಗಾದರೂ ಮಾಡಿ ಇನ್ನೂ ತಿಳಿದುಕೊಳ್ಳಬೇಕು. ಸಾಧ್ಯವಿದ್ದರೆ ಅಂಗಡಿಯ ಜಗ್ಗಣ್ಣನನ್ನೂ ಭೇಟಿಯಾಗಬೇಕು. ಈ ರಜೆ ಮುಗಿಯುವುದರೊಳಗೆ ಒಂದು ಅಧ್ಯಯನ ಮಾಡಿದಂತೆ ಇದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟು ಮಲಗುತ್ತೇನೆ.
--
ಓಹ್, ಬಾ ಮಾರಾಯ. ನಿನ್ನೆ ನೀನು ಕೊಟ್ಟ ಯಕ್ಷಗಾನದ ಸೀಡಿ ನೋಡಿ ನಿದ್ದೆ ಕಡಿಮೆಯಾಯಿತು. ಈಗ ತಿಂಡಿ ಆಗಿ ಹೊರಗೆ ಬರ್ತಾ ಇದ್ದೆ. ತಿಂಡಿ ಆಯಿತೇ ನಿನ್ನದ್ದು?. ನೀನೂ ಎಲೆ ಅಡಿಕೆ ಹಾಕುತ್ತೀಯಲ್ಲಾ? ತೋಟಕ್ಕೆ ಹೋಗಿ ಅಡಕ್ಕೆ ಹೆಕ್ಕುವುದಕ್ಕಿದೆ. ಈ ಹಾಳು ಬಾವಲಿಗಳು ಎಲ್ಲಾ ತಿಂದು ಚಲ್ಲಾಪಿಲ್ಲಿ ಚೆಲ್ಲುತ್ತವೆ.ಬಾವಲಿಗಳಿಗೆ ಟ್ರೈನಿಂಗ್ ಕೊಟ್ಟು ಅಡಕೆ ಕೊಯಿಲು ಮಾಡುವುದಕ್ಕೆ ಆಗುವುದಿಲ್ಲವೇ? ಇನ್ನು ಕೊಯಿಲು ಮಾಡಬೇಕು. ಈ ಸಲ ಇಳುವರಿ ಜಾಸ್ತಿ, ರೇಟು ಕಡಿಮೆ. ಹಾಳಾದ್ದು ಕಲ್ಲಿದ್ದಾಗ ನಾಯಿ ಕಾಣುವುದಿಲ್ಲ ನಾಯಿ ಇದ್ದಾಗ ಕಲ್ಲೇ ಕೈಗೆ ಸಿಗುವುದಿಲ್ಲ. ನಿನಗೆ ಗೊತ್ತಿರಲಿಕ್ಕಿಲ್ಲ,

ಮೊದಲು ಈ ತೋಟ ಇದೆಯಲ್ಲ ಇದರ ೧೫ ಪಟ್ಟು ನಮ್ಮ ತೋಟವಿತ್ತು. ಇದೇ ಅಡಕೆ ಮರಗಳು ಆಗ ಸಣ್ಣವು. ನಾವೇ ಅಡಿಕೆ ಮರದ ಬಟ್ಟಲಿಂದ ನೀರು ಎರೆದು ಇದನ್ನೆಲ್ಲ ಬೆಳೆಸಿದ್ದು ನೋಡು. ಮುಂದೆ ಹರಿದು ಹಂಚಿಹೋದ ತೋಟಗಳನ್ನು ಬೇಲಿಯಾಚೆಯಿಂದ ನೋಡುವಾಗ ನೋವಾಗುತ್ತದೆ. ಇಮಾನ್ ಸೋಜರು ಗದ್ದೆ ಮಾಡುತ್ತಿದ್ದಾರಲ್ಲಾ ಅಲ್ಲಿವರೆಗೆ ನಮ್ಮ ತೋಟ. ನಿನ್ನಪ್ಪನೂ, ದೊಡ್ಡಪ್ಪನೂ ನಾನೂ ಸುಮಾರು ಮೂರು ಸಾಲುಗಳಿಗೆ ನೀರು ಹಾಕಬೇಕಿತ್ತು ದಿನಾ. ಇದೇ ನೀರಿನದಂಡೆ. ಮೊದಲು ಇಮಾನ್ ಸೋಜರ ಮನೆಯ ಹಿಂದೆ ಇದ್ದ ಸುರಂಗದಿಂದ ನೀರು ಬರುತ್ತಿತ್ತು. ಇಲ್ಲೂ ಒಂದು ವಿಶೇಷವಾದ ಕತೆ ಇದೆ. ನಿನಗೆ ಕೇಳಿ ಗೊತ್ತಿರಬೇಕು.!

ಹೇಳು ಚಿಕ್ಕಪ್ಪ. ಇಮಾನ್ ಸೋಜರು ಗೊತ್ತು. ಅವರ ಅಪ್ಪ ಬಾಬುವೂ ಕೇಳಿ ಗೊತ್ತು.

ಓಹೋ. ಬಾಬುವನ್ನೂ ನೆನಪಿದೆಯೇ? ಸರಿ. ಬಾ, ಹೇಗೂ ಇಮಾನ್ ಸೋಜರ ಮನೆಯಿಂದ ಪಂಪಿನ ಸ್ಪಾನರು ತರಲಿಕ್ಕಿದೆ. ಹಾಗೇ ಹೋಗಿ ಬರೋಣ. ಇದೇ ಬಾಬು ಸೋಜರಿದ್ದಾರಲ್ಲ, ಅವರು ಮೊದಲು ನಮ್ಮ ಮನೆಯಲ್ಲಿ ಕೆಲಸಕ್ಕಿದ್ದವರು. ಈಗ ಕೊಡುವಂತೆ ದಿನಕ್ಕೆ ೩೦೦, ೪೦೦ ಕೊಡುವಂತಿಲ್ಲ ಆಗ. ಹೇಳಿದ ಕೆಲಸ ಮಾಡಬೇಕಿತ್ತು, ಹಾಗೆಯೇ ಕೊಟ್ಟದ್ದನ್ನು ತೆಗೆದುಕೊಂಡು ಹೋಗಬೇಕಿತ್ತು. ಮತ್ತೆ ನಮ್ಮ ಹಿರಿಯರು ಮಾಡಿದ್ದೂ ಅದೇ, ಕೊಟ್ಟರೂ ಕೊಡದವರಂತೆ ಸಿಟ್ಟಾಗುತ್ತಾ ಇರುತ್ತಿದ್ದರು. ಕೊಡದೇ ಇದ್ದರೂ ನಾನೇನೂ ಕೊಡಲಿಲ್ಲವೆಂದು ಜಗತ್ತಿಗೆ ಸಾರುತ್ತಿದ್ದರು. ನಮ್ಮ ಅಪ್ಪ, ಅಂದರೆ ನಿಮ್ಮ ಅಜ್ಜ ಏನೂ ಕೊಡುತ್ತಿರಲಿಲ್ಲ. ಆದರೆ ಅಮ್ಮ ಕೊಡುತ್ತಿದ್ದದು ತಿಳಿದು ಸುಮ್ಮನೇ ಇದ್ದರು. ಅಂದರೆ ಚಿವುಟುವುದೂ ತೊಟ್ಟಿಲು ತೂಗುವುದೂ ಎರಡೂ ಕೆಲಸವನ್ನು ಮಾಡುತ್ತಿದ್ದರು.

ನೋಡು ಇದೇ ಈಗ ಇಮಾನ್ ಸೋಜರ ಮನೆ. ಮೊದಲ ಮಗನಿಗೆ ಮದುವೆಯಾಗಿ ಈಗ ಪೇಟೆಯಲ್ಲಿದ್ದಾನೆ. ಎರಡನೇ ಮಗ, ಹೆಂಡತಿ ಮತ್ತೆ ಸೋಜರು ಮಾತ್ರ ಇಲ್ಲಿ. ಸೋಜರು ಮನೆಯಲ್ಲಿದ್ದಂತಿಲ್ಲ, ನಾವು ತೋಟದಲ್ಲೇ ಮುಂದೆ ಹೋಗಿ ಸುರಂಗ ನೋಡಿಕೊಂಡು ಬರುವುದರೊಳಗೆ ಬಂದಾರವರು.

ನೋಡು ಈ ಈಚಲಮರದ ಗುರುತು. ಇಲ್ಲಿ ಈ ಕಲ್ಲಿಂದ ಬಗ್ಗಿ ನೋಡಿದರೆ ಗವ್ವೆನ್ನುವ ಕತ್ತಲೆ ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಮೊದಲು. ಇದೇ ಜಾಗದಲ್ಲಿ ಮೊದಲು ಸಣ್ಣ ಕೆರೆ ಇತ್ತು. ಸುರಂಗದ ಶುದ್ಧ ನೀರು ಹರಿದು ಕೆರೆಯನ್ನು ಸೇರಿ ನಂತರ ನಮ್ಮ ಮನೆಯ ಎದುರಾಗಿ ಹರಿದು ತೋಡು ಸೇರುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ನೀರು. ಮೇಲೆ ರಬ್ಬರಿದೆ ನೋಡು ಅದಕ್ಕೇ.

ಮೊದಲು ನಾವು ಸಣ್ಣದಿದ್ದಾಗ, ದೊಡ್ಡಪ್ಪ, ನಿನ್ನಪ್ಪ, ಜಗ್ಗು, ಎಲ್ಲಾ ಇಲ್ಲಿನ ಖಾಯಂ ಸದಸ್ಯರು. ಸುರಂಗದ ತಂಪು ನೀರು ಈ ಕರಾವಳಿಯ ಬೆಚ್ಚನೆಯ ಬೆವರಿಗೆ ಒಳ್ಳೆಯ ಸಾಂತ್ವನ ಒದಗಿಸುತ್ತಿತ್ತು. ಹಾಗೆಯೇ ಆಡಿ ದಣಿದಾಗ ಇಲ್ಲಿ ಬಂದು ಕುಳಿತು ಕಲ್ಲೆಸೆದೋ ಈಜಿಯೋ ಸಮಯ ಸಾಗಹಾಕುತ್ತಿದ್ದೆವು. ಈಗಲೂ ನೆನೆದರೆ ನಗುಬರುತ್ತಿದ್ದ ವಿಷಯವೆಂದರೆ ಇದೂ ಟಿಪ್ಪು ಸುಲ್ತಾನ್ ಮಾಡಿದ ಸುರಂಗವೆಂದು. ಇಲ್ಲಿಂದ ಹೋದರೆ ಸುಮಾರು ಮೈಲು ದೂರದಲ್ಲಿ ಅದಾವುದೋ ಊರಿಗೆ ತಲುಪುತ್ತದೆ ಎಂಬ ಕತೆ. ಹ್ಹ ಹ್ಹ. ನನಗೂ ಡಿಗ್ರೀ ಮುಗಿಯುವವರೆಗೆ ಇದು ಸತ್ಯವೆಂದೇ ಇತ್ತು.

ಒಂದು ದಿನ ತುಂಬಾ ಬಿಸಿಲು. ರಜಾದಿನ ಬೇರೆ. ಬೆಳಗ್ಗಿನಿಂದ ಮದ್ಯಾಹ್ನದವರೆಗೆ ಆಟವಾಡಿ ಇದೇ ಸುರಂಗದ ಬಳಿಯಲ್ಲಿ ಆಟವಾಡುವುದಕ್ಕೆಂದು ಬಂದಿದ್ದೆವು. ಜಗ್ಗುವೂ ನಿನ್ನಪ್ಪನದೂ ಎಂದಿನಂತೆ ಕೆರೆಯಲ್ಲಿ ಈಜುವ ಪಂದ್ಯ. ನೀನೆಷ್ಟು ಸುತ್ತು ನಾನೆಷ್ಟು ಸುತ್ತು ಎಂದು ಈಜಿ ಈಜಿ ಸುಸ್ತಾದರು. ಶಾಮ ಮತ್ತೆ ಕೇಶವ ಎಂದೂ ತುಂಬಾ ಹೊತ್ತು ನಿಲ್ಲುತ್ತಿರಲಿಲ್ಲ. ಕೇಶವನಿಗಂತೂ ಮನೆ ದೂರವೆಂದು ಬೇಗನೆ ಓಡುತ್ತಿದ್ದ. ಜಗ್ಗು ನಮ್ಮ ಮನೆಯಲ್ಲೇ ಊಟ ಮಾಡಿ, ಬೇಕಾದರೆ ಮೂರು ದಿನ ಇದ್ದು ನಾಡಿದ್ದು ಹೋದರೂ ಯಾರೂ ಏನನ್ನುತ್ತಿರಲಿಲ್ಲ. ಈಗಲೂ ಹಾಗೆಯೇ ಇದ್ದಾನೆ ಬಿಡು.

ಸುಸ್ತಾದವರು ಸುಮ್ಮನಿರುವುದು ಲೋಕದ ರೂಢಿ. ಆದರೆ ಮನಸ್ಸು ಸುಸ್ತಾಗದೇ ಇದ್ದರೆ ಎಂತಹುದನ್ನೂ ದೇಹ ಮಾಡುತ್ತದೆ ಎನ್ನುವುದಕ್ಕೆ ನಮ್ಮಲ್ಲೇ ಎಷ್ಟೋ ಉದಾಹರಣೆಗಳಿರುತ್ತವೆ. ಅದೇ ಹುರುಪು ಅದೇ ಉತ್ಸಾಹದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಾ ಇರಬೇಕಾದರೆ ಸುರಂಗದ ಒಳಗೆ ಇರುವ ಕುತೂಹಲ ಇದೆಲ್ಲದಕ್ಕೂ ಸಾಹಸ ತೋರಿಸಲು ಮುಂದಾಯಿತು. ಜಗ್ಗು ಮತ್ತೆ ನಿನ್ನಪ್ಪ ಇದರಲ್ಲಿ ತುಂಬಾ ಮುತುವರ್ಜಿ ವಹಿಸಿದರು. ಆಗ ಬ್ಯಾಟರಿ ಇಲ್ಲ, ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ಸುರಂಗವೆಂದರೆ ಕತ್ತಲು, ತೋಟದ ಕತ್ತಲು ಎಲ್ಲಾ ಸೇರಿ ಸ್ವಲ್ಪ ಹೆದರಿಕೆ ಉಂಟುಮಾಡತೊಡಗಿತು.

ಏನಿದ್ದರೂ ಹೊರಗೆ ಬರಲಿ ಎಂದು ಮೊದಲು ಕಲ್ಲೆಸೆಯುವುದು. ಸುಮಾರು ಕಲ್ಲೆಸೆದಾದ ಮೇಲೆ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸುರಂಗದೊಳಕ್ಕೆ ಎರಡು ಮೂರು ಮೀಟರಿನಷ್ಟು ಒಳಗೆ ಬಂದೆವು. ನಾನು ಮುಂದೆ ಹೋಗಲಿಕ್ಕಾಗಲಿಲ್ಲ, ಅದ್ಯಾವುದೋ ಮೊನಚು ಕಲ್ಲು ತಾಗಿ ಕಾಲ್ಬೆರಳಿಗೆ ಏಟಾಗಿ ನಾನು ಪುನಃ ಹೊರಗೆ ಬಂದು ಕುಳಿತೆ. ಜಗ್ಗು ಮತ್ತೆ ನಿನ್ನಪ್ಪ ಒಳಗೆ ಹೋದರು. ಸಾಧಾರಣ ಇನ್ನೆರಡು ಅಥವಾ ಮೂರು ಮೀಟರು ಹೋಗಿರಬೇಕು ಅಷ್ಟರಲ್ಲಿ ಅದ್ಯಾವುದೋ ಕಾಡು ಹಂದಿ ಅರಚುತ್ತಾ ಹೊರಗೆ ಬಂತು. ನಾನು ಹೆದರಿ ಕೆರೆಗೆ ಹಾರಿದೆ.

ಇದಾದ ಐದಾರು ನಿಮಿಷದಲ್ಲಿ ನಿನ್ನ ಅಪ್ಪ ಜಗ್ಗುವನ್ನು ಹೇಗೋ ಹೊತ್ತುಕೊಂಡೋ ಎಳೆದುಕೊಂಡೋ ಹೊರಗೆ ಬಂದ. ಜಗ್ಗುವಿನ ಕಾಲಿನ ಮಾಂಸ ಕಿತ್ತು ಬಂದಂತಿತ್ತು. ಜೊತೆಗೇ ಮೂಗು ಒಡೆದು ನೆತ್ತರು ಬರುತ್ತಿತ್ತು. ಬಂದವನೇ ಜೋರಾಗಿ ಅಳತೊಡಗಿದೆ. ನಾನು ಓಡಿ ಹೋಗಿ ಬಾಬು ಸೋಜರನ್ನು ಕರೆದುಕೊಂಡು ಬಂದೆ.

ಬಾಬು ಸೋಜರು ಏನೂ ಹೇಳದೇ ಮನೆಗೆ ಎತ್ತಿಕೊಂಡು ನಡೆದರು. ನಾವಿಬ್ಬರೂ ಅಪರಾಧಿಗಳಂತೆ ಹಿಂದೆ. ಮತ್ತೆ ನಮ್ಮನ್ನು ಅವರೇ ಸಮಾಧಾನ ಮಾಡಿ ಜಗ್ಗುವಿನ ಕಾಲಿಗೆ ಕಟ್ಟು ಹಾಕಿ, ಕಳುಹಿಸಿದರು. ಜಗ್ಗು ಸುಮಾರು ೧೦-೧೫ ದಿನ ಅಲ್ಲಿಯೇ ಇದ್ದ. ನಂತರ ಸುಮಾರು ನಾಲ್ಕು ತಿಂಗಳ ವರೆಗೆ ಜಗ್ಗು ನಡೆದಾಡುವುದು ಸಾಧ್ಯವಾಗಲೇ ಇಲ್ಲ.

ಕೊನೆಗೆ ನಿನ್ನಪ್ಪನೇ ಒಳಗಾದ ಕತೆ ಹೇಳಿದ. ಒಳಗೆ ಹೋದಂತೆ ಕತ್ತಲೂ ಬೆಳಕಾಗುತ್ತದಂತೆ. ಹಾಗೆಯೇ ಹೊರಗೆ ಅಸಾಧ್ಯವಾಗಿದ್ದ ಸುರಂಗ ಒಳಸರಿದಂತೆ ಸ್ವಲ್ಪ ಸುಲಭವೆನಿಸಿತು. ಸುರಂಗದ ಬಾಯಿ ಇಷ್ಟೇ ಇದ್ದರೂ ಒಳಗೆ ಸ್ವಲ್ಪ ವಿಶಾಲವಂತೆ. ಮುಂದುವರೆಯುತ್ತಿದ್ದಂತೆ ಎಲೆಬಾವಲಿ ಇತ್ಯಾದಿ ಓಡಿಸಿ, ಕೆಸರಿನ ಕಾಲುಗಳನ್ನೆತ್ತೆತ್ತಿ ಸಾಗುತ್ತಾ ತಿಳಿಯದೇ ನಿನ್ನಪ್ಪ ಹಂದಿಯ ಸಂಸಾರದ ಮೇಲೆ ಕಾಲಿಟ್ಟರಂತೆ. ಅದೆಲ್ಲಿತ್ತೋ ಏನೋ, ದೊಡ್ಡ ಕೋರೆ ಹಲ್ಲಿನ ಹಂದಿಯೊಂದು ಓಡಿಬಂದು ಜಗ್ಗುವಿಗೆ ಹೊಡೆಯಿತಂತೆ. ಆ ಘಳಿಗೆ ಏನುಮಾಡುವುದೆಂದು ತೋಚದ ನಿನ್ನಪ್ಪ ಯಾವುದೋ ಕೈಗೆ ಸಿಕ್ಕ ಕಲ್ಲನ್ನೇ ಹಂದಿಗೆ ಹೊಡೆದ. ಹಂದಿಗೆ ಏಟಾಗಿ ಅದು ಓಡಿ ಹೊರಗೆ ಬಂತು. ನಿನ್ನಪ್ಪ ಬಿದ್ದ ಜಗ್ಗುವನ್ನೆತ್ತಿಕೊಂಡು ಬಂದ.

ಜಗ್ಗುವಿಗೆ ಹಂದಿಯ ಏಟೆಂದು ಯಾರಿಗೂ ಗೊತ್ತಾಗದಂತೆ ಕಟ್ಟು ಕಟ್ಟಿದ ಮಹಾನುಭಾವ ಬಾಬು. ಇವತ್ತಿನವರೆಗೂ ಗುಟ್ಟಾಗಿಟ್ಟು ಈಗ ನಿನ್ನಲ್ಲಿ ಹೇಳಿದೆ. ಜಗ್ಗುವಿನಂಗಡಿಗೆ ಹೋಗಿ ಹೇಳಿಬಿಡಬೇಡ ಮತ್ತೆ. ಇಮಾನ್ ಸೋಜರು ಬಂದಿರಬೇಕು ಈಗ, ಹೋಗೋಣ ನಡೆ.

೧೨-೧೦-೧೨

10 comments:

  1. ಸುರಂಗ ಇನ್ನೂ ಇದ್ದರೆ ಒಂಸತ್ತಿ ಹೋಗಿ ನೋಡುವನೋ.. ಎಂತ ಇದ್ದು ಹೇಳಿ..:)

    ReplyDelete
  2. ಸುರಂಗ ಮತ್ತು ಹಂದಿ ಮೆಟ್ಟಿದ ಕಥೆ ಚೆನ್ನಾಗಿದೆ.

    ಮುಂದುವರೆಸಿರಿ.

    ReplyDelete
  3. ಮುಂದಿನ ಭಾಗದ ನಿರೀಕ್ಷೆಯಲ್ಲಿ... :))

    ReplyDelete
  4. :) ಚೆನ್ನಾಗಿದೆ... ಮುಂದಿನ ಭಾಗ ? :)

    ReplyDelete
  5. nice story, beautiful writing. keep it up.

    ReplyDelete
  6. nice story. good

    ReplyDelete
  7. sumaar saahasa madidvalo... ondalla eradalla saahasagaathe.. :)

    ReplyDelete